ಕುಕನೂರ: ಶಾಸಕ ಬಸವರಾಜ ರಾಯರಡ್ಡಿ ಕಲ್ಯಾಣ ಕರ್ನಾಟಕದ ತಮ್ಮ ಅನುದಾನದಲ್ಲಿ ಶೇ.70 ಹಣವನ್ನು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮದಲ್ಲಿ ನೂತನ ಪ್ರೌಢ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಮೂರು ನೂತನ ಪಿಯುಸಿ ಕಾಲೇಜು, ಆರು ಪ್ರೌಢ ಶಾಲೆಗಳನ್ನು ಶಾಸಕ ರಾಯರಡ್ಡಿ ಯಲಬುರ್ಗಾ ಕ್ಷೇತ್ರಕ್ಕೆ ಕೇಳಿದರು. ಆಗ ನಾನು ಒಪ್ಪಿಗೆ ಕೊಟ್ಟಿದೆ. ಶಿಕ್ಷಕರ, ಉಪನ್ಯಾಸಕರ ಸಂಬಳ ವ್ಯವಸ್ಥೆ ಬಗ್ಗೆ ಚರ್ಚಿಸಿದಾಗ ಶಾಸಕರು ಕ್ಷೇತ್ರಕ್ಕೆ ಬರುವ ಕಕ ತಮ್ಮ ಅನುದಾನದಲ್ಲಿ ಸುಮಾರು ಶೇ.70 ಹಣ ಮೀಸಲಿಟ್ಟು, ಕಾಲೇಜು, ಪ್ರೌಢ ಶಾಲೆ ತಂದು ಇಲ್ಲಿಯ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.ಕೆಲವೆಡೆ ಮಕ್ಕಳು ಸೈಕಲ್ ಕೇಳುತ್ತಿದ್ದಾರೆ. ಅದನ್ನು ಮುಂದಿನ ವರ್ಷದಿಂದ ಜಾರಿಗೆ ಬರುವಂತೆ ಮಾಡುತ್ತೇವೆ. ಈ ವರ್ಷ 8ನೇ ತರಗತಿ ಮಕ್ಕಳವರೆಗೆ ಮಾತ್ರ ಇದ್ದ ಶೇಂಗಾ ಚಿಕ್ಕಿ, ಮೊಟ್ಟೆ ಕೊಡುವುದನ್ನು 10ನೇ ತರಗತಿ ಮಕ್ಕಳವರೆಗೂ ವಿಸ್ತರಿಸಿದ್ದೇವೆ ಎಂದರು.
ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಗೆ ₹5 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದರು. ಅದರಂತೆ ಈಗಾಗಲೇ 3 ಸಾವಿರ ಕೋಟಿ ನೀಡಿದ್ದಾರೆ. ಮೂರು ಪಿಯುಸಿ ಕಾಲೇಜ್, 6 ಹೈಸ್ಕೂಲ್ ನೀಡಿದ್ದಾರೆ. ಮಂಗಳೂರು ಭಾಗದಲ್ಲಿ ಬಾಲಕಿಯರ ಶಾಲೆ ಅವಶ್ಯಕತೆ ಇದೆ. ಮಂಗಳೂರಿನ ಪದವಿ ಕಾಲೇಜಿಗೆ ಹಾಸ್ಟೆಲ್ ನೀಡುತ್ತೇನೆ. ಮಂಗಳೂರಿಗೆ ₹7 ಕೋಟಿ ಅನುದಾನ ನೀಡುತ್ತೇನೆ. ರಸ್ತೆ ಅಗಲೀಕರಣ ಮಾಡಿ ಒಂದು ರಿಂಗ್ ರೋಡ್ ಮಾಡುತ್ತೇವೆ ಎಂದರು.