ಹೈದರಲಿ ಕಮಿಟಿಯ ಯುವಕರು ಪ್ರತಿವರ್ಷವೂ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ
ಕುಷ್ಟಗಿ: ಅಪಘಾತ ಸಂಭವಿಸಿದಾಗ ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ರೋಗಿಗೆ ರಕ್ತದಾನ ಮಾಡಿದರೆ ಅದು ಸಂಜೀವಿನಿಯಂತೆ ಕೆಲಸ ಮಾಡುವುದರ ಜತೆಗೆ ಜೀವದಾನ ಮಾಡಿದ ಪುಣ್ಯವೂ ದೊರೆಯುತ್ತದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಪಟ್ಟಣದ ತೆಗ್ಗಿನ ಓಣಿಯ ಬಾಲಕಿಯರ ಸರ್ಕಾರಿ ಮಾದರಿ ಶಾಲೆಯ ಆವರಣದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಹಜರತ್ ಹೈದರಲಿ ಕಮಿಟಿ ಹಾಗೂ ಗಂಗಾವತಿಯ ಗೋಪಿ ಚಾರಿಟಬಲ್ ಸಂಸ್ಥೆ ಸಹಯೋಗದಲ್ಲಿ ಜರುಗಿದ ಆರನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಪೈಗಂಬರ್ ಜೀವನಗಾಥೆ ಅತ್ಯಂತ ಕಷ್ಟಕರವಾಗಿತ್ತು. ಅನೇಕ ನೋವು ಸಹಿಸಿಕೊಂಡು ಮಾನವ ಜನಾಂಗಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ತತ್ವ,ಆದರ್ಶ ನಮ್ಮ ಜೀವನದಲ್ಲಾದರೂ ಅಳವಡಿಸಿಕೊಳ್ಳಬೇಕು ಎಂದರು.ಕಾಡಾ ಅಧ್ಯಕ್ಷ ಹಸನ್ಸಾಬ್ ದೋಟಿಹಾಳ ಮಾತನಾಡಿ, ಹೈದರಲಿ ಕಮಿಟಿಯ ಯುವಕರು ಪ್ರತಿವರ್ಷವೂ ನಿರಂತರವಾಗಿ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಯುವಕರ ಪರಿಶ್ರಮ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ರಕ್ತದಾನ ಮಾಡಿ ದಾಖಲೆ ನಿರ್ಮಿಸಬೇಕು. ಪ್ರವಾದಿಗಳು ಕೂಡ ತಮ್ಮ ದುಡಿಮೆಯ ಒಂದು ಭಾಗ ಹಸಿದವರಿಗೆ ದಾನ ಮಾಡಬೇಕೆಂದು ಸಾರಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ್, ಪುರಸಭೆ ಮಾಜಿ ಸದಸ್ಯ ಉಮೇಶ್ ಮಂಗಳೂರು, ಮೈನುದ್ದೀನ್ ಮುಲ್ಲಾ ಸೇರಿದಂತೆ ಹಲವರು ಮಾತನಾಡಿದರು.ಮುಖಂಡರಾದ ಮುರ್ತುಜಾ ಪೆಂಟರ್, ಅಹ್ಮದ್ ಹುಸೇನ್ ಆದೋನಿ, ಪೈರೋಜ್, ಹುಸೇನ್ ಆರ್. ಕಾಯಿಗಡ್ಡಿ, ಅಧ್ಯಕ್ಷ ರಾಜೇಸಾಬ್ ಮಾಟಲದಿನ್ನಿ, ಶಾಮಿದ್ ಯಲಬುರ್ಗಿ, ಮೆಹಬೂಬ್ ನದಾಫ್, ಶಾಮಿದ್ ಕಂಚಿ, ಚಾಂದ್ ಕಾಯಿಗಡ್ಡಿ, ಸದ್ದಾಂ ಡಿ. ಗುಮಗೇರಿ, ಜಿಲಾನ ಸದ್ದಾಂ ಕಾಯಿಗಡ್ಡಿ, ಸಮೀರ್ ಅಲ್ತಾಫ್ ಲಡ್ಡಿ, ಬಂದೇನವಾಜ್ ಸೇರಿದಂತೆ ಕಮಿಟಿ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಯುವಕರಿದ್ದರು.
ನಂತರ ನಡೆದ ರಕ್ತದಾನ ಶಿಬಿರದಲ್ಲಿ ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು.