ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಮಾವೇಶ, ದತ್ತಿ ಉಪನ್ಯಾಸ
ದಂತ ವೈದ್ಯಕೀಯ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಹೊಸ ಆವಿಷ್ಕಾರದೊಂದಿಗೆ ಬದಲಾವಣೆ ಕಾಣುತ್ತಿದ್ದು, ನೂತನ ತಂತ್ರಜ್ಞಾನವು ಲ್ಯಾಬೊರೇಟರಿ, ಆಸ್ಪತ್ರೆಗಳಲ್ಲೂ ಶೀಘ್ರವಾಗಿ ಪ್ರವೇಶಿಸಿದೆ. ದಂತ ವೈದ್ಯಕೀಯ ಕ್ಲಿನಿಕ್ಗಳನ್ನು ದಂತ ವೈದ್ಯಕೀಯ ಆಸ್ಪತ್ರೆಗಳನ್ನಾಗಿ ಬದಲಾಯಿಸಲಾಗುತ್ತಿದ್ದು, ರೋಗಿಗಳನ್ನು ಆಕರ್ಷಿಸುವಲ್ಲಿ ತಂತ್ರಜ್ಞಾನದೊಂದಿಗೆ ಅನುಭವ, ಸಂಶೋಧನೆ,ಅಧ್ಯಯನದೊಂದಿಗೆ ವೈದ್ಯರೂ ಬದಲಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅಭಿಪ್ರಾಯಪಟ್ಟರು.ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾಗಿರುವ ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ನ 40 ವರ್ಷಗಳ ಶ್ರೇಷ್ಠತೆ ಸಂಭ್ರಮದ ಅಂಗವಾಗಿ ಅವಿಷ್ಕಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮತ್ತು ಪ್ರೊ.ಡಾ.ಎನ್.ಶ್ರೀಧರ್ ಶೆಟ್ಟಿ ಹನ್ನೊಂದನೇ ವರ್ಷದ ದತ್ತಿ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಟ್ಟೆ ಸಮೂಹ ಸಂಸ್ಥೆ ಗಳು ಕೆ. ಎಸ್ಎಸ್ ಹೆಗ್ಡೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಹಾಗೂ ಏ. ಬಿ ಶೆಟ್ಟಿ ದಂತವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು ಅಪ್ರತಿಮ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ಸಣ್ಣ ಕಟ್ಟಡಗಳಿಂದ ಆರಂಭವಾದ ಈ ಮಹಾ ಸಂಸ್ಥೆ, ಇಂದು ಅನೇಕ ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ. ಇಂದು ವಿನಯ ಹೆಗ್ಡೆಯವರ ನಾಯಕತ್ವದ ಹಾಗೂ ಮಾರ್ಗದರ್ಶನದಲ್ಲಿ ನಿಟ್ಟೆ ಅಸಾಮಾನ್ಯ ಬೆಳವಣಿಗೆಯನ್ನು ಕಂಡಿದೆ ಎಂದು ಸಂಸ್ಥೆಯ 40 ವರ್ಷದ ಪಯಣವನ್ನು ಸ್ಮರಿಸಿದರು.ದಂತ ವೈದ್ಯಕೀಯ ಕಾಲೇಜಿನ ವಿಶ್ರಾಂತ ಡೀನ್ ಡಾ.ಎನ್. ಶ್ರೀಧರ್ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ ಇಂದು ದೇಶದ ಅತ್ಯಂತ ಸ್ಮರಣೀಯ ಮತ್ತು ಪರಿಣಾಮಕಾರಿ ಸಂಸ್ಥೆಗಳಲ್ಲಿ ಒಂದಾಗಿ ಇದು ಗುರುತಿಸಿಕೊಂಡಿದೆ. ಈ ಸಂಸ್ಥೆಯಿಂದ ಅನೇಕ ವಿನಯಶೀಲ ಹಾಗೂ ಮಾನವೀಯ ವೃತ್ತಿಪರರು ವೈದ್ಯರು ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಮ್ಮೇಳನ ಆಯೋಜನಾ ಅಧ್ಯಕ್ಷೆ ಹಾಗೂ ಡೀನ್ ಪ್ರೊ.ಮಿತ್ರಾ ಎನ್. ಹೆಗ್ಡೆ ಸ್ವಾಗತಿಸಿದರು. ಡಾ. ಅಮರಶ್ರೀ ಶೆಟ್ಟಿ ಸ್ವಾಗತಿಸಿದರು. ಸಹ ಸಂಘಟನಾ ಕಾರ್ಯದರ್ಶಿ ಡಾ.ಪ್ರತೀಶ್ ಶೆಟ್ಟಿ ವಂದಿಸಿದರು.