ರಂಭಾಪುರಿ ಶ್ರೀಗಳ ಅದ್ದೂರಿ ಅಡ್ಡಪಲ್ಲಕ್ಕಿ ಉತ್ಸವ

KannadaprabhaNewsNetwork | Published : Jun 5, 2025 2:19 AM
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪಟ್ಟಣದ ಶ್ರೀ ಜಡಿಮಠದ ಜಡಿಸಿದ್ದೇಶ್ವರ ಶಿವಾಚಾರ್ಯರ ಪಟ್ಟಾಭಿಷೇಕದ ರಜತ ಮಹೋತ್ಸವ ನಿಮಿತ್ತ ಬುಧವಾರ ಶ್ರೀಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದ ಶ್ರೀ ಜಡಿಮಠದ ಜಡಿಸಿದ್ದೇಶ್ವರ ಶಿವಾಚಾರ್ಯರ ಪಟ್ಟಾಭಿಷೇಕದ ರಜತ ಮಹೋತ್ಸವ ನಿಮಿತ್ತ ಬುಧವಾರ ಶ್ರೀಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.ಜಡಿಸಿದ್ದೇಶ್ವರ ಶಿವಾಚಾರ್ಯ ನೇತೃತ್ವದಲ್ಲಿ ಪಟ್ಟಣದ ಹೊಸ ನಗರದ ಪ್ರಳಯಕಟ್ಟಿ ಈರಣ್ಣ ದೇವಸ್ಥಾನದಿಂದ ಮೊಹರೆ ವೃತ್ತದಿಂದ ಮೇನ್ ಬಜಾರ ಹಾಗೂ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಠದವರೆಗೆ ಪಲ್ಲಕ್ಕಿ ಮೆರವಣಿಗೆ ಸಂಭ್ರಮದಿಂದ ನಡೆಯಿತು. ರಂಭಾಪುರಿ ಶ್ರೀಗಳ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಸಕಲ ಕುಂಭಮೇಳ, ವಾದ್ಯ-ಮೇಳಗಳು ಮೆರುಗು ನೀಡಿದವು. ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ಭಕ್ತರು ಶಿವಾಚಾರ್ಯರ ಆಶೀರ್ವಾದ ಪಡೆದು ಪುನೀತರಾದರು.ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ನೂತನ ಮಠದಲ್ಲಿ ಕಲಕೇರಿ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಸ್ವಾಮೀಜಿಗಳು ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ, ಪಂಚ ಕಳಸ ಸ್ಥಾಪನೆ ಹಾಗೂ ಹವನ ನೆರವೇರಿಸಿದರು. ಈ ಮೂಲಕ ಶ್ರೀ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಡಿಸಿದ್ದೇಶ್ವರ ಶಿವಾಚಾರ್ಯರರು, ಪಟ್ಟಾಭಿಷೇಕ ನಡೆದು 25 ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ ಧರ್ಮದ ಪ್ರತಿಷ್ಠಾಪನೆ, ಸಂಸ್ಕಾರ ಮೌಲ್ಯಗಳ ಬೋಧನೆ, ಜಪ-ತಪ-ಧರ್ಮ ಪ್ರಚಾರ ಪ್ರಸಾರದ ಜತೆಗೆ ಕ್ಷೇತ್ರದಲ್ಲಿ ಅಪರೂಪದ ಕೊಡುಗೆ ನೀಡುತ್ತಾ ಬಂದಿದ್ದೇವೆ. ಸಾಮಾಜಿಕ ಬಾಂಧವ್ಯ, ಭ್ರಾತೃತ್ವದ ಬಲ, ಎಲ್ಲ ಜಾತಿ-ಧರ್ಮ-ವರ್ಗಗಳ ಏಳಿಗೆ ಎಂಬ ದೃಷ್ಟಿ ಕೋನದಿಂದ ಮಠ ನಡೆಯುತ್ತಿದೆ ಎಂದು ಹೇಳಿದರು.ಅಡ್ಡಪಲ್ಲಕ್ಕಿ ಉತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಶಿವಾಚಾರ್ಯರು, ದೇಶದಲ್ಲಿ ಹಲವು ಧರ್ಮ, ಪಂಥಗಳಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಮಾನವ ಕಲ್ಯಾಣವೇ ಆಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಸ್ವಾಮೀಜಿಗಳು, ಭಕ್ತರು ಇದ್ದರು.