ಕನ್ನಡಪ್ರಭ ವಾರ್ತೆ ಮುಗಳಖೋಡ

ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳಿವೆ, ತಮ್ಮ ಮಕ್ಕಳನ್ನು ದಾಖಲಾತಿ ಮಾಡಿ, ಇಲ್ಲಿನ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಬೆಳಸಿ, ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲು ಗ್ರಾಮದ ಹಿರಿಯರು, ಮುಖಂಡರು ಪಾಲಕರು ಕೈ ಜೋಡಿಸಿ ಎಂದು ನಿವೃತ್ತ ದೈಹಿಕ ಶಿಕ್ಷಣ ಜಿಲ್ಲಾ ಪರಿವೀಕ್ಷಕ ಡಿ.ಎಸ್.ಡಿಗ್ರಜ ಹೇಳಿದರು.

ಸಮೀಪದ ಬೆಂಡವಾಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ನಮ್ಮೂರ ಸರಕಾರಿ ಶಾಲೆಯ ಸುಮಾರು ವರ್ಷಗಳಿಂದ ಶಾಲಾ ಅಭಿವೃದ್ಧಿ ಸಮಿತಿ ಇಲ್ಲದೆ ನಡೆಯುತ್ತಿದ್ದು, ಬರುವ ಜೂನ ತಿಂಗಳ ಒಳಗಾಗಿ ಎಲ್ಲರೂ ಒಗ್ಗಟ್ಟಾಗಿ, ಪಕ್ಷಾತೀತವಾಗಿ ಶಾಲಾ ಅಭಿವೃದ್ಧಿ ಸಮಿತಿಯನ್ನು ರಚಿಸಬೇಕು ಎಂದರು.

ಬೆಂಡವಾಡ ವಿರಕ್ತ ಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಶಿಕ್ಷಕ ಸಿದ್ದು ಖೇತಗೌಡರ ಬಹುಮಾನ ವಿತರಿಸಿದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾ ದುಪದಾಳೆ, ಹಿರಿಯ ಸಿದ್ರಾಮ ಪೂಜೆರಿ, ಅಪ್ಪು ಬಾನೆ, ಸಿದ್ಲಿಂಗ ಚೌಗಲಾ, ತುಕಾರಾಮ ಕಿರಣಗಿ, ಸಿಆರ್‌ಪಿ ಸದಾಶಿವ ಕೊಳವಿ, ಮುಖ್ಯಗುರು ಪ್ರಕಾಶ ಪೂಜೇರಿ, ಸುಜಾತಾ ನ್ಯಾಮಗೌಡ, ಸಿದ್ದು ಖೇತಗೌಡರ, ಎಸ್.ಎಸ್.ಪಾಟೀಲ, ಎಸ್.ಐ.ಲಟ್ಟೆ, ಅರ್.ಕೆ.ಲಮಾಣಿ, ಲಕ್ಷ್ಮೀ ಜಿಡ್ಡಿಮನಿ, ವಿಠ್ಠಲ ಸನದಿ ಹಾಗೂ ಗ್ರಾಮದ ಮುಖಂಡರು, ಹಳೇಯ ವಿದ್ಯಾರ್ಥಿಗಳು ಇದ್ದರು. ಪ್ರಕಾಶ ಪೂಜೇರಿ ಸ್ವಾಗತಿಸಿದರು, ರವಿ ನಿಪ್ಪಾಣಿ ನಿರೂಪಿಸಿ, ವಂದಿಸಿದರು.