ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಲೆನಾಡಿಗರನ್ನು ಕಂಗೆಡಿಸಿದೆ ವರದಿಗಳ ಅನುಷ್ಠಾನ

KannadaprabhaNewsNetwork | Published : Oct 22, 2023 1:01 AM

ಪರಿಸರ ಸಂರಕ್ಷಣೆಗೆಗಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ಹೆಜ್ಜೆ, ಕಾಡುಪ್ರಾಣಿಗಳ ಹಾವಳಿ ಹಾಗೂ ಸಾಂಪ್ರದಾಯಿಕ ಬೆಳೆಯ ನಾಶದಿಂದಾಗಿ ರೈತಾಪಿ ಜನರ ಬದುಕು ಬರಿದಾಗಿದೆ.

ಸಕಲೇಶಪುರ: ಪರಿಸರ ಸಂರಕ್ಷಣೆಗೆಗಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ಹೆಜ್ಜೆ, ಕಾಡುಪ್ರಾಣಿಗಳ ಹಾವಳಿ ಹಾಗೂ ಸಾಂಪ್ರದಾಯಿಕ ಬೆಳೆಯ ನಾಶದಿಂದಾಗಿ ತಾಲೂಕಿನ ರೈತಾಪಿ ಜನರ ಬದುಕು ಬರಿದಾಗಿದೆ. ಅಪ್ಪಟ ಮಲೆನಾಡು ಪ್ರದೇಶವಾದ ತಾಲೂಕಿನ ೧೨೦ ಕ್ಕೂ ಅಧಿಕ ಗ್ರಾಮಗಳು ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿದ್ದು ಪಶ್ಚಿಮಘಟ್ಟದ ಅದ್ಭುತ ನಿಸರ್ಗದ ಸೌಂದರ್ಯವನ್ನೆ ಬಂಡವಾಳ ಮಾಡಿಕೊಂಡು ಇಲ್ಲಿನ ಸಾಕಷ್ಟು ಜನರು ಕಳೆದೊಂದು ದಶಕದಿಂದ ರೆಸಾರ್ಟ್, ಹೋಂಸ್ಟೇಯಂತಹ ಉದ್ಯಮಗಳ ಮೂಲಕ ಬದುಕು ಕಟ್ಟಿಕೊಂಡಿದ್ದರೆ. ಇನ್ನೂ ಹಲವರು ಕಾಫಿ ಮುಕ್ತಮಾರುಕಟ್ಟೆಗೆ ತೆರದುಕೊಂಡ ನಂತರ ಕಾಫಿತೋಟಗಳನ್ನು ಸಾಂಪ್ರಾದಾಯಿಕತೆಗೆ ಬದಲಾಯಿಸಿ ವೈಜ್ಞಾನಿಕವಾಗಿ ನಿರ್ಮಿಸಿಕೊಂಡು ಉತ್ತಮ ಇಳುವರಿ ಪಡೆಯುವ ಮೂಲಕ ಯಾರಿಗೂ ಕಮ್ಮಿ ಇಲ್ಲದಂತೆ ಬದುಕು ನಡೆಸುತ್ತಿದ್ದರು. ಪೆಟ್ಟು ಕೊಟ್ಟ ಕಸ್ತೂರಿ ರಂಗನ್ ವರದಿ: ಹೀಗೆ ಒಂದಿಲ್ಲದೆ ಒಂದು ರೀತಿಯಲ್ಲಿ ಅದ್ಬುತವಾಗಿ ಬದುಕು ಕಟ್ಟಿಕೊಂಡವರ ಪಾಲಿನ ನೆಮ್ಮದಿಯನ್ನು ಮೊದಲಿಗೆ ಡಾ. ಕಸ್ತೂರಿರಂಗನ್ ನೀಡಿದ ವರದಿ ಹಾಳು ಮಾಡಿದರೆ, ಅರಣ್ಯ ವಿಸ್ತರಣೆಯ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ಡೀಮ್ಡ್ ಅರಣ್ಯ ಜನರ ಅಸ್ತಿತ್ವವನ್ನೆ ಪ್ರಶ್ನಿಸುತ್ತಿದೆ. ಇತ್ತೀಚೆಗೆ ಮುನ್ನಲೆಗೆ ಬಂದ ಸೆಕ್ಷನ್ ೪ ಸಮಸ್ಯೆ ಎರಡು ಹೋಬಳಿಯ ಜನರ ಭವಿಷ್ಯವನ್ನು ಮಂಕಾಗಿಸಿದೆ. ಪಶ್ಚಿಮಘಟ್ಟದಂಚಿನ ಜನರ ಮೆಚ್ಚಿನ ಬೆಳೆ ಏಲಕ್ಕಿಗೆ ಬಂದ ಕೊಳೆರೋಗ ಈ ಭಾಗದ ಜನರನ್ನು ಊರೇ ಬಿಡಿಸಿದ್ದರೆ. ಕಾಡುಪ್ರಾಣಿಗಳ ಸಮಸ್ಯೆ ಅಳಿದುಳಿದ ಜನರನ್ನು ಜೀವಂತ ಶವವನ್ನಾಗಿಸುತ್ತಿದೆ. ಮಲೆನಾಡಿನ ಕಾಫಿ ಬೆಳೆಗಾರರ ನೆಮ್ಮದಿ ಕೆಡಿಸುವ ಮೊದಲ ಪ್ರಯತ್ನ ನಡೆದಿದ್ದು ೨೦೦೯ ರಲ್ಲಿ. ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ನೇಮಿಸಿದ ಪ್ರೊ. ಮಾಧವ್‌ಗಾಡ್ಗಿಳ್ ಸಮಿತಿ ೨೦೧೧ ರಲ್ಲಿ ನೀಡಿದ ವರದಿಯಲ್ಲಿ ತಾಲೂಕನ್ನೆ ಕೃಷಿ, ಕಾರ್ಖಾನೆಯಿಂದ ಹೊರಗಿಡಬೇಕು ಎನ್ನುವ ಮೂಲಕ ಮಲೆನಾಡಿಗರು ಹೌಹಾರುವಂತೆ ಮಾಡಿದರೆ, ಪ್ರೊ. ಮಾಧವ್‌ಗಾಡ್ಗಿಳ್ ವರದಿ ಸರಳೀಕರಣಕ್ಕಾಗಿ ಖ್ಯಾತ ಬಾಹ್ಯಕಾಶವಿಜ್ಞಾನಿ ಫ್ರೊ. ಕಸ್ತೂರಿರಂಗನ್ ನೇತೃತ್ವದಲ್ಲಿ ನೇಮಕಗೊಂಡ ಸಮಿತಿ ೨೦೧೩ರಲ್ಲಿ ನೀಡಿದ ವರದಿ ತಾಲೂಕಿನ ಬೆಳೆಗಾರರ ಭವಿಷ್ಯವನ್ನು ಅಂದಕಾರಕ್ಕೆ ದೂಡಿದೆ. ೨೦೧೩ ರಿಂದ ೨೦೨೩ ಮಾರ್ಚ್ ೬ರವರಗೆ ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಡಾ.ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಕೇಂದ್ರ ಅರಣ್ಯ ಇಲಾಖೆ ನಾಲ್ಕುಬಾರಿ ಕರಡು ಅಧಿಸೂಚನೆ ಹೊರಡಿಸಿದ್ದು ಮೊದಲ ಕರಡು ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮತೆ ಒಳಪಡುವ ಗ್ರಾಮಗಳ ೧೦ ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಿದ್ದು, ಇಲ್ಲಿ ಯಾವುದೆ ಅಭಿವೃದ್ಧಿ ಕಾಮಗಾರಿಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಸದ್ಯ ನಾಲ್ಕನೆ ಕರಡು ಪ್ರತಿಯಲ್ಲಿ ನಿಗದಿತ ಸೂಕ್ಷ್ಮ ಪ್ರದೇಶದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಮಾತ್ರ ಬಫರ್‌ಜೋನ್ ಎಂದು ತಿಳಿಸಿದೆ. ಪಶ್ಚಿಮಘಟ್ಟ ಉಳಿವಿಗಾಗಿ ಕ್ರಮಕೈಗೊಳ್ಳಿ ಎಂದು ಯುನಿಸ್ಕೂದ ಒತ್ತಡದ ಹಿನ್ನೆಲೆಯಲ್ಲಿ ಕೆಂದ್ರ ಅರಣ್ಯ ಇಲಾಖೆ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಆದರೆ, ರಾಜ್ಯ ಸರ್ಕಾರ ನಿಖರವಾದ ನಿಲುವಿಗೆ ಬಾರದ ಕಾರಣ ಮಲೆನಾಡಿಗರು ಒದ್ದಾಡುತ್ತಿದ್ದಾರೆ. ಡಿಮ್ಡ್: ಇನ್ನೂ ೨೦೧೩-೧೪ ರಾಜ್ಯ ಸರ್ಕಾರ ಅರಣ್ಯವ್ಯಾಪ್ತಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಜಮೀನಿನಲ್ಲಿ ಹೇಕ್ಟರ್‌ಗೆ ೫೦ ಮರಗಳಿರುವ ಪ್ರದೇಶವನ್ನು ಡಿಮ್ಡ್ ಅರಣ್ಯ ಎಂದು ಘೋಷಿಸಿದೆ. ಈ ಪ್ರಕಾರ ತಾಲೂಕಿನ ೧೩೦೦ ಹೇಕ್ಟರ್ ಪ್ರದೇಶ ಡಿಮ್ಡ್ ಅರಣ್ಯ ಎಂದು ಘೋಷಣೆಯಾಗಿದೆ. ಡಿಮ್ಡ್ ಅರಣ್ಯ ಎಂದು ಘೋಷಣೆಯ ವೇಳೆ ಬಾರಿ ದೋಷಗಳು ಸೇರ್ಪಡೆಯಾಗಿದ್ದು ಅರಣ್ಯ ಲಕ್ಷಣ ಹೊಂದಿರುವ ಪ್ರದೇಶವನ್ನು ಡಿಮ್ಡ್ ಎಂದು ಘೋಷಿಸ ಬೇಕಿದ್ದ ಅರಣ್ಯ ಇಲಾಖೆ, ನೂರಾರು ವರ್ಷ ಬದುಕಿ ಬಾಳಿರುವ ಗ್ರಾಮಗಳನ್ನೆ ಡೀಮ್ಡ್ ಅರಣ್ಯದ ವ್ಯಾಪ್ತಿಗೆ ಸೇರಿಸುವ ಮೂಲಕ ಮಲೆನಾಡಿಗರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದೆ. ಬೆಳಗೋಡು ಹೋಬಳಿಯ ಲಕ್ಕುಂದ,ಕಸಬಾ ಹೋಬಳಿಯ ಕ್ಯಾನಹಳ್ಳಿ, ಹಾನುಬಾಳು ಹೋಬಳಿಯ ನೀಕನಹಳ್ಳಿ ಸೇರಿದಂತೆ ಹಲವು ಗ್ರಾಮಗಳನ್ನು ಡಿಮ್ಡ್ ಅರಣ್ಯ ಎಂದು ಘೋಷಿಸಿರುವ ಅರಣ್ಯ ಇಲಾಖೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ಯಾವುದೆ ಅಭಿವೃದ್ಧಿಗೂ ಅವಕಾಶಕೊಡದೆ ಪೀಡಿಸುತ್ತಿದೆ. ನಿಖರತೆ ಇಲ್ಲ: ಒಂದು ಸರ್ವೇನಂಬರ್ ನಲ್ಲಿ ೧೦ ಎಕರೆ ಭೂಮಿ ಇದ್ದು ಇದರಲ್ಲಿ ೨ ಎಕರೆ ಡಿಮ್ಡ್ ಅರಣ್ಯವಿದ್ದರೆ ೧೦ ಎಕರೆಯಲ್ಲೂ ಯಾವುದೆ ಅಭಿವೃದ್ಧಿಗೂ ಅವಕಾಶ ನೀಡದಿರುವುದು ಅರಣ್ಯ ಇಲಾಖೆಯ ಉದ್ದಟತನಕ್ಕೆ ಸಾಕ್ಷಿಯಾಗಿದೆ. ಪರಿಣಾಮ ಡೀಮ್ಡ್ ಈ ಸರ್ವೇ ನಂಬರ್‌ನಲ್ಲಿರುವ ಕಾಫಿತೋಟಗಳ ಕೆಲಸಕ್ಕೂ ಅವಕಾಶ ನಿರಾಕರಿಸುತ್ತಿದೆ. ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸೆರ್ವೇನಡೆಸಿದ ನಂತರ ನಿಖರವಾಗಿ ಡೀಮ್ಡ್ ಅರಣ್ಯ ಗುರುತಿಸಿ ಎಂಬ ಮನವಿಗೆ ಸೊಪ್ಪುಹಾಕದ ಅರಣ್ಯ ಇಲಾಖೆ ಮಲೆನಾಡಿಗರನ್ನು ಇನ್ನಿಲ್ಲದ ರೀತಿ ಹಿಂಸಿಸುತ್ತಿದೆ. ಸಾಂಪ್ರದಾಯಿಕ ಬೆಳೆಗಳು ನಾಶ ತಾಲೂಕಿನ ಸಂಪ್ರಧಾಯಿಕ ಬೆಳೆಯಾದ ಏಲಕ್ಕಿ ಕಳೆದ ಎರಡು ದಶಕಗಳಿಂದ ತಾಲೂಕಿನಲ್ಲಿ ನೆಲೆ ಕಳೆದುಕೊಂಡಿದ್ದು, ಕೇರಳದಿಂದ ಬಂದ ಶುಂಠಿ ಬೆಳೆಯ ಕೊಳೆರೋಗ ಏಲಕ್ಕಿಗೂ ಹರಡಿ ಏಲಕ್ಕಿ ಸರ್ವನಾಶವಾಗಿದೆ. ಪರಿಣಾಮ ಏಲಕ್ಕಿಯನ್ನೆ ನಂಬಿದ್ದ ತಾಲೂಕಿನ ಪಶ್ಚಿಮಘಟ್ಟದಂಚಿನ ಸುಮಾರು ೭೪ ಕ್ಕೂ ಅಧಿಕ ಗ್ರಾಮಗಳ ಸುಮಾರು ೯೩೦ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯ ಪಶ್ಚಿಮಘಟ್ಟದಂಚಿನಲ್ಲಿರುವ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿನ ಈ ಗ್ರಾಮಗಳಲ್ಲಿ ಬದಲಿ ಬೆಳೆ ಅಸಾಧ್ಯವಾಗಿದೆ. ಬದಲಿ ಬೆಳೆ ಬೆಳೆಯಲು ಸರ್ಕಾರದ ನಿಯಮಗಳು ಅಡ್ಡಿಯಾಗಿದ್ದು ಕಾಫಿತೋಟದಲ್ಲಿನ ಮರಗಸಿ, ಟಿಂಬರ್‌ಗೆ ಅವಕಾಶ ನೀಡಿರುವ ಸರ್ಕಾರ ಏಲಕ್ಕಿ ತೋಟಗಳಲ್ಲಿ ಮರಗಸಿಗೆ ಅವಕಾಶ ನಿರಾಕರಿಸಿದೆ. ಇದರಿಂದಾಗಿ ಏಲಕ್ಕಿ ತೋಟಗಳನ್ನು ಕಾಫಿತೋಟಗಳನ್ನಾಗಿ ಪರಿವರ್ತಿಸುವ ಕೆಲಸಕ್ಕೂ ಅವಕಾಶವಿಲ್ಲದೆ ಹೆತ್ತೂರು ಹೋಬಳಿ,ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜೇಡಿಗದ್ದೆ, ಚಾಕಹಳ್ಳಿ ಸುತ್ತಲಿನ ಸುಮಾರು ೧೨ ಕ್ಕೂ ಅಧಿಕ ಗ್ರಾಮಗಳು ನಿರ್ಜನ ಪ್ರದೇಶಗಳಾಗಿದ್ದು ಸದ್ಯ ಈ ಗ್ರಾಮಗಳು ಕಾಡಾನೆ, ಕಾಡೆಮ್ಮೆಗಳ ಆವಾಸತಾಣವಾಗಿ ಬದಲಾಗಿದೆ. ಗ್ರಾಮಗಳಲ್ಲಿ ಹತ್ತಾರು ಎಕರೆ ಭೂಮಿ ಒಡೆಯರಾಗಿದ್ದರು ಕುಟುಂಬ ನಿರ್ವಹಣೆಗೆ ದಾರಿ ಇಲ್ಲದೆ ಪಟ್ಟಣದ ಪೆಟ್ರೋಲ್ ಬಂಕ್‌ಗಳಲ್ಲಿ, ಹೋಟೆಲ್, ಕ್ಯಾಂಟಿನ್‌ಗಳಲ್ಲಿ ದಿನಗೂಲಿಗಳಾಗಿ ದುಡಿಯುತ್ತಿರುವ ಈ ಭಾಗದ ಜನರು ವಾಪಸ್ಸಾಗುವ ಮನಸ್ಸಿದ್ದರು, ಡೀಮ್ಡ್,ಕಸ್ತೂರಿರಂಗನ್ ವರದಿ ಜಾರಿ ಭಯ ಇತ್ತ ಬಾರದಂತೆ ತಡೆಹಿಡಿದಿದೆ.