ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ
ವೈದ್ಯಕೀಯ ಕ್ಷೇತ್ರವು ಕೇವಲ ಉದ್ಯೋಗವಲ್ಲ, ಅದೊಂದು ಪವಿತ್ರ ಸೇವಾ ಮನೋಭಾವದ ವೃತ್ತಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ್ ದೊಡ್ಮನಿ ಹೇಳಿದರು.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉತ್ತರ ಕನ್ನಡ ಜಿಲ್ಲಾ ಶಾಖೆಯಿಂದ ಪಟ್ಟಣದ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆದ ಬುಧವಾರ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಣ್ಣ ಪುಟ್ಟ ತಪ್ಪುಗಳಿಗೂ ಇಂದು ವೈದ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿ ವೃತ್ತಿಧರ್ಮದ ಜೊತೆಗೆ ವೈದ್ಯರು ತಮ್ಮ ವೈಯಕ್ತಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಸಹೋದ್ಯೋಗಿಗಳಿಗೆ ತೊಂದರೆ ಎದುರಾದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಪರಸ್ಪರ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.ಸಂಘದ ರಾಜ್ಯಾಧ್ಯಕ್ಷ ಡಾ. ನಿಖಿಲ್ ಶೆಟ್ಟಿ ಮಾತನಾಡಿ, ವೈದ್ಯರಾಗಿ, ಅದರಲ್ಲೂ ಮುಖ್ಯವಾಗಿ ಸರ್ಕಾರಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ನಾವು ಹೆಮ್ಮೆಪಡಬೇಕು. ಅತ್ಯಂತ ಸೀಮಿತ ಸೌಲಭ್ಯಗಳ ನಡುವೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ತಲುಪಿಸುತ್ತಿರುವವರು ಸರ್ಕಾರಿ ವೈದ್ಯರು. ಸಿಡುಬು, ಪೋಲಿಯೋ, ಕ್ಷಯ ಹಾಗೂ ಎಚ್ಐವಿಯಂತಹ ಮಾರಕ ರೋಗಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರಿ ವೈದ್ಯರ ಪಾತ್ರ ಮಹತ್ತರವಾದುದು. ನೂರು ಒಳ್ಳೆಯ ಕೆಲಸಗಳನ್ನು ಬದಿಗೊತ್ತಿ, ಸಣ್ಣ ತಪ್ಪನ್ನೇ ದೊಡ್ಡದಾಗಿ ಬಿಂಬಿಸುವ ಮನಸ್ಥಿತಿ ಸಮಾಜದಲ್ಲಿದೆ. ಮಾನ್ಯತೆ ಸಿಗಲಿ ಬಿಡಲಿ, ರೋಗಿಗಳಿಗೆ ಸೇವೆ ನೀಡುವುದರಲ್ಲಿ ನಮಗೆ ಆತ್ಮತೃಪ್ತಿ ಇರಬೇಕು. ವೈದ್ಯರು ಒಗ್ಗಟ್ಟಾಗಿ ಮನಸ್ಸು ಮಾಡಿದರೆ ವ್ಯವಸ್ಥೆಯನ್ನೇ ಸರಿದಾರಿಗೆ ತರಬಹುದು ಎಂದರು.ತಾಲೂಕು ವೈದ್ಯಾಧಿಕಾರಿ ಡಾ. ರಾಜೇಶ್ ಕಿಣಿ ಮಾತನಾಡಿ, ರಾಜಕೀಯ ಹಾಗೂ ಆಡಳಿತಾತ್ಮಕ ಒತ್ತಡಗಳ ನಡುವೆಯೂ ಹಿರಿಯ ಅಧಿಕಾರಿಗಳು ಮತ್ತು ವೈದ್ಯ ಸಮುದಾಯ ಜೊತೆಯಾಗಿ ನಿಂತು ಸಹಕರಿಸುತ್ತಿರುವುದನ್ನು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ಡಾ. ಸವಿತಾ ಕಾಮತ್, ಕಡಿಮೆ ಸಿಬ್ಬಂದಿ ಹಾಗೂ ಸೀಮಿತ ಸೌಲಭ್ಯಗಳಿದ್ದರೂ ಜಿಲ್ಲೆಯ ಸರ್ಕಾರಿ ವೈದ್ಯರು ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಜನರಿಗೆ ನೀಡುತ್ತಿದ್ದಾರೆ ಎಂದರು.ಸೇವೆಯಿಂದ ನಿವೃತ್ತರಾದ ಹಿರಿಯ ವೈದ್ಯರಾದ ಡಾ. ಕೃಷ್ಣಾನಂದ, ಡಾ. ಉಷಾ ಹಾಸ್ಯಗಾರ, ಡಾ. ಮಹೇಶ್ ಶೆಟ್ಟಿ, ಡಾ. ರಾಘವೇಂದ್ರ, ಡಾ. ಸಂತೋಷಕುಮಾರ ಹಾಗೂ ಶಂಕರ ರಾವ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.