ಶಿಗ್ಗಾಂವಿ: ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಘಟನೆ ಖಂಡನೀಯ. ರಾಷ್ಟ್ರೀಯ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಉಪಸ್ಥಿತರಿದ್ದರೂ ಯಾವುದೇ ಸ್ಪಷ್ಪವಾದ ಖಂಡನೆ ಅಥವಾ ಕ್ಷಮೆಯಾಚನೆ ಮಾಡದಿರುವುದು ಅತ್ಯಂತ ಖೇದಕರ. ರಾಷ್ಟ್ರದ ಗೌರವಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜಕೀಯ ಭೇದಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರೀಯ ಗೀತೆಗಳು ಹಾಗೂ ದೇಶದ ಪ್ರತೀಕಗಳಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಘಟನೆಗೆ ಕಾಂಗ್ರೆಸ್ ಪಕ್ಷದ ನಾಯಕರು ಸ್ಪಷ್ಪನೆ ನೀಡಬೇಕು. ಸೋನಿಯಾ ಗಾಂಧಿ ಅವರು ದೇಶದ ಜನತೆಯ ಭಾವನೆಗಳಿಗೆ ಗೌರವ ನೀಡಿ ಕ್ಷಮೆಯಾಚಿಸಬೇಕು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಸಹ ಈ ಘಟನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ದೇಶದ ಗೌರವ ಮತ್ತು ರಾಷ್ಟ್ರೀಯ ಭಾವನೆಗಳ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ರಾಜಿ ಇರಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಚಂದ್ರು ಆಚೆಬಣದ, ಬಾಹುಬಲಿ ಅಕ್ಕಿ, ರೇಣುಕಗೌಡ ಪಾಟೀಲ, ಅನೀಲ ಸಾತಣ್ಣವರ, ಶಂಕ್ರಣ್ಣಾ ಮುಂದಿನಮನಿ, ಸಚಿನ ಮಡಿವಾಳರ, ರಮೇಶ ಓಲೇಕಾರ, ಸಂತೋಷ ದೊಡ್ಡಮನಿ, ರವಿ ಬ್ಯಾಹಟ್ಟಿ, ಶಿವಯೋಗಿ ಹುಲಸೋಗ್ಗಿ, ದೇವಿಂದ್ರಪ್ಪ ಸೊರಟೂರ, ಎಂ.ಎಂ. ಮೂಳೆ ಸೇರಿದಂತೆ ಹಲವಾರು ಗಣ್ಯರು ಇದ್ದರು.