ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ಪ್ರಪಂಚದಲ್ಲಿಯೇ ವಿಶಿಷ್ಟವಾದದ್ದು: ವೆಂಕಟರಾಜು

KannadaprabhaNewsNetwork |  
Published : Aug 25, 2025, 01:00 AM IST
ಹಿರಿಯ ಸಾಹಿತಿ ಕೆ.ವೆಂಕಟರಾಜು ಹೇಳಿದರು | Kannada Prabha

ಸಾರಾಂಶ

ಕನ್ನಡ ಸಾಹಿತಿಗಳು ಕೇವಲ ಹೋರಾಟದ ಚಿತ್ರಣ ಮಾತ್ರವಲ್ಲ, ಈ ಮೌಲ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ. ಬೇಂದ್ರೆಯವರು ತಮ್ಮ ಬರವಣಿಗೆಯ ಕಾರಣಕ್ಕೆ ಜೈಲಿಗೆ ಹೋದರು. ಕುವೆಂಪುರವರ ಎರಡು ಸಂಕಲನ - ಅಗ್ನಿಹಂಸ ಮತ್ತು ಕೋಗಿಲೆ ಹಾಗೂ ಸೋವಿಯತ್ ರಷ್ಯಾದಲ್ಲಿ ಇದೇ ವಸ್ತು ಹೊಂದಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸ್ವಾತಂತ್ರ್ಯಹೋರಾಟ ಇತಿಹಾಸ ಸೇರಿರುವ ಚಳವಳಿ ಮಾತ್ರವಲ್ಲ, ಈ ದೇಶದ ಅಸ್ತಿತ್ವ ಇರುವವರೆಗೂ ಅದನ್ನು ನೆನಪಿಸಿಕೊಂಡು ಅದರ ವಿವಿಧ ಆಯಾಮಗಳು ಪರಿಶೀಲನೆಗೆ ಒಳಪಡುತ್ತಿರಬೇಕು. ಈ ದೃಷ್ಟಿಯಿಂದ ೨೫ ವರ್ಷಗಳ ಹಿಂದೆ ಪ್ರಕಟವಾದ ಎಚ್.ನಾಗವೇಣಿಯವರ ‘ಗಾಂಧಿ ಬಂದ’ ಎಂಬ ಕೃತಿ ಪೂರಕವಾಗಿದೆ ಎಂದು‌ ಹಿರಿಯ ಸಾಹಿತಿ ಕೆ.ವೆಂಕಟರಾಜು ಹೇಳಿದರು.

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಮಾತನಾಡಿದರು.

ಭಾರತದಲ್ಲಿ‌ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ಪ್ರಪಂಚದಲ್ಲಿಯೇ ವಿಶಿಷ್ಟವಾದದ್ದು, ನಮ್ಮ ಸ್ವಾತಂತ್ರ್ಯ ಚಳವಳಿ ಏಷ್ಯಾ ಮತ್ತು ಆಫ್ರಿಕಾದ ಅನೇಕ‌ ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ‌ ಮತ್ತು‌ ಪ್ರೇರಣೆ ಒದಗಿಸಿದೆ. ಶಸ್ತ್ರಕ್ರಾಂತಿ ನಡೆಸದೇ ಸತ್ಯ ಮತ್ತು ಅಹಿಂಸೆಯ ಅಸ್ತ್ರ ಬಳಸಿ ಜಗತ್ತೇ ಬೆರಗಾಗುವ ರೀತಿಯಲ್ಲಿ ನಾವು ಸ್ವಾತಂತ್ರ್ಯ‌ ಪಡೆದೆವು ಎಂದು ವಿವರಿಸಿದರು.

ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಕೇವಲ ಬ್ರಿಟಿಷರಿಂದ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಹೊಸ ನಾಗರಿಕತೆ ಮತ್ತು ಸಂಸ್ಕೃತಿಯ ನಿರ್ಮಾಣ, ಹೊಸ ಆಲೋಚನೆಯೊಂದಿಗೆ ಬದುಕನ್ನು ರೂಪಿಸುವುದು ಗುರಿಯಾಗಿತ್ತು. ಅಸ್ಪೃಶ್ಯತಾ ನಿವಾರಣೆ, ಸರ್ವಧರ್ಮ ಸಮ ಭಾವ, ಖಾದಿ ಮತ್ತು ಗ್ರಾಮೀಣ ಗುಡಿ ಕೈಗಾರಿಕೆ, ಸರಳ ಬದುಕು, ಜನಜೀವನದ ಪ್ರತಿ ಅಂಶದಲ್ಲಿಯೂ ವೈಜ್ಞಾನಿಕತೆ ಇತ್ಯಾದಿ ಮೌಲ್ಯಗಳನ್ನು ಮುಂದಿಟ್ಟಿತು. ವಾಟ್ಸಾಪ್ ವಿಶ್ವವಿದ್ಯಾನಿಲಯಗಳ ಸುಳ್ಳು ಪ್ರಚಾರಗಳಿಗೆ ವಿದ್ಯಾರ್ಥಿಗಳು ಕಿವಿ ಗೊಡದೇ ಸತ್ಯ ಅರಿಯುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತಿಗಳು ಕೇವಲ ಹೋರಾಟದ ಚಿತ್ರಣ ಮಾತ್ರವಲ್ಲ, ಈ ಮೌಲ್ಯಗಳ ಪರಿಶೀಲನೆಯನ್ನು ಮಾಡಿದ್ದಾರೆ. ಬೇಂದ್ರೆಯವರು ತಮ್ಮ ಬರವಣಿಗೆಯ ಕಾರಣಕ್ಕೆ ಜೈಲಿಗೆ ಹೋದರು. ಕುವೆಂಪುರವರ ಎರಡು ಸಂಕಲನ - ಅಗ್ನಿಹಂಸ ಮತ್ತು ಕೋಗಿಲೆ ಹಾಗೂ ಸೋವಿಯತ್ ರಷ್ಯಾದಲ್ಲಿ ಇದೇ ವಸ್ತು ಹೊಂದಿವೆ. ಸ್ವತಂತ್ರ ಭಾರತ ಮತ್ತು ಸಂಯುಕ್ತ ಕರ್ನಾಟಕ ನಮ್ಮ ಗುರಿಯಾಗಿತ್ತು. ಕುವೆಂಪು ಅವರ ಕವನಗಳಲ್ಲಿ ವೈಜ್ಞಾನಿಕತೆಯ ಮೂರನೇ ಅಯಾಮವೂ‌ ಇದೆ. ಪುತಿನ‌, ರಾಜರತ್ನಮ್ ,ಗೊರೂರರು, ಬಸವರಾಜ ಕಟ್ಟೀಮನಿ, ನಿರಂಜನ, ಅನಕೃರವರ ಬರಹಗಳಲ್ಲಿ ಇವುಗಳನ್ನು ಕಾಣಬಹುದು. ಪಂಜೆ ಮಂಗೇಶರಾಯರ ನಾಗರ ಹಾವು ಪದ್ಯ ಮಕ್ಕಳ‌ಪದ್ಯ ಎಂದು ಬಿಂಬಿತವಾಗಿದ್ದರೂ ಅದು ಮಾರ್ಮಿಕವಾಗಿ ನಮ್ಮನ್ನು ಆಳುವವರನ್ನು‌ ಹಂಗಿಸುತ್ತಿತ್ತು ಎಂದು ಹೇಳಿದರು.

ಸುಗಮ ಸಂಗೀತ ಗಾಯಕ ಸಿ.ಎಂ. ನರಸಿಂಹಮೂರ್ತಿ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪವಿತ್ರಾ ಅವರು ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ‌ ಸ್ವಾಗತಿಸಿದರೆ ಕೊನೆಯಲ್ಲಿ ಸಂಚಾಲಕರಾದ ಪ್ರೊ. ಎ. ಎಂ. ಶಿವಸ್ವಾಮಿ ಅವರು ವಂದಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ