ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರೇಮಿಗಳಿಬ್ಬರು ಒಂದೇ ಸಮಯಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.

ಆಸಂಗಿ ಗ್ರಾಮದ ಕಾರ್ತಿಕ ಚಿನ್ನಪ್ಪ ನಾಯಕ (೨೦) ಹಾಗೂ ಬನಹಟ್ಟಿ ಕೆಎಚ್‌ಡಿಸಿ ಕಾಲೋನಿಯ ಪವಿತ್ರಾ ರಾಜಶೇಖರ ವಂಟಿ (೧೯) ಮೃತರು. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಡೆದಿದ್ದೇನು? ಖಾಸಗಿ ಟೆಕ್ಸಟೈಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪವಿತ್ರಾ ಹಾಗೂ ಕಾಲೇಜು ಓದುತ್ತಿದ್ದ ಕಾರ್ತಿಕ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲೂ ನಿಶ್ಚಯಿಸಿದ್ದರು. ಎರಡು ಕಡೆಯ ಮನೆಯವರೂ ಒಪ್ಪಿಗೆ ನೀಡಿದ್ದರು ಎಂದು ತಿಳಿದು ಬಂದಿದೆ.

ಕಾರ್ತಿಕ ಮಂಗಳವಾರ ಸಂಜೆ ಪ್ರಿಯತಮೆ ಪವಿತ್ರಾ ಮನೆಗೆ ಹೋಗಿದ್ದು ಯಾವುದೋ ವಿಷಯಕ್ಕೆ ಗಲಾಟೆ ಮಾಡಿದ್ದಾನೆ. ಇದರಿಂದ ಕೆರಳಿದ ಹುಡುಗಿ ಮನೆಯವರು ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಬೆದರಿಸಿದ್ದಾರೆ. ಕಾರ್ತಿಕ ಮನೆಯವರಿಗೆ ವಿಷಯ ಗೊತ್ತಾಗಿ ಸಂಧಾನ ಮಾತುಕತೆಯಾಗಿದೆ.


ಬುಧವಾರ ಬೆಳಗ್ಗೆ ಪವಿತ್ರಾ ಮನೆಯಲ್ಲಿ ನೀರು ತುಂಬುತ್ತಿದ್ದಾಗ ಫೋನ್ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿ ಮಾತನಾಡಿದ ನಂತರ ಅಡುಗೆ ಮನೆಯ ಕೋಣೆಯಲ್ಲಿ ಸುಮಾರು ೭.೩೦ರ ಹೊತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಷಯ ತಿಳಿದ ಕಾರ್ತಿಕ ಸಹ ೮.೩೦ರ ಸುಮಾರಿಗೆ ಆಸಂಗಿಯ ಅಸ್ಕಿ ಹತ್ತಿರದ ಸರಸ್ವತಿ ತೋಟದ ಸಮೀಪ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಪವಿತ್ರಾ ರಬಕವಿಯ ಖಾಸಗಿ ಟೆಕ್ಸಟೈಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಕಾರ್ತಿಕ ಕಾಲೇಜು ಓದುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಯಾವ

ಪ್ರೇಮಿಗಳ ಇಂತಹ ನಿರ್ಧಾರಕ್ಕೆ ನಿಖರವಾದ ಕಾರಣವೇನು ಎಂಬುದು ನಿಗೂಢವಾಗಿದ್ದು, ಪೊಲೀಸರ ವಿಚಾರಣೆಯ ನಂತರಷ್ಟೇ ಸತ್ಯಾಂಶ ಹೊರಬರಬೇಕಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪಿಎಸ್‌ಐ ಸಂಜಯ ಧರಿಗೋಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಬನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ದೇಹದ ಪ್ರಮುಖ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.