ವಿಜಯಪುರ: ಪ್ರವಾಸಕ್ಕೆಂದು ಬಂದಿದ್ದ ಓರ್ವ ಬಾಲಕ, ಇಬ್ಬರು ಯುವಕರು ನೀರು ಪಾಲಾದ ಘಟನೆ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಬುಧವಾರ ಸಂಜೆ ಜರುಗಿದೆ.

ಬೆಂಗಳೂರಿನ ಆರ್.ಟಿ ನಗರದ ಮಹಮ್ಮದ ಹಯಾತ್ (12), ಹೈದರಪಾಶಾ (32) ಹಾಗೂ ಅಬ್ದುಲ್ ಖುದ್ದುಸ್ (35) ಮೃತರು. ಬೆಂಗಳೂರಿನಿಂದ ಕುಟುಂಬ ಸಮೇತ 14 ಜನ ಪ್ರವಾಸಕ್ಕೆಂದು ವಿಜಯಪುರಕ್ಕೆ ಬಂದಿದ್ದ ವೇಳೆ ಭೂತನಾಳ ಕೆರೆ ವೀಕ್ಷಣೆ ಮಾಡಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಮೊದಲು ಬಾಲಕ ಮಹಮ್ಮದ ಹಯಾತ್ ನೀರಿಗೆ ಇಳಿದಿದ್ದು, ಈ ವೇಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆತನ ರಕ್ಷಣೆಗೆ ಧಾವಿಸಿದ ಅಬ್ದುಲ್ ಖುದ್ದುಸ್ ಹಾಗೂ ಹೈದರಪಾಶಾ ಸಹ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆದರ್ಶ ನಗರ ಪೊಲೀಸರು ಮೂವರ ಶವಗಳನ್ನು ನೀರಿನಿಂದ ಹೊರ ತೆಗೆದು, ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.