ನಾರಾಯಣ ಹೆಗಡೆ
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮಹತ್ವದ ಹಂತ ತಲುಪಿದ್ದು, ಜಿಲ್ಲೆಯಲ್ಲಿ 1,08,641 ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಮನೆ ಮನೆಗೆ ಭೇಟಿ ನೀಡಿ ಬಿಎಎಲ್ಒಗಳು ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಈ ಅಂಕಿಅಂಶಗಳು ಹೊರಬಿದ್ದಿದ್ದು, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಅದರ ಭಾಗವಾಗಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಎಲ್ಒಗಳು ಮನೆ ಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸಿ ಎನುಮರೇಷನ್ ನಮೂನೆಗಳನ್ನು ವಿತರಿಸಿದ್ದು, ಸಂಗ್ರಹಿಸಿದ ಮಾಹಿತಿಯನ್ನು ಗಣಕೀಕರಣ ಮಾಡುವ ಕಾರ್ಯವೂ ವೇಗವಾಗಿ ಸಾಗುತ್ತಿದೆ.ಒಟ್ಟು ಮತದಾರರಿದ್ದರು?: ಜೂ.16, 2026ರ ವೇಳೆಗೆ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 13,35,342 ಆಗಿತ್ತು. ಈ ಪಟ್ಟಿಯನ್ನು ಪರಿಶೀಲಿಸಿದಾಗ ಹಲವರು ಈಗಾಗಲೇ ಮೃತಪಟ್ಟಿರುವುದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಶಾಶ್ವತವಾಗಿ ವಲಸೆ ಹೋಗಿರುವುದು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವುದು ಹಾಗೂ ಕೆಲವರ ವಿವರಗಳು ಲಭ್ಯವಾಗದಿರುವುದು ಬೆಳಕಿಗೆ ಬಂದಿದೆ.
ಈ ಅಂಕಿಅಂಶಗಳಲ್ಲಿ ಶಾಶ್ವತ ವಲಸೆ ಪ್ರಕರಣಗಳೇ ಅತಿ ಹೆಚ್ಚು ಎಂಬುದು ಗಮನಾರ್ಹ. ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಇತರ ಕಾರಣಗಳಿಂದ ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ತೆರಳಿರುವವರ ಸಂಖ್ಯೆ ಹೆಚ್ಚಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಇನ್ನು ಒಟ್ಟು 16,636 ದ್ವಿಪ್ರತಿ ದಾಖಲೆಗಳು ಪತ್ತೆಯಾಗಿವೆ. ಕೆಲ ಮತದಾರರು ಸ್ಥಳಾಂತರಗೊಂಡ ಬಳಿಕ ಹೊಸ ಸ್ಥಳದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದರೂ, ಹಳೆಯ ಸ್ಥಳದ ಪಟ್ಟಿಯಿಂದ ಹೆಸರು ತೆಗೆಸದೇ ಉಳಿದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಚುನಾವಣಾ ಆಯೋಗ ಇಂತಹ ದಾಖಲೆಗಳನ್ನು ಅಳಿಸಿ ಒಂದೇ ವ್ಯಕ್ತಿಗೆ ಒಂದೇ ಮತದಾರರ ಗುರುತನ್ನು ಖಚಿತಪಡಿಸುತ್ತಿದೆ.
ಮತದಾರರ ಪಟ್ಟಿಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ವಲಸೆ ಹೋದವರು ಹಾಗೂ ದ್ವಿಪ್ರತಿ ದಾಖಲೆಗಳನ್ನು ತೆಗೆದುಹಾಕುವ ಮೂಲಕ ದೋಷರಹಿತ, ನಿಖರ ಮತ್ತು ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಇದರಿಂದ ಚುನಾವಣೆ ವೇಳೆ ನಕಲಿ ಮತದಾನಕ್ಕೆ ಅವಕಾಶ ಕಡಿಮೆಯಾಗುವುದರ ಜೊತೆಗೆ ಅರ್ಹ ಮತದಾರರಿಗೆ ಮತದಾನದ ಹಕ್ಕು ಸುಗಮವಾಗಿ ದೊರೆಯಲಿದೆ.