ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿ ಗ್ರಾಮದಲ್ಲಿ 11ನೇ ವರ್ಷದ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ವೇದಿಕೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಸೊರಬ

ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿ ಗ್ರಾಮದಲ್ಲಿ 11ನೇ ವರ್ಷದ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ವೇದಿಕೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ.

ದಸರಾ ಮಹೋತ್ಸವದ ಆಯೋಜನೆ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ವೇದಿಕೆಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 2026-27ನೇ ಸಾಲಿನ ಅಧ್ಯಕ್ಷರಾಗಿ ಎಂ.ಬಿ. ರೇಣುಕಾಪ್ರಸಾದ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧಾಕರ್ ಪಿ. ನಾಯ್ಕ್, ಕಾರ್ಯದರ್ಶಿಯಾಗಿ ಪ್ರಜ್ವಲ್ ಚಂದ್ರಗುತ್ತಿ, ಖಜಾಂಚಿಯಾಗಿ ಎನ್.ಜಿ. ನಾಗರಾಜ್ ಹಾಗೂ ಸಹ-ಕಾರ್ಯದರ್ಶಿಯಾಗಿ ಪ್ರಕಾಶ್ ಮಿರ್ಜಿ ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಮಾತನಾಡಿ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪೂರ್ಣ ಸಹಯೋಗದೊಂದಿಗೆ ಈ ಬಾರಿಯ ದಸರಾ ಉತ್ಸವ ಶ್ರೇಷ್ಠ ಮಟ್ಟದಲ್ಲಿ ಆಚರಿಸಲಾಗುವುದು. ವಿಶೇಷವಾಗಿ 9 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರೋಮಾಂಚನಕಾರಿ ಜಂಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲು ತೀರ್ಮಾನಿಸಲಾಗಿದೆ. ಎರಡು ದಿನಗಳಲ್ಲಿ ಚಂದ್ರಗುತ್ತಿ ಸಹಿತ ಅಕ್ಕಪಕ್ಕದ ಗ್ರಾಮಗಳ ಪ್ರಮುಖರ ಜಂಟಿ ಸಭೆ ಕರೆದು ಉತ್ಸವದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಸಚಿವ ಮಧು ಬಂಗಾರಪ್ಪ ಚಾಲನೆ: ಸಚಿವ ಮಧು ಬಂಗಾರಪ್ಪ ದಸರಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉತ್ಸವಕ್ಕೆ ನಿರಂತರ ಪ್ರೋತ್ಸಾಹ ಹಾಗೂ ಹೆಚ್ಚಿನ ಸಹಕಾರ ನೀಡಲಿದ್ದಾರೆ. ಈ ಉತ್ಸವವನ್ನು ಜಾತಿ, ಮತ ಹಾಗೂ ಪಕ್ಷದ ಭೇದಭಾವವಿಲ್ಲದೆ ಸರ್ವರನ್ನೂ ಒಗೂಡಿಸಿ ಅತ್ಯಂತ ಸೌಹಾರ್ದಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಹಾಗೂ ಧರ್ಮಾಭಿಮಾನಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು.

ಸಭೆಯಲ್ಲಿ ಗ್ರಾಮದ ಹಿರಿಯರು ಉತ್ಸವ ನಿರ್ವಹಣೆ ಕುರಿತು ಚರ್ಚಿಸಿದರು. ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಸುಧಾಕರ್ ಪಿ. ನಾಯ್ಕ್, ಕಾರ್ಯದರ್ಶಿ ಪ್ರಜ್ವಲ್ ಚಂದ್ರಗುತ್ತಿ, ಖಜಾಂಚಿ ಎನ್.ಜಿ. ನಾಗರಾಜ್, ಗ್ರಾಪಂ ಮಾಜಿ ಸದಸ್ಯರ ಎಂ.ಪಿ ರತ್ನಾಕರ, ಶ್ರೀಮತಿ, ಲಕ್ಷ್ಮೀ, ದಸರಾ ಸಾಂಸ್ಕೃತಿಕ ವೇದಿಕೆ ಮಹಿಳಾ ಸಂಚಾಲಕಿ ಶಕುಂತಲಾ ಶೇಟ್, ರೇಣುಕಾ, ಉಷಾ, ಭವಾನಿ, ಸಹ ಕಾರ್ಯದರ್ಶಿ ಪ್ರಕಾಶ್ ಮಿರ್ಜಿ, ರಾಮಪ್ಪ ಗದ್ದೆಮನೆ, ಶಿವಪ್ಪ, ಗಣೇಶ್ ಮರಡಿ, ಸುರೇಶ್, ಚಂದ್ರಕಾಂತ್, ಕಿರಣ್, ರವಿ, ಧರ್ಮಪ್ಪ, ಅಶೋಕ್, ಪರಮೇಶ್, ಕೃಷ್ಣ, ಆನಂದ ಸಹಿತ ಗ್ರಾಮದ ಪ್ರಮುಖ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.