ಅನಗತ್ಯ ಸಿಬ್ಬಂದಿ ಕಡಿಮೆ ಮಾಡಲು ಸಮಿತಿ

KannadaprabhaNewsNetwork |  
Published : Jun 29, 2024, 12:39 AM IST
36 | Kannada Prabha

ಸಾರಾಂಶ

ಶೀಘ್ರದಲ್ಲೇ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿವಿಯಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ನಿಗದಿಪಡಿಸಿದಕ್ಕಿಂತ ಹೆಚ್ಚುವರಿ ನೇಮಕವಾದ ಬೋಧಕೇತರ ಸಿಬ್ಬಂದಿ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ (ಕಡಿತ) ಸಂಬಂಧ ಪರಾಮರ್ಶಿಸಿ ವರದಿ ನೀಡಲು ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆಯಲ್ಲಿ ನಾಲ್ವರ ಸಮಿತಿ ರಚಿಸಲಾಗಿದೆ.

ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಣ ಮಂಡಳಿ ಮೊದಲನೇ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಬೋಧಕೇತರ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿರುವುದರಿಂದ ಆಗುತ್ತಿರುವ ವೇತನ ಹೊರೆಯ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಪ್ರಸ್ತಾಪಿಸಿದ ವಿಷಯ ಕುರಿತು ವ್ಯಾಪಕ ಚರ್ಚೆ ನಡೆಯಿತು.

ಶೀಘ್ರವೇ ಕ್ರಮ:

ಈ ಸಂಬಂಧ ಶೀಘ್ರದಲ್ಲೇ ಸಮಿತಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಮೈಸೂರು ವಿವಿಗೆ ಬರೆದಿದ್ದ ಪತ್ರದ ಆಧಾರದ ಮೇಲೆ ಈ ಕ್ರಮಕೈಗೊಂಡಿದೆ. ಮೈಸೂರು ವಿವಿಯ ವಿವಿಧ ವಿಭಾಗ, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ ಅಧ್ಯಾಪಕೇತರ ಉದ್ಯೋಗಿಗಳನ್ನು ಸೇವೆಯಲ್ಲಿ ಮುಂದುವರಿಸುವ ಹಾಗೂ ಸಿಬ್ಬಂದಿ ಸಂಖ್ಯೆಯನ್ನು ತರ್ಕಬದ್ಧಗೊಳಿಸಲು ಪರಾಮರ್ಶಿಸಿ ವರದಿ ಪಡೆಯಲು ನಿರ್ಧರಿಸಿ ಸಮಿತಿ ರಚಿಸಿ ವರದಿ ಕೊಡುವಂತೆ ಹೇಳಿದೆ.

ವಿಶ್ರಾಂತ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆಯ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ. ರಾಮು, ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಜಂಟಿ ನಿಬಂಧಕ ರಾಮಚಂದ್ರ ಸ್ವಾಮಿ ಸದಸ್ಯರಾಗಿ, ವಿವಿಯ ಉಪ ಕುಲಸಚಿವ ಕೆ. ನರೇಂದ್ರ ಸಂಚಾಲಕರಾಗಿದ್ದಾರೆ. ಈ ಸಮಿತಿ ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ಕುಲಸಚಿವೆ ವಿ.ಆರ್. ಶೈಲಜಾ ಹೇಳಿದರು.

ಮಂಜೇಗೌಡ ಅಸಮಾಧಾನ:

ಬೋಧಕೇತರ ಸಿಬ್ಬಂದಿ ಹೆಚ್ಚು ನೇಮಿಸಿಕೊಂಡಿರುವುದರಿಂದ ವಾರ್ಷಿಕ 25 ಕೋಟಿ ರು. ಪಾವತಿಸಬೇಕಾಗುತ್ತದೆ ಎಂದು ಸಿ.ಎನ್. ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 2001 ರಿಂದ 2010 ರವರೆಗೆ ಹೆಚ್ಚು ನೇಮಕವಾಗಿದೆ. 2015ರ ಅವಧಿಯಲ್ಲೂ ನೇಮಕಾತಿ ಆಗಿದೆ. ನಾವು ಬಂದ ಮೇಲೆ ನೇಮಕಾತಿ ನಡೆದಿಲ್ಲ ಎಂದು ಹೇಳಿದರು.

ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ವಿವಿಯಲ್ಲಿ 1,340 ಬೋಧಕೇತರ ಸಿಬ್ಬಂದಿ ಇದ್ದಾರೆ. 400 ಮಂದಿ ಹುದ್ದೆಗಳು ಸೃಜನೆಯಾಗಿವೆ. ಆದರೆ, ಕಾಲಕಾಲಕ್ಕೆ ಹೊರಗುತ್ತಿಗೆ, ತಾತ್ಕಾಲಿಕ ಆಧಾರದ ಮೇಲೆ ವಿವಿಧ ಹಂತದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಸಿಬ್ಬಂದಿ ಕಡಿತಗೊಳಿಸುವಂತೆ ನಿರ್ದೇಶನ ನೀಡಿದ್ದರಿಂದ ತರ್ಕ ಬದ್ಧಗೊಳಿಸಲು ಸಮಿತಿ ರಚಿಸಲಾಗಿದೆ ಎಂದು ಅವರು ವಿವರಿಸಿದರು. ಸಿಬ್ಬಂದಿ ತರ್ಕಬದ್ಧಗೊಳಿಸುವ ಸಂಬಂಧ ಸಮಿತಿ ವರದಿಯ ಬಳಿಕ ಸರ್ಕಾರದ ಗಮನಕ್ಕೂ ತರಲಾಗುವುದು ಎಂದರು.ವಿವಿಯಲ್ಲಿ ಕೆಲಸ ಮಾಡುವ ಬೋಧಕೇತರ ಸಿಬ್ಬಂದಿ ವೇತನವನ್ನು ಎಚ್ಆರ್‌ಎಂಎಸ್ ಅಡಿಗೆ ತರಲು ಸರ್ಕಾರದ ಗಮನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸುವಂತೆ ಸದಸ್ಯ ಸಿ.ಎನ್. ಮಂಜೇಗೌಡರಲ್ಲಿ ಪ್ರೊ.ಡಿ. ಆನಂದ್ ಮನವಿ ಮಾಡಿದರು.

ಕುಲಸಚಿವರಾದ ವಿ.ಆರ್. ಶೈಲಜಾ, ಡಾ. ಬಸಪ್ಪ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಇದ್ದರು.

-- ಬಾಕ್ಸ್‌--

-- ಕಾನೂನು ಬಾಹಿರ-

ಕಲಾ ನಿಕಾಯದ ಡೀನ್ ಮಾತನಾಡಿ, ಪಿಂಚಣಿ ಖಾತೆಯಿಂದ ಹಣವನ್ನು ತೆಗೆದುಕೊಳ್ಳುವುದು ಸರಿಯಲ್ಲ. ಇದು ಕಾನೂನುಬಾಹಿರವಾಗಲಿದೆ ಎಂದರೆ, ಪ್ರೊ.ಡಿ.ಆನಂದ್, 1,852 ನೌಕರರಿಗೆ ಪಿಂಚಣಿ ಪಾವತಿಬೇಕು. ಮುಂದೆ ಅದರ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ, ನೌಕರರ ವೇತನ ಮತ್ತು ಪಿಂಚಣಿಯನ್ನು ಎಚ್ಆರ್ಎಂಎಸ್ ಅಡಿಗೆ ತರುವಂತೆ ಸರ್ಕಾರದ ಗಮನಕ್ಕೆ ತರಬೇಕು. ಪಿಂಚಣಿ ಹಣ ಬಳಕೆಯ ಬಗ್ಗೆ ಅನೇಕರಿಗೆ ಗುಮಾನಿ ಬಂದು ಪ್ರಶ್ನೆ ಮಾಡುತ್ತಾರೆ. ಶೈಕ್ಷಣಿಕ ಕೆಲಸಗಳಿಗೆ ಒತ್ತು ನೀಡಬೇಕಾದರೆ ಗುಮಾನಿ ವಾತಾವರಣ ಇರಬಾರದು ಎಂದು ಹೇಳಿದರು.

ಕುಲಪತಿ ಪ್ರೊಎನ್.ಕೆ. ಲೋಕನಾಥ್ ಪ್ರತಿಕ್ರಿಯಿಸಿ ಪಿಂಚಣಿ ಖಾತೆಯಿಂದ ಪಿಂಚಣಿಗೆ ಬಳಕೆ ಮಾಡಲಾಗಿದೆಯೇ ಹೊರತು ಬೇರೆಯದಕ್ಕೆ ನಾವು ಬಳಸಲು ಅವಕಾಶ ನೀಡಿಲ್ಲ. ಸರ್ಕಾರ ಪಿಂಚಣಿ ಹಣವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಿದೆ. 2108 ರಿಂದ ಅಭಿವೃದ್ಧಿ ಅನುದಾನ ಕೊಡದೆ ನಿಲ್ಲಿಸಿದೆ. ಇದು ಮೈಸೂರು ವಿವಿಗೆ ಸೀಮಿತವಾಗಿಲ್ಲ. ರಾಜ್ಯದ ವ್ಯಾಪ್ತಿಗೆ ಬರುವ ಎಲ್ಲಾ ವಿವಿಗಳಿಗೂ ನೀಡಿಲ್ಲ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!