ಬೆಳಗಾವಿ: ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿ ದುರಂತ ಅಂತ್ಯ ಕಂಡ ಯಲ್ಲಪ್ಪ ಗುಂಡ್ಯಾಗೋಳ ಮೃತದೇಹದ ಅವಶೇಷಗಳನ್ನು ಕೈ ಚೀಲದಲ್ಲಿ ತುಂಬಿಕೊಂಡು ಕಣ್ಣೀರಿಡುತ್ತ ತಂದೆ ಸಣ್ಣಗೌಡ ಅಂತ್ಯಕ್ರಿಯೆಗೆ ತೆರಳಿದರು.
ಮರಣೋತ್ತರ ಪರೀಕ್ಷೆಯ ಬಳಿಕ ಯಲ್ಲಪ್ಪನ ಮೃತದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸಂತೆಗೆ ಒಯ್ಯುವ ಕೈ ಚೀಲದಲ್ಲೇ ಮಗನ ಮೃತದೇಹದ ಭಾಗಗಳನ್ನು ತೆಗೆದುಕೊಂಡು ಕಣ್ಣೀರು ಹಾಕುತ್ತ ತಂದೆ ಅಂತ್ಯಕ್ರಿಯೆಗೆ ಹೊರಟಿರುವ ದೃಶ್ಯ ಕರುಳು ಹಿಂಡುವಂತಿತ್ತು.
ಪಿಯುಸಿ ಓದಿದ್ದ ಯಲ್ಲಪ್ಪ ಸ್ನೇಹಂ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಕೇವಲ 4 ತಿಂಗಳಾಗಿತ್ತು. ಆದರೆ, ಅಗ್ನಿ ದುರಂತದಲ್ಲಿ ಅಂತ್ಯ ಕಂಡಿದ್ದಾರೆ. ಮನೆ ಮಗನನ್ನೇ ಕಳೆದುಕೊಂಡ ತಂದೆ, ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.