ಹಿಚ್ಕಡದಲ್ಲಿ ಅಪರೂಪದ ಅತಿಥಿ; 6 ಮೊಟ್ಟೆ ಇಟ್ಟ ಕೃಷ್ಣ ಪಕ್ಷಿ
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾಪ್ರಕೃತಿಯ ಮಡಿಲಿನಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನವೂ ತನ್ನದೇ ಆದ ವಿಶೇಷತೆ ಹೊಂದಿರುತ್ತದೆ. ಅಂತಹ ಅಪರೂಪದ ನೈಸರ್ಗಿಕ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿ ತಾಲೂಕಿನ ಹಿಚ್ಕಡ ಗ್ರಾಮದ ತೋಟದ ಪರಿಸರದಲ್ಲಿ ಬಲು ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಯೊಂದು ಮೊಟ್ಟೆ ಇಟ್ಟಿರುವುದು ಪಕ್ಷಿಪ್ರೇಮಿಗಳು ಹಾಗೂ ಪ್ರಕೃತಿ ಆಸಕ್ತರ ಗಮನ ಸೆಳೆದಿದೆ.
ಮೊಟ್ಟೆಯ ಸುತ್ತಲೂ ಎಚ್ಚರಿಕೆಯ ಕಾವಲು:
ಕಪ್ಪು ಬಣ್ಣದ ಆಕರ್ಷಕ ಮೈಬಣ್ಣ ಹಾಗೂ ವಿಶಿಷ್ಟ ಚಲನವಲನದಿಂದ ಗಮನ ಸೆಳೆಯುವ ಕೃಷ್ಣ ಪಕ್ಷಿ, ಸಾಮಾನ್ಯವಾಗಿ ತನ್ನ ವಾಸಸ್ಥಳವನ್ನು ಆಯ್ಕೆ ಮಾಡುವಾಗ ಸುರಕ್ಷಿತ ಹಾಗೂ ಅನುಕೂಲಕರ ಪರಿಸರಕ್ಕೆ ಆದ್ಯತೆ ನೀಡುತ್ತದೆ. ಗ್ರಾಮದ ಹಸಿರು ಪರಿಸರ, ಮರಗಿಡಗಳು ಹಾಗೂ ನೈಸರ್ಗಿಕ ವಾತಾವರಣ ಪಕ್ಷಿಗಳಿಗೆ ಅನುಕೂಲಕರವಾಗಿರುವುದರಿಂದ ಕೃಷ್ಣ ಪಕ್ಷಿಯು ಇಲ್ಲಿ ಸಂತಾನೋತ್ಪತ್ತಿಗೆ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು ಎಂದು ಪ್ರಕೃತಿ ಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷಿಯು ಮೊಟ್ಟೆ ಇಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಕುತೂಹಲವೂ ಹೆಚ್ಚಾಗಿದೆ.
ಜೀವವೈವಿಧ್ಯದ ಸೂಚಕ:
ಹಿಚ್ಕಡದ ಈ ಪುಟ್ಟ ಪಕ್ಷಿಗೂಡು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ಹಿಚ್ಕಡದಲ್ಲಿ ಕೃಷ್ಣ ಪಕ್ಷಿ ಮೊಟ್ಟೆ ಇಟ್ಟಿರುವುದು ಗ್ರಾಮಸ್ಥರ ಪಾಲಿಗೆ ಕೇವಲ ಕುತೂಹಲದ ಸಂಗತಿಯಲ್ಲ. ನಮ್ಮ ಸುತ್ತಲಿನ ಪ್ರಕೃತಿಯನ್ನೂ ನಾವು ಕಾಪಾಡಬೇಕು ಎಂಬ ಸಂದೇಶ ಸಾರುವ ಅಪರೂಪದ ಘಟನೆಯಾಗಿದೆ. ಕೃಷ್ಣ ಪಕ್ಷಿಯನ್ನು ಸ್ಥಳೀಯ ವಾಡಿಕೆ ಭಾಷೆಯಲ್ಲಿ ಕೆಂಬುತಾ, ರತ್ನ ಪಕ್ಷಿ ಎಂತಲು ಕರೆಯಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಶಕುನ ಪಕ್ಷಿ ಅಂತಲು ಕರೆಯಲಾಗುತ್ತಿತ್ತು. ಮಾಂತ್ರಿಕತೆಯಲ್ಲಿ ಈ ಪಕ್ಷಿಯನ್ನು ಬಳಸಲಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಈ ಪಕ್ಷಿ ದಾರಿಯಲ್ಲಿ ಹೋಗುವಾಗ ಎದುರಾದರೆ ಶುಭ ಸೂಚನೆ ಎಂದು ಹೇಳಲಾಗುತ್ತಿರುವುದರಿಂದ ಇದನ್ನು ಶಕುನದ ಪಕ್ಷಿ ಎಂತಲೂ ಕರೆಯಲಾಗುತ್ತದೆ.