ಕನ್ನಡಪ್ರಭ ವಾರ್ತೆ ತಲಕಾಡು
ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ಟಿ.ನರಸೀಪುರ ತಾಲೂಕು ಹಿರಿಯೂರು ಹಾಗೂ ಹೊಸಪುರ ಗ್ರಾಮದ ಎರಡು ಕಡೆ ಕತ್ತರಿಸಿದ್ದ ಡಾಂಬರು ಮುಖ್ಯ ರಸ್ತೆಯನ್ನು, ಮೂರು ತಿಂಗಳಾದರು ದುರಸ್ತಿಪಡಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸಿದ್ದರು. ಹೀಗಾಗಿ ಇದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಗೆದ ರಸ್ತೆ ದಾಟಲು ನಿತ್ಯ ಬವಣೆ ಪಡುತ್ತಿದ್ದರು.
ಇಲ್ಲಿ ಅಗೆದಿದ್ದ ರಸ್ತೆ ದಾಟಲು ವಾಹನ ಪ್ರಯಾಣಿಕರು ಪಡುತ್ತಿರುವ ಬವಣೆಯ ಕುರಿತು ಲೋಕೋಪಯೋಗಿ ಇಲಾಖೆ ಹಾಗು ಟಿ. ನರಸೀಪುರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಿದ್ದಾರೆ.ಅಗೆದಿದ್ದ ಡಾಂಬರು ರಸ್ತೆಗೆ ಬುಧವಾರ ತರಾತುರಿಯಲ್ಲಿ ಕಾಂಕ್ರಿಟ್ ತೇಪೆ ಹಾಕಿ ಮುಚ್ಚಲು ಯಶಸ್ವಿ ಯಾಗಿದ್ದಾರೆ.
ಇಲ್ಲಿ ಅಗೆದಿದ್ದ ರಸ್ತೆಯ ಬಳಿ ರಸ್ತೆ ದುರಸ್ತಿಯಲ್ಲಿದೆ ಎಂದು ಎಚ್ಚರಿಸುವ ಯಾವುದೇ ನಾಮಫಲಕ ಅಳವಡಿಸದೆ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸಿದ್ದರು. ಹೀಗಾಗಿ ವಾಹನಗಳು ಬಂದ ವೇಗದಲ್ಲಿಯೇ ಇಲ್ಲಿ ಅಗೆದಿದ್ದ ಡಾಂಬರು ರಸ್ತೆ ಗುಂಡಿ ಕಾಣದೆ ಅಪಾಯಕ್ಕೆ ಅಹ್ವಾನ ನೀಡಿದಂತೆ ಧಡಾರನೆ ಗುಂಡಿಯಲ್ಲಿ ಕುಸಿದೆದ್ದು ದಾಟುವ ಸರ್ಕಸ್ ಮಾಡುತ್ತಿದ್ದವು.
ಕೋಟಿ ಲೆಕ್ಕದಲ್ಲಿ ನಿರ್ಮಿಸಿದ ರಸ್ತೆ ಬೇಕಾಬಿಟ್ಟಿ ಅಗೆತ:
ಅಲ್ಲದೇ, ತಲಕಾಡು ಟಿ. ನರಸೀಪುರ ತಲುಪಲು 20 ನಿಮಿಷದ ಹಾದಿ ತೀವ್ರವಾಗಿ ಹದಗೆಟ್ಟಿದ್ದ ಇಲ್ಲಿನ ರಸ್ತೆಯಿಂದಾಗಿ ಒಂದು ಗಂಟೆ ತಡವಾಗುತಿತ್ತು. ನೂತನ ರಸ್ತೆ ಅಸ್ತಿತ್ವಕ್ಕೆ ಬಂದ ಬಳಿಕ, ತಲಕಾಡು ಹೋಬಳಿ ಪ್ರಯಾಣಿಕರಿಗೆ ಹಾಗು ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆ ಒದಗಿಸಿಕೊಟ್ಟಿದೆ. ಇದೇ ರಸ್ತೆಯ ಅಕ್ಕಪಕ್ಕದ ಸರ್ವೀಸ್ ಶೋಲ್ಡರ್ ಜಾಗದಲ್ಲಿ ತ್ಯಾಜ್ಯಗಳ ಸುರಿಯಲಾಗುತ್ತಿದೆ ಇದರ ಕಡೆ ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸುವುದು ಅಗತ್ಯ.
- ಸತೀಶ್ ಚಂದ್ರ, ಎಇಇ, ಲೋಕೋಪಯೋಗಿ ಇಲಾಖೆ, ಟಿ.ನರಸೀಪುರ