ಪ್ರಿಯಾಂಕ್-ಮಣಿಕಂಠ ಹೆಸರಿನಲ್ಲಿ ಕಿತ್ತಾಡಿದ ಮುಖಂಡರು ಕನ್ನಡಪ್ರಭ ವಾರ್ತೆ ಚಿತ್ತಾಪುರ ಹಲಕರ್ಟಿ ಗ್ರಾಮದ ಬಸವೇಶ್ವರ ಭಾವಚಿತ್ರ ಅವಮಾನ ಘಟನೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯೊಂದು ಲಿಂಗಾಯತ ಮುಖಂಡರ ರಾಜಕೀಯ ಸಂಘರ್ಷಕ್ಕೆ ಕಾರಣವಾದ ಪ್ರಸಂಗ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಇತ್ತೀಚೆಗೆ ಹಳಕರ್ಟಿ ಗ್ರಾಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಸಿಗರೇಟಿನಿಂದ ಸುಟ್ಟು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರೆವಣಿಗೆ ಮೂಲಕ ಆಗಮಿಸಿದ ಬಸವಾಭೀಮಾನಿಗಳು, ಕಿಡಿಗೇಡಿಯನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಸುಮಾರು ಒಂದು ತಾಸು ನಡೆದ ರಸ್ತೆ ತಡೆ ಚಳುವಳಿಯಲ್ಲಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಲಿಂಗಾಯತ ಮುಖಂಡರು ಮಾತನಾಡಿದರು. ಮುಖಂಡರ ಭಾಷಣದ ವೇಳೆ ಕೆಲ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹಾಗೂ ಕೆಲವರು ಬಿಜೆಪಿಯ ಮಣಿಕಂಠ ರಾಠೋಡ ವಿರುದ್ಧ ಆರೋಪ ಮಾಡಿದ್ದೇ ಲಿಂಗಾಯತ ನಾಯಕರ ಮಾತಿನ ಸಂಘರ್ಷಕ್ಕೆ ಕಾರಣವಾಯಿತು. ಮೊದಲು ಮಾತನಾಡಿದ ಬಿಜೆಪಿ ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ತಾಲೂಕಿನಲ್ಲಿ ಪದೇಪದೆ ಬಸವೇಶ್ವರ ಪ್ರತಿಮೆ ಮತ್ತು ಭಾವಚಿತ್ರಗಳ ಅವಮಾನ ಘಟನೆಗಳು ನಡೆಯುತ್ತಿವೆ. ಆ ಮೂಲಕ ಲಿಂಗಾಯತ ಸಮುದಾಯವನ್ನು ಕೆಣಕಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ವಿಳಂಬ ಮಾಡುತ್ತಿದ್ದಾರೆ. ವಿವಿಧ ವಿಷಯಗಳಿಗೆ ತಕ್ಷಣವೇ ಪ್ರತಿಕ್ರೀಯೆ ನೀಡುವ ಕ್ಷೇತ್ರದ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾತೇ ಆಡುತ್ತಿಲ್ಲ ಎಂದು ಆರೋಪಿಸಿದರು. ಇದನ್ನೇ ಅಸ್ತçವಾಗಿ ಬಳಸಿ ಮಾತನಾಡಿದ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡ, ಲಿಂಗಾಯತ ನಾಯಕ ನಾಗರೆಡ್ಡಿಗೌಡ ಪಾಟೀಲ ಕರದಾಳ, ಬಿಜೆಪಿ ಮನಸ್ಥಿತಿಯ ಲಿಂಗಾಯತರ ವಿರುದ್ಧ ತಿರುಗಿಬಿದ್ದರು. ಬಸವೇಶ್ವರರಿಗೆ ಅವಮಾನ ಆದ ಘಟನೆಯನ್ನು ಯಾರೂ ಸಹಿಸುವುದಿಲ್ಲ. ಪಕ್ಷಬೇಧ ಮರೆತು ಎಲ್ಲರೂ ಖಂಡಿಸಿದ್ದಾರೆ. ಅದಾಗ್ಯೂ ಬಿಜೆಪಿಯ ಮಣಿಕಂಠ ರಾಠೋಡ ಅವರು ಚಿತ್ತಾಪುರದ ಪ್ರತಿಭಟನೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಾಪ್ರಹಾರ ನಡೆಸಿ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಘಟನೆಗೆ ಪ್ರಿಯಾಂಕ್ ಖರ್ಗೆ ಅವರೇ ಕುಮ್ಮುಕ್ಕು ನೀಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇಂಥಹ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದು ತಿರುಗೇಟು ನೀಡಿದರು. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜ್ಯದ ಏಕೈಕ ಶಾಸಕ ಎಂಬ ಹೆಗ್ಗಳಿಕೆ ಪಡೆದಿರುವ ಪ್ರಿಯಾಂಕ್, ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಡಿ ರಾಜಕೀಯ ನಡೆಸುತ್ತಿದ್ದಾರೆ. ಎಲ್ಲರನ್ನೂ ಸಮಾನ ದೃಷ್ಠಿಯಿಂದ ಕಾಣುತ್ತಿದ್ದಾರೆ. ಬಸವೇಶ್ವರ ಭಾವಚಿತ್ರ ಅಪಮಾನ ಘಟನೆಗೆ ಪ್ರಿಯಾಂಕ್ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಲು ತನಿಖೆ ಕೈಗೊಂಡಿದ್ದಾರೆ. ಒತ್ತಡ ಮತ್ತು ಆತುರದಲ್ಲಿ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಅಂಬೇಡ್ಕರ್ ಆಶಯದಂತೆ ಸೂಕ್ಷ್ಮತೆಯನ್ನು ಪೊಲೀಸರು ಅನುಸರಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಲೆಂದೇ ಕೆಲವರು ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದಾರೆ ಎಂದು ನಾಗರೆಡ್ಡಿಗೌಡ ಪಾಟೀಲ ನೇರಾನೇರ ವಾಗ್ದಾಳಿ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಪಾಳೆಯದ ಲಿಂಗಾಯತ ಮುಖಂಡರು ಮಾತಿನ ವಾಗ್ವಾದಕ್ಕಿಳಿದರು. ಲಿಂಗಾಯತ ಸಮಾಜದ ನೇತೃತ್ವದ ಪ್ರತಿಭಟನೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಾತು ಬೇಕಿಲ್ಲ. ಪ್ರಿಯಾಂಕ್ ಖರ್ಗೆ-ಮಣಿಕಂಠ ರಾಠೋಡ ಹೆಸರು ಪ್ರಸ್ತಾಪದ ಅಗತ್ಯವಿಲ್ಲ ಎಂದು ಯುವಕರು ಸಂಘರ್ಷಕ್ಕೆ ಮುಂದಾದರು. ಪರಸ್ಪರ ಮಾತಿನ ಚಕಮಕಿಯಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಯಿತು. ಪಿಎಸ್ಐ ತಿರುಮಲೇಶ ಕುಂಬಾರ ಮಧ್ಯೆ ಪ್ರವೇಶಿಸುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿ ಪರಸ್ಥಿತಿ ಸುಖಾಂತ್ಯಗೊಳಿಸಿದರು.