ಗದಗ: ನಗರದಲ್ಲಿ ನಡೆದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳವನ್ನು ಗದುಗಿನ ಜನತೆ ಅತ್ಯಂತ ಭಕ್ತಿಪೂರ್ವಕವಾಗಿ ಯಶಸ್ವಿಗೊಳಿಸಿದ್ದಾರೆ. ಈ ಸೇವಾ ಕಾರ್ಯದ ಫಲದಿಂದ ಲೋಕಲ್ಯಾಣವಾಗಲಿದೆ ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ತಿಳಿಸಿದರು.ನಗರದಲ್ಲಿ ಅತಿರುದ್ರಯಾಗವನ್ನು ಯಶಸ್ವಿಗೊಳಿಸಿದ ಗುರೂಜಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದಲ್ಲಿ ಅತಿರುದ್ರಯಾಗ ಯಶಸ್ವಿಯಾಗಲು ಇಲ್ಲಿನ ಜನತೆ ಹಾಗೂ ಸೇವಾ ಕಾರ್ಯಕರ್ತರು ತನು- ಮನ- ಧನದಿಂದ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ವ್ಯರ್ಥವಾಗುವುದಿಲ್ಲ. ಈ ಮಹಾಯಜ್ಞದಲ್ಲಿ ಕಳೆದ ಎಂಟು ದಿನಗಳವರೆಗೆ ನಡೆದ ಮಹಾಯಾಗದ ಭಸ್ಮವನ್ನು 60 ದಿನಗಳ ನಂತರ ಪ್ರಯಾಗರಾಜದಲ್ಲಿ, ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಮತ್ತು ಗದುಗಿನ ಜನತೆಗೂ ನೀಡಲಾಗುವುದು ಎಂದರು. ಇಲ್ಲಿ ಜರುಗಿದ ಮಹಾಯಾಗದಿಂದ ಮತ್ತು ಭಕ್ತರು ತೋರಿದ ಪ್ರೀತಿಯು ನನ್ನನ್ನು ಕಟ್ಟಿ ಹಾಕಿರುವುದರಿಂದ ಗದಗ ನಗರವನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಆದರೂ ದೈವಿಚ್ಛೆಯಂತೆ ಮುಂದಿನ ಸೇವಾ ಕಾರ್ಯಗಳನ್ನು ನಡೆಸಬೇಕಾಗಿರುವುದರಿಂದ ನಾನು ಹೋಗುವುದು ಅನಿವಾರ್ಯವಾಗಿದೆ. ಕಳೆದ 10 ವರ್ಷಗಳಿಂದ ನಾನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಮಠವನ್ನು ನಿರ್ಮಿಸಿ ನೆಲೆಸಿದ್ದೇನೆ. ಭಕ್ತರು ನಮ್ಮ ಭೇಟಿಯಾಗಲು ಅಲ್ಲಿಗೆ ಬರಬಹುದು ಎಂದರು.ಸಂಭ್ರಮದ ಚನ್ನವೀರ ಶರಣರ ಮಹಾರಥೋತ್ಸವ
ಡಂಬಳ: ಹೋಬಳಿಯ ಜಂತಲಿ ಶಿರೂರ ಗ್ರಾಮದಲ್ಲಿ ಸಾವಿರಾರು ಭಕ್ತರ ಸಂಭ್ರಮ ಹಾಗೂ ಚನ್ನವೀರ ಶರಣರ ಮಹಾರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.ಡಂಬಳ ಹೋಬಳಿಯ ಸುಕ್ಷೇತ್ರ ಜಂತಲಿ- ಶಿರೂರಿನ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ, ಕಲಬುರಗಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಕುಂಭೋತ್ಸವ, 1008 ದೀಪೋತ್ಸವ, 16 ಜೋಡಿ ವಧು- ವರರ ಸಾಮೂಹಿಕ ವಿವಾಹ ಮಹೋತ್ಸವದ ಕಾರ್ಯಗಳು ದಿನವಿಡಿ ಜರುಗಿದವು.ಸಂಜೆಯಾಗುತ್ತಿದ್ದಂತೆ ಮಠದ ಮುಂಭಾಗದ ವಿಶಾಲವಾದ ಆವರಣದಲ್ಲಿ ರಥ ಧಾರ್ಮಿಕ ವಿಧಿವಿಧಾನಗಳ ನಂತರ ಮುಂದಕ್ಕೆ ತೆರಳುತ್ತಿದ್ದಂತೆ ಎಲ್ಲರಲ್ಲಿಯೂ ಸಂಭ್ರಮವೋ ಸಂಭ್ರಮ. ಈ ವೇಳೆ ಚಪ್ಪಾಳೆ ತಟ್ಟಿ ಭಕ್ತರು ಸಂಭ್ರಮಿಸಿದರು.