ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಶಿಗ್ಗಾಂವಿತಾಲೂಕಿನ ಗಂಗೆಬಾವಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ೧೦ನೇ ಪಡೆಯ ಆವರಣದಲ್ಲಿ ಪೊಲೀಸರಿಂದಲೇ ನಿರ್ಮಾಣಗೊಂಡ ಪರಗೋಲು (ಕುಟೀರ) ಉದ್ಯಾನವನ ಗಮನ ಸೆಳೆಯುತ್ತಿದೆ. ಅತಿಥಿಗಳಿಗೆ ವಿಶ್ರಾಂತಿ, ಆತಿಥ್ಯ ನೀಡುವ ತಾಣವಾಗಿದೆ.
ಇದು ಸರಕಾರದ ಯಾವುದೇ ಅನುದಾನದಲ್ಲಿ ನಿರ್ಮಾಣವಾಗಿಲ್ಲ. ಎರಡು ಎಕರೆ ಜಾಗದಲ್ಲಿ ಬೆಳೆಸಿದ ನಾನಾ ರೀತಿಯ ಗಿಡ-ಮರಗಳಿಂದ ಮನಸಿಗೆ ಇಂಪು ನೀಡುವ ನೈಸರ್ಗಿಕ ವಾತಾವರಣದಲ್ಲಿ ಸುಮಾರು ₹೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಕುಟೀರವು ಕರ್ತವ್ಯನಿರತ ಅಧಿಕಾರಿ ಸಿಬ್ಬಂದಿಗಳಿಗೆ ವಿಶ್ರಾಂತಿ ಸ್ಥಳವಾಗಿ ಪರಿಣಮಿಸಿದೆ. ಪೊಲೀಸ್ ಕಮಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಅವರ ಇಚ್ಛಾಸಕ್ತಿಯಿಂದ ಈ ಪರಗೋಲು ಉದ್ಯಾನವನ ನಿರ್ಮಾಣಗೊಂಡಿದೆ.ಪೊಲೀಸರಿಂದಲೇ ನಿರ್ಮಾಣ: ಸಾರ್ವಜನಿಕ ಸಂಪರ್ಕದಿಂದ ದೂರ ಇರುವ ಕೆಎಸ್ಆರ್ಪಿ ಪಡೆಯ ೧೦೦೦ ಪೊಲೀಸರ ಕ್ಯಾಂಪಸ್ ಇದಾಗಿದೆ. ಕೇವಲ ಸಿಬ್ಬಂದಿಗಳಿಗೆ ವಸತಿಗೃಹ ಬಿಟ್ಟರೆ ವಿಶ್ರಾಂತಿ ಪಡೆಯಲು ಯಾವುದೇ ರೀತಿಯ ಸ್ಥಳಗಳು ಇರಲಿಲ್ಲ. ಕಳೆದ ಎರಡೂವರೆ ತಿಂಗಳ ಹಿಂದೆ ನೂತನ ಕಮಾಂಡೆಂಟ್ ಆಗಿ ಅಧಿಕಾರ ಸ್ವೀಕರಿಸಿದ ಮೆಳ್ಳಿಗಟ್ಟಿ ಅವರು ಪೊಲೀಸ್ ಕ್ಯಾಂಪಸ್ಗೆ ಹೊಂದಿಕೊಂಡು ಕುಟೀರ ತೆರೆಯವ ವಿಚಾರ ಮಾಡಿ ತಮ್ಮ ಸಿಬ್ಬಂದಿಗೆ ಪ್ರೋತ್ಸಾಹಿಸಿದ ಪರಿಣಾಮ ಸ್ವತಃ ಪೊಲೀಸರೇ ನಿರ್ಮಿಸಿದ್ದಾರೆ.ಇಲ್ಲಿಯ ಪೊಲೀಸ್ ಸಿಬ್ಬಂದಿಗಳಲ್ಲಿ ಬಹುತೇಕರು ಒಂದೊಂದು ಶೈಲಿಯ ಕಸಬುಗಾರಿಕೆಯನ್ನು ಮಾಡುವುದನ್ನು ಅರಿತ ಮೆಳ್ಳಾಗಟ್ಟಿ ಅವರು ಕುಟೀರ ನಿರ್ಮಾಣದ ವಿಚಾರ ಪ್ರಸ್ತಾಪವಾದ ಬಳಿಕ ಲಾಠಿ ಹಿಡಿದ ಕೈಗಳಲ್ಲಿ ವಿವಿಧ, ವಿಭಿನ್ನ ರೀತಿಯ ಪ್ರತಿಭೆ ಅರಳಿದೆ. ಈ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಂದರ ಕುಟೀರ ನಿರ್ಮಾಣ ಮಾಡಿಸಿದ್ದಾರೆ.
ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಕರ್ತವ್ಯದ ದಣಿವು ಆರಿಸುತ್ತದೆ. ಹೀಗಾಗಿ ಅನೇಕ ಪೊಲೀಸರು ನಿತ್ಯ ಬೆಳಗ್ಗೆ, ಸಂಜೆ ಪರಗೋಲ ಕುಟೀರದಲ್ಲಿ ಕುಳಿತು ಆನಂದಿಸುತ್ತಾರೆ.ಕಡಿಮೆ ವೆಚ್ಚದ ಕುಟೀರ: ಯಾವುದೇ ಎಂಜಿನಿಯರ್ ಪ್ಲಾನ್ ಇಲ್ಲದೇ ಕಮಾಂಡೆಂಟ್ ಅವರ ಸಲಹೆಯಂತೆ ತೀರಾ ಕಡಿಮೆ ವೆಚ್ಚದಲ್ಲಿ ೧೫/೧೫ ಸೈಜ್ನಲ್ಲಿ ನಿರ್ಮಿಸಿರುವ ಕುಟೀರಕ್ಕೆ ಕೆಲ ದಾನಿಗಳು ಒಂದಿಷ್ಟು ಸಾಮಗ್ರಿಗಳ ಸಹಾಯ ಮಾಡಿದ್ದಾರೆ. ಮೆಳ್ಳಾಗಟ್ಟಿ ಅವರ ಸಹಾಯ, ಇಲಾಖೆಯಿಂದ ಒಂದಿಷ್ಟು ಖರ್ಚು ಮಾಡಿ ಸ್ಥಾಪನೆ ಮಾಡಲಾಗಿದೆ. ಸರಕಾರಿ ಕಾಮಗಾರಿ ವೆಚ್ಚದ ಪ್ರಕಾರ ₹೧೦ ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ.
ಲಾಠಿ ಹಿಡಿಯುವ ಕೈಗಳೇ ಇಂತಹದೊಂದು ಸುಂದರ ಕುಟೀರ ನಿರ್ಮಿಸಿದ್ದು ಸಾಮಾಜಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.೧೦೫ ಎಕರೆ ಪ್ರದೇಶದಲ್ಲಿ ಅಧಿಕಾರಿ, ಸಿಬ್ಬಂದಿ ವಸತಿ ಕೊಠಡಿಗಳು ಮತ್ತು ಕಚೇರಿಗಳಿವೆ. ಅದರಲ್ಲಿ ೨ ಎಕರೆ ಜಾಗದಲ್ಲಿ ಉದ್ಯಾನವನವಿದೆ. ವಿಶೇಷ ಅತಿಥಿಗಳು ಸೇರಿದಂತೆ ಅಧಿಕಾರಿ, ಸಿಬ್ಬಂದಿಗೆ ವಿಶ್ರಾಂತಿ ಪಡೆದುಕೊಳ್ಳಲು ಪರಗೋಲು ಎಂಬ ಕುಟೀರವನ್ನು ನಮ್ಮ ಸಿಬ್ಬಂದಿ ಕೈಚಳಕದಲ್ಲಿ ಅರಳಿದೆ ಎಂದು ಗಂಗೆಬಾವಿ ಕೆಎಸ್ಆರ್ಪಿ ಕಮಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು.