ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದಲ್ಲಿ ತಮಿಳುನಾಡಿನ ಅಧಿಕಾರಿಗಳ ಪ್ರಭಾವ ಹೆಚ್ಚಿದೆ. ನಾವು ಏನೇ ಹೇಳಿದರೂ ಕೇಳದೆ ನೀರು ಬಿಡುವಂತೆ ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೆಟ್ಟೂರು ಜಲಾಶಯದಲ್ಲಿ ನೀರು ಸಂಗ್ರಹಿಸಿಕೊಂಡು, ಕರ್ನಾಟಕದಿಂದ ನೀರು ಬಿಡಿಸುವುದು ನ್ಯಾಯಸಮ್ಮತವಲ್ಲ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಹೇಳುವ ಪರಿಸ್ಥಿತಿ ಇದ್ದರೆ, ತಮಿಳುನಾಡಿನಲ್ಲಿ ಬೆಳೆ ಬೆಳೆಯಲು ನೀರು ಬಿಡಲಾಗುತ್ತಿದೆ. ಈ ತಾರತಮ್ಯವನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಬಾರದು ಎಂಬುದು ತಮ್ಮ ನಿಲುವು ಎಂದರು.ಕಾವೇರಿ ವಿಚಾರದಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿರುವುದನ್ನು ಉಲ್ಲೇಖಿಸಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡಲು ಮತ್ತಷ್ಟು ಪರಿಣಾಮಕಾರಿ ಕಾನೂನು ಹೋರಾಟ ಅಗತ್ಯವಿದೆ ಎಂದರು.
ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಕೆದಾಟು ಯೋಜನೆ ನಿರ್ಮಾಣವಾಗಬೇಕು, ಕರ್ನಾಟಕದ ಹಿತದ ವಿಚಾರದಲ್ಲಿ ಕೇಂದ್ರದ 18 ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ವಿರೋಧ ಪಕ್ಷವನ್ನು ಈ ಬಾರಿ ನೋಡುತ್ತಿದ್ದೇವೆ ಎಂದು ಅವರು ವಾಗ್ದಾಳಿ ನಡೆಸಿದರು.
ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಸಂಬಂಧಿಸಿದವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಶಾಸಕ ಪಿ. ರವಿಕುಮಾರ್ ಆರೋಪಿಸಿದರು.
ಸತೀಶ್ ಜಾರಕಿಹೋಳಿ ಅವರ ಬಾಮೈದರಿಂದ ತಪ್ಪು ನಡೆದಿದೆಯೇ ಎಂಬುದು ಗೊತ್ತಿಲ್ಲ. ಆದರೆ, ಅದಕ್ಕೂ ಸತೀಶ್ ಜಾರಕಿಹೋಳಿ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಗಣಿಗ, ಸರ್ಕಾರದಲ್ಲಿ ಬಿರುಕು ಮೂಡಿಸಬಹುದೇ ಎಂಬ ಉದ್ದೇಶದಿಂದ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ ಎಂದರು.
ಸತೀಶ್ ಜಾರಕಿಹೋಳಿ ಅವರು ಕಾಂಗ್ರೆಸ್ನ ನಿಷ್ಠಾವಂತ ಸಚಿವರಾಗಿದ್ದು, ಅವರ ವಿರುದ್ಧದ ಕ್ರಮವನ್ನು ಬಿಜೆಪಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದರು.