ಕಾರವಾರ:
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತದೆ. ವಿರೋಧ ಪಕ್ಷದವರಿಗೆ ಆಡಳಿತ ಪಕ್ಷದ ಬಗ್ಗೆ ಮಾತನಾಡಲು, ಟೀಕಿಸಲು ಏನೂ ಸಿಗುತ್ತಿಲ್ಲ. ಹೀಗಾಗಿ ತಾಲೂಕಿನ ಚೆಕ್ಪೋಸ್ಟ್ ವಿಷಯ ಕೆದಕುತ್ತಿದ್ದಾರೆ ಎಂದು ಶಾಸಕ ಸತೀಶ ಸೈಲ್ ಹೇಳಿದರು.ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಇಬ್ಬರನ್ನು ಮೂರು ದಿನ ಬಂಧಿಸಿಟ್ಟ ಬಗ್ಗೆ ತಮಗೆ ದೂರವಾಣಿ ಕರೆ ಬಂದಿದೆ. ಇದನ್ನು ವಿಚಾರಿಸಲು ಚೆಕ್ಪೋಸ್ಟ್ಗೆ ತೆರಳಿದ್ದು, ಪ್ರಕರಣ ದಾಖಲಿಸದೇ ಏಕೆ ಬಂಧಿಸಿದ್ದೀರಿ ಎಂದು ಪ್ರಶ್ನಿಸಿದ್ದೇನೆ. ಅಲ್ಲಿ ನೋಡಿದರೆ ಆ ಬಂಧಿತರನ್ನು ಗೋಡಾನ್ ಒಳಗೆ ಇರಿಸಿದ್ದರು. ಅವರಿಗೆ ಏನಾದರೂ ಆದರೆ ಯಾರು ಜವಾಬ್ದಾರಿ? ಎಂದು ಪ್ರಶ್ನಿಸಿದರು.೨೦೧೮ರಿಂದಲೂ ಅಕ್ರಮವಾಗಿ ಸ್ಪಿರಿಟ್ ಹೋಗುತ್ತಿದೆ ಎನ್ನುವುದು ತಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ಸಾಕ್ಷಿಯನ್ನೂ ಕೆಲವೇ ದಿನದಲ್ಲಿ ನೀಡುತ್ತೇವೆ. ಆಗ ರಾಜ್ಯದಲ್ಲಿ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವಿತ್ತು. ಕಾರವಾರ ಕ್ಷೇತ್ರದಲ್ಲೂ ಬಿಜೆಪಿಯ ರೂಪಾಲಿ ನಾಯ್ಕ ಶಾಸಕರಾಗಿದ್ದರು. ಅವರ ಕೈವಾಡವಿತ್ತೇ? ಅವರಿಗೆ ಹಣ ಹೋಗುತ್ತಿತ್ತೇ ಎಂದು ಸ್ಪಷ್ಟನೆ ನೀಡಬೇಕು ಎಂದರು.ಆ ಟ್ಯಾಂಕರ್ ಅಥವಾ ಕಂಪನಿ ನಮಗೆ ಸೇರಿದ್ದೇ? ತಾವು ಮಾನವೀಯತೆಯಿಂದ ಹೋಗಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದರೆ ತಮ್ಮ ಮೇಲೂ ಪ್ರಕರಣ ದಾಖಲಿಸಲಿ, ವಿಚಾರಣೆ ಮಾಡಲಿ ಎಂದು ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಸಮೀರ್ ನಾಯ್ಕ, ಶಂಭು ಶೆಟ್ಟಿ, ಕೃಷ್ಣ ಮೆಹ್ತಾ, ವಿಜಯ ಇದ್ದರು.