ಹೆಚ್ಚುತ್ತಿದೆ ನಕಲಿ ಜನನ- ಮರಣ ಪತ್ರಗಳ ಹಾವಳಿ

KannadaprabhaNewsNetwork | Published : Aug 22, 2024 12:52 AM

ಸಾರಾಂಶ

ತಹಸೀಲ್ದಾರ್‌ ಕಚೇರಿಯ ಮೂಗಿನ ಕೆಳಗೆ ಈ ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಾಜಾರೋಷವಾಗಿ ಅವ್ಯವಹಾರ ಮಾಡುತ್ತಿದ್ದಾರೆ. ಈಗ ತಾಲೂಕಿನಲ್ಲಿ ಭೂಮಿಗಾಗಿ ನಕಲಿ ದಾಖಲೆ ಸೃಷ್ಟಿಯಾಗುತ್ತಿದ್ದು, ಪೂರಕವಾಗಿ ಸತ್ತವನ ಹೆಸರಿನಲ್ಲಿಯೂ ಮರಣ ಪತ್ರಗಳಿಗೆ ನಕಲಿ ಮರಣ ಪತ್ರ ತಯಾರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ಸತ್ತು ದಶಕ ಕಳೆದರೂ ನಿಮಗೆ ಈಗ ಮರಣ ಪತ್ರ ಬೇಕಾ? ಹುಟ್ಟಿ ದಶಕವಾದರೂ ಜನನ ಪತ್ರಬೇಕಾ? ಏನು ಯೋಚನೆ ಮಾಡದೆ ಮಾಲೂರು ಪಟ್ಟಣದ ಮಿನಿ ವಿಧಾನಸೌಧದ ಹಿಂದಿನ ರಸ್ತೆಗೆ ಹೋದರೆ ಸಾಕು. ಜನನ- ಮರಣ ಪತ್ರವು ಆಸ್ಪತ್ರೆ ಅಥವಾ ಪುರಸಭೆಗೆ ಅರ್ಜಿ ಹಾಕದೆ ನಿಮ್ಮ ಕೈಗೆ ಸಿಗಲಿದೆ. ಇದಕ್ಕಾಗಿಯೇ ಏಜೆಂಟ್‌ ಗಳ ಮಳಿಗೆಗಳಿದ್ದು, ಮೂರು- ನಾಲ್ಕು ಸಾವಿರ ರು. ಹಣ ಖರ್ಚು ಮಾಡಿದರೆ ಸಾಕು, ನಿಮ್ಮ ಕೈಗೆ ಜನನ- ಮರಣದ ನಕಲಿ ಪ್ರಮಾಣ ಪತ್ರ ಸಿಗಲಿದೆ ಸಿಗಲಿದೆ.

ತಹಸೀಲ್ದಾರ್‌ ಕಚೇರಿಯ ಮೂಗಿನ ಕೆಳಗೆ ಈ ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಾಜಾರೋಷವಾಗಿ ಅವ್ಯವಹಾರ ಮಾಡುತ್ತಿದ್ದಾರೆ. ಈಗ ತಾಲೂಕಿನಲ್ಲಿ ಭೂಮಿಗಾಗಿ ನಕಲಿ ದಾಖಲೆ ಸೃಷ್ಟಿಯಾಗುತ್ತಿದ್ದು, ಪೂರಕವಾಗಿ ಸತ್ತವನ ಹೆಸರಿನಲ್ಲಿಯೂ ಮರಣ ಪತ್ರಗಳಿಗೆ ನಕಲಿ ಮರಣ ಪತ್ರ ತಯಾರಿಸುತ್ತಿದ್ದಾರೆ. ಈ ದಂಧೆಗೆ ಕನ್ನಡ ಪರ ಸಂಘಟನೆಯೊಂದರ ಮುಖಂಡನ ಬಲ ಇದ್ದು, ಎಗ್ಗಿಲ್ಲದೇ ಈ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಇಲ್ಲಿನ ಪುರಸಭೆ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ನಕಲಿ ಪ್ರಮಾಣಪತ್ರಗಳನ್ನು ಕಂಡು ಹಿಡಿದು ವಾಪಸ್ಸು ಕಳುಹಿಸಲಾಗುತ್ತಿದ್ದರೂ ಈ ಎರಡು ಸೇವಾ ಕೇಂದ್ರಗಳು ಈ ಬಗ್ಗೆ ಇದುವರೆಗೂ ದೂರು ನೀಡದಿರುವುದು ಅನುಮಾನಕ್ಕೆ ಅಸ್ಪದ ಮಾಡಿಕೊಟ್ಟಿದೆ.

ಈ ದಂಧೆ ಬಗ್ಗೆ ಬೆಳಕು ಚೆಲ್ಲಿರುವ ಪುರಸಭೆ ಸದಸ್ಯ ಭಾನುತೇಜಾ ಮಾತನಾಡಿ, ಈ ದಂಧೆ ಬಗ್ಗೆ ಈಗಾಗಲೇ ಆಸ್ವತ್ರೆ ವೈದ್ಯಾಧಿಕಾರಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ ಅವರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ, ಪೊಲೀಸ್‌ ಇಲಾಖೆ ಈ ದಂಧೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ಮಾತನಾಡಿ, ನಕಲಿ ದಾಖಲೆಗಳ ಬಗ್ಗೆ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿದ್ದು, ಈ ದಂಧೆ ನಡೆಯುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಸ್ಥಳೀಯ ಪೊಲೀಸ್‌ ಇನ್ಸ್‌ ಪೆಕ್ಟರ್‌ ಗಮನಕ್ಕೆ ತರಲಾಗಿದೆ. ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

Share this article