- ಸಾಂವಿಧಾನಿಕ ಆಶಯಗಳು- ಕನ್ನಡ ಸಾಹಿತ್ಯ ಕುರಿತು ವಿಚಾರ ಸಂಕಿರಣದಲ್ಲಿ ಎಸ್ಸೆಸ್ಸೆಂ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರ ಸಮಾಜ ಸೇವೆ ಅನನ್ಯವಾದುದು. ಕೇವಲ ಧಾರ್ಮಿಕ ಚಿಂತನೆ ಅಷ್ಟೇ ಅಲ್ಲ. ಪ್ರಗತಿಪರ ಚಿಂತನೆ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ. ದೇಶದ ಸಂವಿಧಾನ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದು ತೋಟಗಾರಿಕೆ, ಗಣಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.ಶನಿವಾರ ಬೆಂಗಳೂರು ದಕ್ಷಿಣ ತಾಲೂಕಿನ ಕೇತೋಹಳ್ಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಶ್ರೀ ಕನಕ ಎಜುಕೇಷನ್ ಲೀಡರ್ಸ್ ಫೋರಂ ವತಿಯಿಂದ ಪ್ರತಿ ತಿಂಗಳು 4ನೇ ಶನಿವಾರದಂದು ಹಮ್ಮಿಕೊಳ್ಳುವ ತಲ್ಲಣಿಸದಿರು ಮನವೇ ಕಾರ್ಯಕ್ರಮದಡಿ ಸಾಂವಿಧಾನಿಕ ಆಶಯಗಳು ಮತ್ತು ಕನ್ನಡ ಸಾಹಿತ್ಯ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಾತನ್ನು ನಾವು ಅರ್ಥೈಸಿಕೊಳ್ಳಬೇಕು. ಮೇಲ್ನೋಟಕ್ಕೆ ಸಂವಿಧಾನವು ನಿಯಮಗಳ ನುಡಿಗಟ್ಟಾದರೂ ಅದರಲ್ಲೂ ಒಂದು ಸಂವೇದನೆ ಇದೆ. ಸಂವಿಧಾನವು ಬದುಕುವ, ಮಾತನಾಡುವ ಅನೇಕ ಹಕ್ಕುಗಳನ್ನು ದಕ್ಕಿಸಿದೆ. ಹೀಗಾಗಿ, ಸಂವಿಧಾನ ಹಾಗೂ ನಮ್ಮ ಬದುಕು ಮತ್ತು ಬದುಕಿನ ಸಂವೇದನೆಯ ಸಾಹಿತ್ಯಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರು.ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಂವಿಧಾನ ಮತ್ತು ಕನ್ನಡ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ವಿಷಯ ಮಂಡಿಸಿದರು. ಕವಿ ನಿಸಾರ್ ಅಹಮ್ಮದ್ ಎಚ್.ದುರ್ಗ ಆಶಯ ನುಡಿಗಳನ್ನಾಡಿದರು. ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಬೇಬಿ ಮಠದ ಜಗದ್ಗುರು ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ನಂದಿಗಾವಿ ಶ್ರೀನಿವಾಸ್, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
- - --25ಕೆಡಿವಿಜಿ32.ಜೆಪಿಜಿ:
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.