ಸಮಾಜದ ಬಂಧುಗಳು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು : ಮಹೇಶ್

KannadaprabhaNewsNetwork | Published : Jun 5, 2025 2:19 AM
ಚಿಕ್ಕಮಗಳೂರು, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಬಂಧುಗಳು ಪ್ರಗತಿ ಸಾಧಿಸಲು ಮೊದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್‌ ಬುಕ್, ಸಮಾಜಕ್ಕೆ ಆರ್ಥಿಕ ಸಹಾಯಧನ ವಿತರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಬಂಧುಗಳು ಪ್ರಗತಿ ಸಾಧಿಸಲು ಮೊದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು. ನಗರದ ನೆಹರು ರಸ್ತೆ ಸಮೀಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಸವಿತಾ ಸಮಾಜ ಟ್ರಸ್ಟ್ ಹಮ್ಮಿಕೊಂಡಿದ್ಧ ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್‌ಬುಕ್ ವಿತರಣೆ ಹಾಗೂ ಸಮಾಜಕ್ಕೆ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸಮಾಜದ ಹಲವಾರು ಮಂದಿ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಅಂಬೇಡ್ಕರ್ ನೀಡಿದಂತಹ ಶಿಕ್ಷಣವೇ ಮೂಲ ಕಾರಣ. ಇನ್ನೂ ಕೆಲವೆಡೆ ಸಮಾಜ ಬಲಿಷ್ಟಗೊಳ್ಳುವ ಅಗತ್ಯ ವಿರುವ ಹಿನ್ನೆಲೆಯಲ್ಲಿ ವಿದ್ಯೆ ಎಂಬ ಹಸಿವು ಬೆಳೆಸಿಕೊಂಡು, ಕಲಿಕೆಯೆಂಬ ಆಹಾರ ಸೇವಿಸಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದ ಬಂಧುಗಳು ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳದೇ ಐಎಎಸ್, ಐಪಿಎಸ್ ಅಥವಾ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದ ಅಭಿವೃದ್ಧಿಗೂ ಶ್ರಮಿಸಬಹುದು. ಸಮಾಜದ ಕೆಲವರು ಆರ್ಥಿಕ ಸದೃಢರಾದವರು ಟ್ರಸ್ಟ್‌ಗೆ ಸಹಾಯಧನ ಒದಗಿಸಿದರೆ ಜನಾಂಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ಸಾಲಿನಲ್ಲೂ ಪುರಸ್ಕಾರ ಗಳಿಸುವಷ್ಟು ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಈ ಕಾರ್ಯಕ್ರಮಕ್ಕ ನೈತಿಕವಾಗಿ ಅರ್ಥ ಬರಲಿದೆ. ಸಮಾಜದಲ್ಲಿ ಶಿಕ್ಷಣವೇ ದೊಡ್ಡ ಆಸ್ತಿ. ಕಲಿತಷ್ಟು ಮುಗಿಲೆ ತ್ತರಕ್ಕೆ ಬೆಳೆಯಲು ಸಾಧ್ಯ. ಹೀಗಾಗಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.

ಸಮಾಜದ ಮುಖಂಡ, ದಾನಿ ಎಂ.ಎಸ್.ಉಮೇಶ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಕೆಲವೆಡೆ ಹಿಂದುಳಿದ ವರ್ಗವನ್ನು ಜಾತಿ ವ್ಯವಸ್ಥೆಯಡಿ ಕೀಳಾಗಿ ಕಾಣುವ ಮೂಲಕ ಅವಮಾನಿಸಲಾಗುತ್ತಿದೆ. ಇದನ್ನು ಮೆಟ್ಟಿನಿಲ್ಲಲು ಶಿಕ್ಷಣ ಎಂಬ ಅಸ್ತ್ರವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡರೆ ಅವಮಾನಿಸುವವರ ಎದುರು ಸದೃಢವಾಗಿ ನಿಲ್ಲಬಹುದು ಎಂದು ತಿಳಿಸಿದರು.

ಸವಿತಾ ಸಮಾಜ ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್ ಮಾತನಾಡಿ, ಜನಾಂಗದ ಅಭಿವೃದ್ಧಿ, ಭವನದ ಕಟ್ಟಡ ನಿರ್ಮಾಣಕ್ಕೆ ಎ.ಎನ್.ಮಹೇಶ್‌ ಅವರು ಸರ್ಕಾರದಿಂದ ಸವಲತ್ತು, ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿರುವ ಕಾರಣ ಹಂತ ಹಂತವಾಗಿ ಜನಾಂಗ ಮುನ್ನಡೆ ಸಾಧಿಸುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ಶ್ರೀ ಸವಿತಾ ಸಮಾಜ ಟ್ರಸ್ಟ್‌ಗೆ ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಒಂದು ಲಕ್ಷ ಹಾಗೂ ಉಮೇಶ್‌ ಕುಮಾರ್ ₹25 ಸಾವಿರ ದೇಣಿಗೆ ನೀಡಿದರು. ಬಳಿಕ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಅತಿಹೆಚ್ಚು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಜನಾಂಗದ ಒಂದರಿಂದ 10ನೇ ತರಗತಿ ಮಕ್ಕಳಿಗೆ ನೋಟ್‌ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿ ನೀಡಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ಮೋಹನ್, ಸಹ ಕಾರ್ಯದರ್ಶಿ ಕಾಂತರಾಜ್, ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್, ಸಮಾಜದ ಮುಖಂಡರಾದ ಎನ್.ಗಿರೀಶ್, ಹರೀಶ್, ಎನ್.ಶ್ರೀಧರ್ ಉಪಸ್ಥಿತರಿದ್ದರು. 4 ಕೆಸಿಕೆಎಂ 1ಚಿಕ್ಕಮಗಳೂರಿನ ನೆಹರು ರಸ್ತೆ ಸಮೀಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಸವಿತಾ ಸಮಾಜ ಟ್ರಸ್ಟ್ ಹಮ್ಮಿ ಕೊಂಡಿದ್ಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಹಾಗೂ ಸಮಾಜದ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಾಯಧನದ ಚೆಕ್‌ ವಿತರಿಸಲಾಯಿತು.