ಶಿವಾನಂದ ಪಿ.ಮಹಾಬಲಶೆಟ್ಟಿ
ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರು, ಸಾರ್ವಜನಿಕರ ಪಾಲಿಗೆ ಸಂಜೀವನಿಯಾಗಿರುವ ಹಿಪ್ಪರಗಿ ಜಲಾಶಯದಲ್ಲಿನ ನೀರು ಬಿರು ಬೇಸಿಗೆಯಿಂದ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಸದ್ಯ ೨.೮೫ ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಿದ್ದು, ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡದಿದ್ದರೆ ಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.
ಹಿಪ್ಪರಗಿ ಜಲಾಶಯದಿಂದ ಪ್ರತಿದಿನ ೦.೦೭ ಟಿಎಂಸಿಯಷ್ಟು ನೀರು ಖಾಲಿಯಾಗುತ್ತಿದೆ. ಜನತೆಯ ಬಳಕೆ ಒಂದು ಕಾರಣವಾದರೆ, ಬಿರುಬಿಸಿಲಿನ ತಾಪಕ್ಕೆ ನೀರು ಬಾಷ್ಪೀಕರಣಗೊಂಡು ಜಲಾಶಯದಲ್ಲಿನ ನೀರು ಕಡಿಮೆಯಾಗುತ್ತಿದೆ.ನೀರಿನ ಮಟ್ಟ ಕೆಲ ದಿನಗಳಲ್ಲಿ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ಜನರಿಗೆ ಬೇಸಿಗೆಯ ಆತಂಕ ಶುರುವಾಗಿದೆ. ಇದೇ ರೀತಿ ಪ್ರತಿ ದಿನ ಖಾಲಿಯಾದರೆ ಮೇ ಎರಡನೇ ವಾರದಲ್ಲಿ ನೀರು ಸಂಪೂರ್ಣ ಖಾಲಿಯಾಗಬಹುದೆಂದು ಅಂದಾಜಿಸಲಾಗಿದೆ.
ಹಿಪ್ಪರಗಿ ಜಲಾಶಯದ ಗೇಟು ಕಿತ್ತುಹೋದಾಗ ಭಾರೀ ಪ್ರಮಾಣದಲ್ಲಿ ಹೈಡ್ರಾಮಾ ನಡೆಸಿದ್ದ ಜನಪ್ರತಿನಿಧಿಗಳು, ವಿಪಕ್ಷ ಧುರೀಣರು ಇದೀಗ ಕೃಷ್ಣೆಯ ಒಡಲು ಸಂಪೂರ್ಣ ಖಾಲಿಯಾಗುತ್ತಿದ್ದರೂ ತುಟಿ ಪಿಟಕ್ ಎನ್ನುತ್ತಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿ ಕೃಷ್ಣೆಗೆ ನೀರು ಬಿಡಿಸಲು ಕಾಳಜಿ ತೋರಿಸುತ್ತಿಲ್ಲವೇಕೆ ಎಂಬುದು ಜನರ ಪ್ರಶ್ನೆಯಾಗಿದೆ. ಜನರ ಆಶೋತ್ತರಕ್ಕೆ ಯಾರು ಸ್ಪಂದಿಸುವರೋ ಕಾದು ನೋಡಬೇಕಿದೆ.ಕೃಷ್ಣಾ ನದಿ ನೀರು ಮೇ ೧೫ರವರೆಗೆ ಬರಬಹುದು. ಆದರೂ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಮಿತವ್ಯಯವಾಗಿ ನೀರು ಬಳಕೆ ಮಾಡಬೇಕು. ನಿಂತ ನೀರು ಪೂರೈಕೆಯಾಗುವುದರಿಂದ ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಬೇಕು.
-ರಮೇಶ ಜಾಧವ ಪೌರಾಯುಕ್ತರು ನಗರಸಭೆ ರಬಕವಿ-ಬನಹಟ್ಟಿಹಿಪ್ಪರಗಿ ಜಲಾಶಯದಲ್ಲಿ ಗೇಟ್ ಅವಘಡದಿಂದ ನೀರಿನ ಪ್ರಮಾಣ ಕಡಿಮೆಯಿದೆ. ಜಲಾಶಯದ ನೀರಿನ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಅನಗತ್ಯವಾಗಿ ನೀರು ಪೋಲು ಮಾಡದೇ ಕಾಳಜಿಯಿಂದ ಬಳಕೆ ಮಾಡಬೇಕು.- ವಿ.ಎಸ್. ನಾಯಕ ಸಹಾಯಕ ಅಭಿಯಂತರ ಹಿಪ್ಪರಗಿ