ಧರಣಿ ನಿರತರಿಗೆ ಸರ್ಕಾರವೇ ದುಡಿಮೆಯ ನಷ್ಟ ಭರಿಸಲಿ

KannadaprabhaNewsNetwork |  
Published : Nov 01, 2025, 03:15 AM IST
30ಬಿಎಸ್ವಿ01- ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿದ ಸಂತ್ರಸ್ಥರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಬಿ.ಆರ್‌.ಪೋಲೇಶಿ ಅವರಿಗೆ ಗುರುವಾರ ಸಲ್ಲಿಸಿದರು. | Kannada Prabha

ಸಾರಾಂಶ

ಸಂತ್ರಸ್ತರ ನಷ್ಟ ಭರಿಸುವುದು ಶಾಸಕರು, ಅಧಿಕಾರಿಗಳು ಮತ್ತು ಸರ್ಕಾರದ ಜವಾಬ್ದಾರಿ. ಕೂಡಲೇ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆ ಸೂಚನೆ ನೀಡಿ ಪರಿಹಾರ ನೀಡಬೇಕು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿದ 143ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖಂಡ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ 17ನೇ ದಿನಕ್ಕೆ ಕಾಲಿಟ್ಟಿದೆ. ಸಂತ್ರಸ್ತರೆಲ್ಲರೂ ನಿತ್ಯ ಧರಣಿಯಲ್ಲಿ ಭಾಗವಹಿಸುತ್ತಿರುವುದರಿಂದ ತಮಗೆ ಆಗುತ್ತಿರುವ ದುಡಿಮೆ ನಷ್ಟವನ್ನು ಸರ್ಕಾರ ನೀಡಬೇಕೆಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.

ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಅಗಷ್ಟ್ 23ರಂದು ಅನಧಿಕೃತವಾಗಿ ಸಾರ್ವಜನಿಕರ ಮನೆಗಳು ಹಾಗೂ ಸಾರ್ವಜನಿಕ ಭವನಗಳು, ಅಂಗನವಾಡಿ ಕೇಂದ್ರ, ಮಹಾನ್‌ ನಾಯಕರುಗಳ ವೃತ್ತಗಳನ್ನು ಕೆಡವಿ, ಊರಿನ ಸಾರ್ವಜನಿಕರ ನೆಮ್ಮದಿ ಹಾಳುಮಾಡಲಾಗಿದೆ. ಸಂತ್ರಸ್ತರು ಕಳೆದ ಹದಿನೈದು ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ಅನಿರ್ಧಿಷ್ಟವಾಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕೂಲಿ ಕಾರ್ಮಿಕರು, ರೈತರು, ಬಡವರು, ಹೆಣ್ಣುಮಕ್ಕಳು ಧರಣಿಯಲ್ಲಿ ನಿತ್ಯವೂ ಭಾಗವಹಿಸುತ್ತಿದ್ದು, ಪ್ರತಿ ದಿನ ಹೆಣ್ಣುಮಕ್ಕಳಿಗೆ ದಿನಗೂಲಿ ₹400ರಿಂದ ₹600, ಗಂಡಸರಿಗೆ ₹600ರಿಂದ ₹800 ಇದೆ. ನಿತ್ಯವೂ ಧರಣಿಯಲ್ಲಿ ಭಾಗವಹಿಸುತ್ತಿರುವುದರಿಂದ ನಿತ್ಯ ಜೀವನ ಸಾಗಿಸುವುದು ಕಷ್ಟವಾಗಿದೆ. ಮನೆಯಲ್ಲಿ ಜೀವನೋಪಾಯಕ್ಕಾಗಿ ಸಾಕಿದ ದನ ಕರುಗಳು, ಚಿಕ್ಕ ಚಿಕ್ಕ ಮಕ್ಕಳು ತೊಂದರೆಯಿಂದ ಪರದಾಡುವಂತಾಗಿದೆ. ಭೂಮಿಯಲ್ಲಿ ಬೆಳೆದ ಬೆಳೆಗಳು ನಾಶವಾಗುತ್ತಿವೆ. ಇವೆಲ್ಲ ತೊಂದರೆಗಳನ್ನು ಅನುಭವಿಸಿದ್ದ ಸಂತ್ರಸ್ತರ ನಷ್ಟ ಭರಿಸುವುದು ಶಾಸಕರು, ಅಧಿಕಾರಿಗಳು ಮತ್ತು ಸರ್ಕಾರದ ಜವಾಬ್ದಾರಿ. ಕೂಡಲೇ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆ ಸೂಚನೆ ನೀಡಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಡಿಎಸ್ಎಸ್ ಮುಖಂಡ ಗುರುರಾಜ ಗುಡಿಮನಿ ಮಾತನಾಡಿ, ಧರಣಿ ನಿರತರಿಗೆ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಸರ್ಕಾರವಾಗಲಿ ಯಾವುದೇ ಭರವಸೆ ನೀಡಿಲ್ಲ. ದೇವರಹಿಪ್ಪರಗಿ ಶಾಸಕರು ಇಲ್ಲಿಯವರೆಗೆ ಪ್ರತಿಭಟನಾ ಸ್ಥಳಕ್ಕೆ ಒಂದು ಬಾರಿ ಮಾತ್ರ ಬಂದು ಹೋಗಿದ್ದಾರೆ. ಸಂತ್ರಸ್ತರಿಗೆ ಅನೂಕೂಲವಾಗುವ ರೀತಿಯಲ್ಲಿ ಲಿಖಿತ ಭರವಸೆಯನ್ನು ನೀಡಿಲ್ಲ. ಪ್ರತಿಭಟನಾ ನಿರತರು ಕಡುಬಡವರಿದ್ದು ಕೂಲಿ ಕಾರ್ಮಿಕರಿದ್ದಾರೆ. ಅವರು ದುಡಿಯದೆ ಉಪಜೀವನ ಸಾಗಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಮಗೆ ನ್ಯಾಯಬೇಕೆಂದು ಸ್ಥಳೀಯ ಮಿನಿವಿಧಾನಸೌಧ ಮುಂಭಾಗ ಹದಿನೈದು ದಿನಗಳಿಂದ ಧರಣಿ ಆರಂಭಿಸಿದ್ದಾರೆ. ಸರ್ಕಾರ ಇವರಿಗೆ ನ್ಯಾಯ ಕೊಡದೇ ಹೋದರೆ ನಮ್ಮ ಹೋರಾಟ ತೀವ್ರ ಸ್ವರೂಪ ತಾಳುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಮುತ್ತುರಾಜ ಹಾಲಿಹಾಳ ಮಾತನಾಡಿದರು. ಅರವಿಂದ ಸಜ್ಜನ ಶಿರಸ್ತೇದಾರ ಬಿ.ಆರ್‌.ಪೋಲೇಶಿಗೆ ಮನವಿ ಸಲ್ಲಿಸಿದರು. ಈ ವೇಳೆ ಯಮನೂರಿ ಚಲವಾದಿ, ದವಲಬಿ ಯಲಗಾರ, ಹಸನಸಾಬ ಅತ್ತಾರ, ಸಂಗಪ್ಪ ಕುಂಟೋಜಿ, ಬಸಮ್ಮ ತಮದಡ್ಡಿ, ರೇವಣಸಿದ್ದ ಇಂಗಳಗಿ, ಶರಣಪ್ಪ ಇಂಗಳಗಿ, ಗಂಗಾಬಾಯಿ ಇಂಗಳಗಿ, ಗೌರವ್ವ ಕಳ್ಳಿಮನಿ, ಮುನೆರಾಬೇಗಂ ಅತ್ತಾರ, ಮಮತಾಜ ಹೆಬ್ಬಾಳ, ಮುರ್ತುಜಸಾ ಬಾವೂರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ