ಮೂರ್ತಿ ಚಿಕ್ಕದಾದರೂ ಜಠರಾಗ್ನಿಯ ಕೀರ್ತಿ ದೊಡ್ದದು: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 18, 2026, 02:45 AM IST
ಮಂತ್ರಾಕ್ಷತೆ ನೀಡಿ ಶಿಷ್ಯಂದಿರಿಗೆ ಆರ್ಶೀವದಿಸುತ್ತಿರುವ ಶ್ರೀಗಳು  | Kannada Prabha

ಸಾರಾಂಶ

ಜಠರಾಗ್ನಿಯು ಆನೆಯಂತಹ ಬೃಹತ್ ಗಾತ್ರದ ಪ್ರಾಣಿಗಳಲ್ಲಿ ಬಾರ್ಲಿ ಧಾನ್ಯದಷ್ಟು ದೊಡ್ಡದಾಗಿದ್ದರೆ, ಮನುಷ್ಯರಲ್ಲಿ ಇನ್ನೂ ಸಣ್ಣ ಗಾತ್ರದಲ್ಲಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಜಠರಾಗ್ನಿಯು ಆನೆಯಂತಹ ಬೃಹತ್ ಗಾತ್ರದ ಪ್ರಾಣಿಗಳಲ್ಲಿ ಬಾರ್ಲಿ ಧಾನ್ಯದಷ್ಟು ದೊಡ್ಡದಾಗಿದ್ದರೆ, ಮನುಷ್ಯರಲ್ಲಿ ಇನ್ನೂ ಸಣ್ಣ ಗಾತ್ರದಲ್ಲಿದೆ. ಕೀಟಗಳಲ್ಲಿ ಅತಿ ಸೂಕ್ಷ್ಮವಾಗಿರುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಮಾತು ಜಠರಾಗ್ನಿಗೆ ಹೋಲಿಕೆಯಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಸೋಮವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇಂತಹ ಅನೇಕ ಅಪೂರ್ವ ಮಾಹಿತಿಗಳಿವೆ. ಈ ಪ್ರವಚನ ಮಾಲಿಕೆಯು ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿದ್ದು, ನಮ್ಮನ್ನು ಅರಿತುಕೊಳ್ಳುವ ಭಾಗವಾಗಿದೆ. ಭೇಲ ಸಂಹಿತೆಯಲ್ಲಿ ಆತ್ರೇಯ ಮಹರ್ಷಿಗಳು ಅಹಾರವೇ ದೇಹಕ್ಕೆ ಕಾರಣ ಹಾಗೂ ಸಿಹಿ, ಕಹಿ, ಖಾರ ಸೇರಿದಂತೆ ಷಡ್ರಸಗಳ ಅಸಮರ್ಪಕ ಮಿಶ್ರಣಗಳಿಂದ ವ್ಯಾಧಿ ಉಂಟಾಗುತ್ತದೆ. ಹಾಗಾಗಿ ಆಹಾರವನ್ನು ಸೇವಿಸುವಾಗ ಷಡ್ರಸಗಳ ಕುರಿತಾಗಿ ವಿಶೇಷವಾದ ಗಮನವನ್ನು ನೀಡಬೇಕು. ಯಾವುದೋ ಒಂದು ರಸವನ್ನು ಹೆಚ್ಚಾಗಿ ಸೇವಿಸುವುದು ಅನಾರೋಗ್ಯಕ್ಕೆ ಮೂಲ ಎನ್ನಲಾಗಿದೆ ಎಂದರು.

ಅಗ್ನಿಯ ಐದು ವಿಧಗಳು:

ವಿಷ್ಣುವಿಗೆ ದಶಾವತಾರಗಳಂತೆ ಅಗ್ನಿಗೆ ಪಂಚಾವತಾರಗಳಿದ್ದು, ನಮ್ಮ ದೇಹದಲ್ಲಿ ಅಗ್ನಿಯು ಐದು ರೂಪದಲ್ಲಿ ಅಭಿವ್ಯಕ್ತವಾಗಿವೆ. ಪಾಚಕಾಗ್ನಿಯು ನಾಭಿಯ ಸ್ಥಾನದಲ್ಲಿ ಇದ್ದರೆ, ರಂಜಕಾಗ್ನಿ ನಾಭಿಗಿಂತ ಸ್ಚಲ್ಪ ಮೇಲಿದೆ. ಸಾಧಕಾಗ್ನಿ ಹೃದಯದ ಭಾಗದಲ್ಲಿದ್ದು, ಆಲೋಚಕಾಗ್ನಿ ಕಣ್ಣಿನ ಸಮೀಪ ಇದೆ. ಭ್ರಾಜಕಾಗ್ನಿ ದೇಹವನ್ನೆಲ್ಲಾ ವ್ಯಾಪಿಸಿದೆ. ಪಾಚಕಾಗ್ನಿ ಆಹಾರವನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿತುಂಬಿದರೆ, ರಂಜಕಾಗ್ನಿ ರಕ್ತಕ್ಕೆ ಕೆಂಪುಬಣ್ಣ ಕಾರಣ. ಸಾಧಕಾಗ್ನಿಯು ಮುಕ್ತಿಗೆ ಕಾರಣವಾದರೆ, ಆಲೋಚಕಾಗ್ನಿಯು ಜ್ನಾನನೇತ್ರವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕಾಂತಿಗೆ ಭ್ರಾಜಕಾಗ್ನಿ ಕಾರಣವಾಗಿದೆ ಎಂದು ವಿವರಿಸಿದರು.

ಭಾಜಕಾಗ್ನಿಯ ವಿವರ ನೀಡುವಾಗ ಆಯುರ್ವೇದ ಗ್ರಂಥಗಳು ಚರ್ಮದ ಏಳು ಪದರಗಳನ್ನು ಉಲ್ಲೇಖಿಸುತ್ತದೆ. ಚರ್ಮದ ಪದರಗಳು ಅತಿ ಸೂಕ್ಷ್ಮವಾಗಿದ್ದು, ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡ ಬಹುದಾಗಿದೆ. ಆದರೆ ಪ್ರಾಚೀನ ಮಹರ್ಷಿಗಳು ಅವುಗಳನ್ನು ಜ್ಞಾನ ದೃಷ್ಟಿಯಿಂದ ಕಂಡುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.

ಹೊಸದಿಗಂತ ಸಮೂಹದ ಸಿ.ಇ.ಓ ಪ್ರಕಾಶ್ ಪಿ.ಎಸ್, ಉದ್ಯಮಿಗಳಾದ ಡಾ. ನಾರಾಯಣ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು. ಹರ್ಷ ಮಾಂಕನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಮೋಹನ್ ಹರಿಹರ ದಿನಪ್ರಧಾನರಾಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೀಡಿಯೋ: ಪೊಲೀಸ್ ದೂರು
ಸುಂಟಿಕೊಪ್ಪ: ಕಾಡಾನೆ ಹಾವಳಿ, ಬೆಳೆ ನಷ್ಟ