ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಂದುಗಳ ಅತಿ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬದ ತಯಾರಿ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಗುರುವಾರ ಜೋರಾಗಿತ್ತು. ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜನಜಂಗುಳಿ ಉಂಟಾಗಿತ್ತು. ಬಟ್ಟೆ ಅಂಗಡಿ, ಅಲಂಕಾರಿಕ ವಸ್ತುಗಳ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಸಂಜೆ ಹೊತ್ತಿಗೆ ಗ್ರಾಹಕರು ಸಲೀಸಾಗಿ ನಡೆದು ಹೋಗಲು ಸಹ ಸಾಧ್ಯವಾಗದಷ್ಟು ಮಾರುಕಟ್ಟೆ ಗ್ರಾಹಕರು ದಾಂಗುಡಿ ಇಟ್ಟು ಖರೀದಿಯಲ್ಲಿ ತೊಡಗಿದ್ದರು.ಕಬ್ಬು, ಬಾಳೆದಿಂಡು, ಹೂವು-ಹಣ್ಣು, ತಳಿರು, ತೋರಣ ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ, ಗ್ರಾಹಕರ ಖರೀದಿಯಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. 5 ಕಬ್ಬಿಗೆ ₹70-80, ಎರಡು ಬಾಳೆದಿಂಡಿದೆ ₹50-80, ಬೂದು ಕುಂಬಳಕಾಯಿ-100, ಐದು ತರದ ಹಣ್ಣುಗಳಿಗೆ ₹60-70, ಚೆಂಡು ಹೂವು ಕೆಜಿಗೆ ₹150, ಸೇವಂತಿಗೆ ಕೆಜಿಗೆ ₹200, ಸೇಬಿಗೆ ಕೆಜಿಗೆ ₹100, ಬಾಳೆಹಣ್ಣು ಡಜನ್ಗೆ ₹50ಕ್ಕೆ ಮಾರಾಟವಾದವು.ಅಲಂಕಾರಿಕ ವಸ್ತುಗಳಾದ ಆಕಾಶ ಬುಟ್ಟಿ, ಪ್ಲಾಸ್ಟಿಕ್ ಮಾವಿನ ತೋರಣ, ಹಣತೆ, ಬಣ್ಣಬಣ್ಣದ ರಂಗೋಲಿ ಮತ್ತಿತರ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಪಟಾಕಿಗಳ ಖರೀದಿಯೂ ಜೋರಾಗಿತ್ತು. ಚಿನ್ನಾಭರಣ ಅಂಗಡಿಗಳು, ಹೋಟೆಲ್ಗಳು, ಇಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲೂ ಗ್ರಾಹಕರ ದಟ್ಟಣೆ ಕಂಡುಬಂತು. ವಾಹನಗಳು ಅದರಲ್ಲೂ ದ್ವಿಚಕ್ರವಾಹನಗಳ ಷೋ ರೂಂಗಳಲ್ಲಿ ಜನಜಾತ್ರೆ ಸೇರಿತ್ತು. ಶನಿವಾರ ಪಾಢ್ಯದ ದಿನ ಮನೆಗೆ ಹೊಸ ವಾಹನ ತೆಗೆದುಕೊಂಡು ಹೋಗಲು ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂತು. ಈ ಬಾರಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ಪ್ರಮುಖವಾಗಿ ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬಂತು. ಈ ಬಾರಿ ಮಾರುಕಟ್ಟೆಯಲ್ಲಿ ಮಹಿಳೆಯರು ಹೆಚ್ಚಾಗಿ ಕಂಡುಬಂದರು. ಆಕಾಶಬುಟ್ಟಿಗಳ ಖರೀಯೂ ಜೋರಾಗಿತ್ತು. ಚೀನಾದ ಪ್ಲಾಸ್ಟಿಕ್ ಹಣತೆಗಳು, ಆಕಾಶ ಬುಟ್ಟಿಗಳ ಭರಾಟೆಯ ಮಧ್ಯೆಯೂ ದರ ಹೆಚ್ಚಾಗಿದ್ದರೂ ಮಣ್ಣಿನ ಹಣತೆಗಳು, ಬಿದಿರು-ಬಣ್ಣದ ಕಾಗದ ಬಳಿಸಿ ತಯಾರಿಸಿದ ಸಾಂಪ್ರಾಯಿಕ ಆಕಾಶಬುಟ್ಟಿಗಳಿಗೂ ಬೇಡಿಕೆ ಕಂಡುಬಂತು.ಸಿಡಿಮದ್ದುಗಳ ಮಾರಾಟ ನಿಷೇಧ:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೇ ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ.
ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳ ಸುತ್ತಮುತ್ತ ಶಬ್ಧ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆ ನಿಷೇಧಿಸಿದ್ದು, ಹಸಿರು ಪಟಾಕಿಯ ಚಿಹ್ನೆ ಇರುವ ಹಾಗೂ ಕ್ಯೂ ಆರ್ ಕೊಡ್ ಇರುವಂತ ಪಟಾಕಿಗಳನ್ನು ಮಾತ್ರ ಬಳಸಲು ಅವಕಾಶವಿದೆ. ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿ ಆಗಿರುವುದಿಲ್ಲ. ಅಂತಹವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆ ಅನುಸಾರ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುವುದು, ಸಾರ್ವಜನಿಕರು ಇದಕ್ಕೆ ಸಹಕರಿಸಲು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.ಟ್ರಾಫಿಕ್ ಕಿರಿಕಿರಿ: ಮಾರುಕಟ್ಟೆಯಲ್ಲಿ ಜನರು ನಡೆದಾಡಲಾಗದಷ್ಟು ಜನದಟ್ಟಣೆ ಇದ್ದರೂ ಪೊಲೀಸರು ಕಾರು ಹಾಗೂ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸದ್ದರಿಂದ ಸಂಜೆ ವೇಳೆ ಮಾರುಕಟ್ಟೆಯ ಪ್ರಮುಖ ರಸ್ತೆಗಳಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಜನರು ಪರದಾಡುವಂತಾಯಿತು.