ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಉತ್ತರ ಕರ್ನಾಟಕದ ಮಹತ್ವದ ಬ್ಯಾರೇಜ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಹಿಪ್ಪರಗಿ ಬ್ಯಾರೇಜ್ ಸರ್ಕಾರದಿಂದ ಕಡೆಗಣನೆಗೊಳಪಟ್ಟಿತ್ತು. ಜನವರಿ ತಿಂಗಳಲ್ಲಿನ ಗೇಟ್ ನಂ.೨೨ರ ಅವಘಡದಿಂದ ಎಚ್ಚೆತ್ತ ಸರ್ಕಾರ ಇದೀಗ ಪರವೀಕ್ಷಣಾ ತಂಡವೊಂದನ್ನು ಬ್ಯಾರೇಜ್ ನಿರ್ಮಾಣದ ನಂತರ ೨೦ ವರ್ಷಗಳ ಬಳಿಕ ಮೊದಲ ಬಾರಿಗೆ ವೀಕ್ಷಣೆಗೆ ಕಳಿಸಿದ್ದು, ತಂಡದ ವೀಕ್ಷಣೆ ಮಾಡಿ ಅಮೂಲಾಗ್ರ ಬದಲಾವಣೆಗೆ ಸಲಹೆ ನೀಡಿದೆ.

ಅಣೆಕಟ್ಟು ಪರಿವೀಕ್ಷಣಾ ತಂಡದ ಮುಖ್ಯಸ್ಥ ಡಾ.ಶರದ್ ಜೋಷಿ ಪತ್ರಿಕೆಯೊಂದಿಗೆ ಮಾತನಾಡಿ, ಹಿಪ್ಪರಗಿ ಬ್ಯಾರೇಜ್‌ನ ಸಂಪೂರ್ಣ ಸಮಸ್ಯೆಗಳ ಕುರಿತು ವೀಕ್ಷಣೆ ನಡೆಸಲಾಗುತ್ತಿದೆ. ಇಡೀ ದಿನ ಅಧಿಕಾರಿಗಳ ತಂಡದೊಂದಿಗೆ ಸಮಾಲೋಚನೆ ನಡೆಸುವುದರೊಂದಿಗೆ ಹಿಪ್ಪರಗಿ ಬ್ಯಾರೇಜ್‌ ಸುರಕ್ಷತೆ ಹಾಗೂ ಅವಶ್ಯವಿರುವ ಸುಧಾರಿತ ಸಾಮಗ್ರಿಗಳ ಅಳವಡಿಕೆಯೊಂದಿಗೆ ಬ್ಯಾರೇಜ್ ನಿರ್ವಹಣೆ ಕುರಿತು ಮಾಹಿತಿ ಪಡೆಯಲಿದೆ ಎಂದು ತಿಳಿಸಿದರು.

ಈಗಾಗಲೇ ಗೇಟ್ ನಂ.೨೨ರ ಪೆನಲ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ೨೧ ಗೇಟ್‌ಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಅವಘಡ ಹಾಗೂ ಅನಾಹುತಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸುವಲ್ಲಿ ಇಂದಿನ ಸಭೆ ಮಹತ್ತರ ಪಾತ್ರ ವಹಿಸಲಿದೆ ಎಂದರು.

ಪ್ರಥಮ ಪರಿವೀಕ್ಷಣೆ: ಹಿಪ್ಪರಗಿ ಬ್ಯಾರೇಜ್ ನಿರ್ಮಾಣವಾಗಿ ೨೧ ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಹಿಪ್ಪರಗಿ ಬ್ಯಾರೇಜ್‌ನ ಸುರಕ್ಷತಾ ಬಗ್ಗೆ ಬೆಂಗಳೂರಿನಿಂದ ಪರಿವೀಕ್ಷಣಾ ತಂಡ ಆಗಮಿಸಿದ್ದ ಉದಾಹರಣೆಗಳಿಲ್ಲ. ಇದೇ ಮೊದಲ ಬಾರಿಗೆ ತಂಡ ಆಗಮಿಸಿ ಇಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆಯುವ ಮೂಲಕ ಆಯಾ ಇಲಾಖಾ ಅಧಿಕಾರಿಗಳಿಗೆ ಪೂರಕ ಮಾಹಿತಿಯೊಂದಿಗೆ ಬ್ಯಾರೇಜ್‌ನ ನಿರ್ವಹಣೆ ಬಗ್ಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದರು.


ಈ ವೇಳೆ ಮುಖ್ಯ ಅಭಿಯಂತರ ಎ.ಸಿ. ನಾಗರಾಜ್, ಕೆ.ಜಿ. ಮಹೇಶ, ಬಿ.ಆರ್. ರಾಠೋಡ, ಪ್ರವೀಣ ಹುಣಸಿಕಟ್ಟಿ, ಅಭಿಯಂತರ ವಿ.ಎಸ್. ನಾಯಕ ಸೇರಿದಂತೆ ಅನೇಕ ಅಧಿಕಾರಿಗಳ ತಂಡ ಇತ್ತು.