ಹಿರಿಯರಿಂದ ನಮಗೆ ಪಾರಂಪರಿಕವಾಗಿ ಬಂದ ಬಳುವಳಿಯೇ ಬಯಲಾಟ: ಗುರುಕುಮಾರ್ ಪಾಟೀಲ್

KannadaprabhaNewsNetwork |  
Published : Feb 19, 2026, 02:15 AM IST
ಫೋಟೋ:೧೭ಕೆಪಿಸೊರಬ-೦೨ : ಸೊರಬ ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ನಡೆದ ಪೌರಾಣಿಕ ಬಯಲಾಟದ ಸಭಾ ಕಾರ್ಯಕ್ರಮವನ್ನು ಬಯಲಾಟದ ಭಾಗವತ ಚಂದ್ರಪ್ಪ ದ್ಯಾವಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಹಿರಿಯರು ಪಾರಂಪರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ಬಳುವಳಿಯಾಗಿ ನೀಡಿದ ಬಯಲಾಟದ ಕಲೆಗೆ ಅಪಾರವಾದ ಮಹತ್ವವಿದೆ. ಇದು ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ನಮ್ಮ ಹಿರಿಯರು ಪಾರಂಪರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ಬಳುವಳಿಯಾಗಿ ನೀಡಿದ ಬಯಲಾಟದ ಕಲೆಗೆ ಅಪಾರವಾದ ಮಹತ್ವವಿದೆ. ಇದು ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಹೇಳಿದರು.

ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ಗಜಾನನ ಯುವಕ ಸಂಘದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರವಿ ಕಲ್ಯಾಣ ಅರ್ಥಾತ್ ಕೌಂಡ್ರಿಕನ ವಧೆ ಎಂಬ ಸುಂದರ ಪೌರಾಣಿಕ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಯಲಾಟ ಎಂಬುವುದು ಕೇವಲ ಒಂದು ಪ್ರದರ್ಶನವಲ್ಲ. ಅದು ಹತ್ತು ಹಲವಾರು ಕಲೆಗಳ ಸುಂದರ ಸಮಾಗಮವಾಗಿದೆ. ಸರ್ಕಾರವು ಜನಪದ ಕಲೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಪ್ರೋತ್ಸಾಹ ನೀಡುತ್ತಿದೆ. ಮುಖ್ಯವಾಗಿ ಭಾಗವತರ ಮಾರ್ಗದರ್ಶನದಲ್ಲಿ ಕಲೆಗಳು ಅತ್ಯಂತ ಸುಂದರವಾಗಿ ಮೂಡಿ ಬರಲು ಸಾಧ್ಯ, ಪೌರಾಣಿಕ ಪಾತ್ರಗಳಿಗೆ ಕಲಾವಿದರು ಜೀವ ತುಂಬಿದಾಗ ನಮ್ಮ ಪರಂಪರೆಗೆ ಹೊಸ ಕಳೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಕೆ.ವಿ. ಗೌಡ್ರು ಮಾತನಾಡಿ, ನಾಡಿನ ಶ್ರೇಷ್ಠ ಪರಂಪರೆಯ ಭಾಗವತಿಕೆ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಇಂದಿನ ತಲೆಮಾರಿನ ಕರ್ತವ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಅಂದೇ ಗ್ರಾಮೀಣ ಕಲಾವಿದರು ಮತ್ತು ಭಾಗವತರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ರಾಜ್ಯದಲ್ಲಿ ದೊಡ್ಡ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಇದು ಇಂದಿನ ಹಳ್ಳಿಯ ಪ್ರತಿಭೆಗಳಿಗೆ ದೊಡ್ಡ ಸ್ಪೂರ್ತಿಯಾಗಿದೆ ಎಂದರು.

ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಗ್ರಾಮೀಣ ಕಲೆ ಮತ್ತು ಕ್ರೀಡೆಗಳಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಇಂತಹ ನಿರಂತರ ಕಾರ್ಯಗಳು ಮರೆಯಾಗುತ್ತಿರುವ ಕಲೆಗಳಿಗೆ ಮರುಜೀವ ನೀಡುತ್ತಿವೆ ಎಂದು ತಿಳಿಸಿದರು.

ಹೊಳೆಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಪ್ರಭಾಕರ್ ಮಾತನಾಡಿ, ಹಳ್ಳಿಗಳಲ್ಲಿ ಗ್ರಾಮೀಣ ಕಲೆಗಳು ನಡೆಯುತ್ತಿರುವುದು ಸಂತಸ ತಂದರೂ, ಆಧುನಿಕತೆಯ ಅಬ್ಬರದಲ್ಲಿ ನಮ್ಮ ನೈಜ ಆಚಾರ ವಿಚಾರಗಳನ್ನು ಮರೆಯುತ್ತಿರುವುದು ನೋವಿನ ಸಂಗತಿ. ಗೋಲಿ, ಚಿನ್ನಿ, ಬುಗುರಿಯಂತಹ ಮಣ್ಣಿನ ಕ್ರೀಡೆಗಳು ಮುಂದಿನ ಪೀಳಿಗೆಗೆ ಕೇವಲ ಚಿತ್ರದಲ್ಲಿ ತೋರಿಸುವ ಪರಿಸ್ಥಿತಿ ಬರಬಹುದು ಎಂಬ ಆತಂಕ ಎದುರಾಗಿದೆ. ಗ್ರಾಮೀಣ ಯುವ ಸಂಘಟನೆಗಳು ಒಗ್ಗೂಡಿ ಜನಪದ ಕಲೆಗಳನ್ನು ಆಚರಿಸಲು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ನಮ್ಮ ಮಣ್ಣಿನ ಜೀವಂತ ಸಂಸ್ಕೃತಿಯನ್ನು ಒಟ್ಟಾಗಿ ಉಳಿಸಿ ಬೆಳೆಸೋಣ ಎಂದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಭಾಗವತರಾದ ಚಂದ್ರಪ್ಪ ದ್ಯಾವಪ್ಪ ನೆರವೇರಿಸಿದರು. ಅಧ್ಯಕ್ಷತೆಯನ್ನು ಗಜಾನನ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ವಹಿಸಿದ್ದರು, ಪರಶುರಾಮ್ ಜೋಗಳೇಕರ್, ಹರೀಶ್‌ಗೌಡ್ರು, ಶಿವಮೂರ್ತಿ ಗೌಡ್ರು, ಸೇರಿದಂತೆ ಗಜಾನನಯುವಕ ಸಂಘದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾವಣೆಗೆ ತಕ್ಕಂತೆ ಕೈಗಾರಿಕೆ ವೇಗ ಹೆಚ್ಚಿಸಿಕೊಳ್ಳಿ: ವಿಜಯ ಸಂಕೇಶ್ವರ
ಶೀಘ್ರ ಬೆಳ್ಳೂಡಿ–ರಾಮತೀರ್ಥ ಸೇತುವೆ ಪುನರ್ ನಿರ್ಮಾಣ: ಶಾಸಕ ಬಿ.ಪಿ.ಹರೀಶ್