ರಾಯಚೂರು: ಜಿಲ್ಲೆ ಸಿಂಧನೂರು ತಾಲೂಕಿನ ಸಮೀಪದ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸಂಚಾಲಿತ ಶ್ರೀಗುರುಸಾರ್ವಭೌಮ ವಿದ್ಯಾಪೀಠದ ನಾಲ್ಕು ಜನ ಸಾಂಸ್ಕೃತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಶ್ರೀಮಠದಿಂದ ಶ್ರೀಗುರುರಾಯರ ಪ್ರಸಾದದ ರೂಪದಲ್ಲಿ ಆರ್ಥಿಕ ನೆರವು ನೀಡಲಾಯಿತು.
ಕಳೆದ ವರ್ಷ ಶ್ರೀಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು ಮಂತ್ರಾಲಯದಿಂದ ಆನೆಗುಂದಿಗೆ ಹೋಗುತ್ತಿದ್ದ ಸಮಯದಲ್ಲಿ ಸಿಂಧನೂರು ಸಮೀಪ ರಸ್ತೆ ಅಪಘಾತವಾಗಿ ಕೊಪ್ಪಳದ ಅಭಿಲಾಷ್, ಗಂಗಾವತಿ ಹಯವದನ, ಮಂತ್ರಾಲಯದ ಸುಜಯೀಂದ್ರ, ಬಳ್ಳಾರಿ ಜಯಸಿಂಹ ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಅಲ್ಲದೇ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಕ್ರಿಯೆ ಸೇರಿದಂತೆ ಬ್ರಾಹ್ಮಣದ ವಿಧಿವಿಧಾನದ ಕರ್ಮಗಳಿಗೆ ಶ್ರೀಮಠ ನೆರವು ನೀಡಿತ್ತು. ಮುಂದಿನ ದಿನಗಳಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬದವರಲ್ಲಿ ಕೆಲವರು ಈಗಾಗಲೇ ಶ್ರೀಮಠದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನುಳಿದ ಕುಟುಂಬದ ಪಾಲಕರಲ್ಲಿ ಆಪೇಕ್ಷ ವ್ಯಕ್ತಪಡಿಸಿದ್ದಲ್ಲಿ ಅವರ ಯೋಗ್ಯತೆ ಅನುಸಾರವಾಗಿ ಉದ್ಯೋಗ ಕಲ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಭರವಸೆಯನ್ನು ನೀಡಿದರು. ವಿದ್ಯಾಪೀಠದ ಪ್ರಾಚಾರ್ಯರಾದ ಎನ್.ವಾದಿರಾಜಾಚಾರ್ ಹಾಗೂ ಶ್ರೀಮಠದ ಪಂಡಿತರು, ವಿದ್ವಾಂಸರು, ಕುಟುಂಬಸ್ಥರು, ವಿದ್ಯಾರ್ಥಿಗಳು ಭಕ್ತರು ಇದ್ದರು.