ರಾಮನಗರ: ಈ ಜಿಲ್ಲೆಯ ಮಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಹೊಟ್ಟೆಯೊಳಗೆ ತೊಳಸಿ, ಬೆಂಕಿ ಇಟ್ಟಂತೆ ಕಾಣುತ್ತಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ನಾವು ಈ ಜಿಲ್ಲೆಯ ಮಕ್ಕಳು. ಇಲ್ಲಿ ಹುಟ್ಟಿ, ಇಲ್ಲಿ ಬೆಳೆದಿರುವ ನಾವು ಇಲ್ಲೇ ಸಾಯುವವರು. ನಮ್ಮ ಬದುಕನ್ನು ಇಲ್ಲಿಯೇ ಕಟ್ಟಿಕೊಂಡಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಡಿ. ಬೇರೆ ಕಡೆ ಹುಟ್ಟಿ ಬಂದವರು ಇಲ್ಲಿ ಸಾಯಬಹುದು. ಬೆಳಗ್ಗೆ ಎದ್ದು ಬಯ್ಯುವವರ ಢೋಂಗಿ ಮಾತುಗಳನ್ನು ನಂಬ ಬೇಡಿ ಎಂದು ಹೇಳಿದರು.
ನಮ್ಮ ಜನರಿಗೂ ಬುದ್ಧಿಭ್ರಮಣೆ ಆದಂತಿದೆ. ಚುನಾವಣೆ ಬಂದಾಗ ನಾವು ಮಾಡಿರುವ ಕೆಲಸಗಳನ್ನು ಮರೆತು ಬಿಡುತ್ತಾರೆ. ಡಿ.ಕೆ.ಸುರೇಶ್ ಅವರಂತಹ ಒಬ್ಬ ನಾಯಕನನ್ನು ಉಳಿಸಿಕೊಳ್ಳಲಾಗಲಿಲ್ಲ ಅಂದರೆ ಅದಕ್ಕಿಂತ ದುರಂತ ಇಲ್ಲ. ಚುನಾವಣೆಯಲ್ಲಿ ಸೋತಿದ್ದರೂ ಡಿ.ಕೆ.ಸುರೇಶ್ ರವರು ಜನರಿಂದ ದೂರವಾಗದೆ, ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.ಜಿಲ್ಲೆಯನ್ನು ನೀರಾವರಿ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರವನ್ನು ಪರಿಪೂರ್ಣವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಇಚ್ಛಾಸಕ್ತಿ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವಕ್ಕಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜನರು ಬೇರೆ ಆಲೋಚನೆಗಳಿಗೆ ಕಿವಿ ಗೊಡದೆ ನಮ್ಮ ಕೈ ಬಲಪಡಿಸಬೇಕು ಎಂದು ಬಾಲಕೃಷ್ಣ ಮನವಿ ಮಾಡಿದರು.
ಕುಮಾರಸ್ವಾಮಿರವರ ಪಾಪದ ಕೊಳೆ ತೊಳೆಯುತ್ತಿದ್ದೇವೆ - ಡಿ.ಕೆ.ಸುರೇಶ್
ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಮಹಾನ್ ನಾಯಕರು ಪಾಪದ ಕೊಳೆ ಬಿಟ್ಟು ಹೋಗಿದ್ದಾರೆ. ಆ ಕೊಳೆಯನ್ನು ತೆಳೆಯುವ ಕೆಲಸವನ್ನು ಹಂತ ಹಂತವಾಗಿ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಆ ನಾಯಕರ ಪಾಪದ ಫಲವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತೊಳೆಯುವ ಕೆಲಸವನ್ನು ಹಂತ ಹಂತವಾಗಿ ಮಾಡುತ್ತಿದ್ದೇವೆ. ಅದರ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಚಿತ್ರಣವನ್ನು ಬದಲಿಸಲು ನಗರ ಗ್ರಾಮೀಣ ಪ್ರದೇಶಗಳ ಯುವ ಜನರಿಗೆ ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.
22ಕೆಆರ್ ಎಂಎನ್ 2.ಜೆಪಿಜಿ
----------------------------