ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯದಲ್ಲಿ ಒಕ್ಕಲಿಗ ಸಮಾಜ ತುಳಿತಕ್ಕೆ ಒಳಗಾಗುತ್ತಿದೆ. ಸಮಾಜದ ಜನರು ಒಗ್ಗೂಡಿ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಮಂಡ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಗೌಡಯ್ಯನದೊಡ್ಡಿ ತಿಮ್ಮೇಗೌಡ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀರಂಗಪಟ್ಟಣ ತಾಲೂಕು ಮಟ್ಟದ ಮಂಡ್ಯ ಒಕ್ಕಲಿಗರ ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಎಂದರೆ ಇಂಡಿಯಾದಲ್ಲಿ ಹೆಸರಿದ್ದರೂ ಹಲವು ಸರ್ಕಾರಗಳು ಮಂಡ್ಯದ ಒಕ್ಕಲಿಗ ಸಮಾಜಗಳನ್ನು ಒಡೆದು ಆಳುವ ಯತ್ನಗಳು ನಡೆದು ನಮ್ಮ ಸಮಾಜವನ್ನು ತುಳಿಯಲಾಗುತ್ತಿದೆ ಎಂದರು.
ಸಮಾಜದ ಜನರು ಒಂದುಗೂಡಿ ತಮ್ಮ ಬೇಡಿಕೆಗಳನ್ನು ಪಡೆದುಕೊಳ್ಳಲು ಧ್ವನಿ ಎತ್ತುವ ಕೆಲಸ ಮಾಡಬೇಕು. ಇವತ್ತಿನ ದಿನದಲ್ಲಿ ಕೇಳಿ ಪಡೆದುಕೊಳ್ಳುವ ಕಾಲ ಬಂದಿದೆ. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕಿದೆ. ಜಿಲ್ಲೆಯ ಒಕ್ಕಲಿಗ ಸಂಘಗಳ ಮೂಲಕ ಸಮಾಜನ ಮಕ್ಕಳಿಗೆ ಒಂದು ವಸತಿ ನಿಲಯ ಹಾಗೂ ತಾಲೂಕು ಮಟ್ಟದಲ್ಲಿ ಒಂದೊಂದು ಒಕ್ಕಲಿಗ ಭವನಗಳನ್ನು ಸರ್ಕಾರಗಳು ನೀಡಬೇಕು ಎಂದು ಆಗ್ರಹಿಸಿದರು.ವಸತಿ ನಿಲಯ, ಭವನಗಳಿಗೆ ಸರಿಯಾದ ಸ್ಥಳ ಗುರುತು ಮಾಡಿ ಆಯಾ ತಾಲೂಕಿನಲ್ಲಿ ಒಕ್ಕಲಿಗ ಸಮಾಜಗಳಿಗೆ ನಿವೇಶನಗಳನ್ನು ಕಲ್ಪಿಸಬೇಕು. ಬೇರೆ ಸಮಾಜಗಳಿಗೆ ನೀಡಿದ ಸೌಲಭಗಳು ನಮಗೂ ಆಯಾ ತಾಲೂಕು ಮಟ್ಟದಲ್ಲಿ ನಮ್ಮ ಸಮಾಜದ ಬಡವರಿದ್ದು ಅವರನ್ನು ಗುರುತಿಸಿ ಸಮಾಜದ ಏಳಿಗೆಗೆ ಸರ್ಕಾರಗಳು ಸವಲತ್ತುಗಳ ಒದಗಿಸುವ ಕೆಲಸ ಮಾಡಬೇಕು. ಈ ಹಕ್ಕುಗಳ ಪಡೆದುಕೊಳ್ಳಲು ಒಕ್ಕಲಿಗ ಸಮಾಜದ ಜನರು ಒಂದೂಗೂಡಲು ಸಂಘಟಿಸುವ ಕೆಲಸ ಅಗತ್ಯವಿದೆ ಎಂದರು.
ಇದೇ ವೇಳೆ ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಒಕ್ಕಲಿಗರ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಎಂ.ಶೆಟ್ಟಹಳ್ಳಿ ಇಂದ್ರಕುಮಾರ್ ಅವರನ್ನು ನೇಮಿಸಲಾಯಿತು. ಮಂಡ್ಯ ಒಕ್ಕಲಿಗರ ಸಂಘದ ಮಂಡ್ಯ ನಗರಾಧ್ಯಕ್ಷ ಶ್ರೀಧರ್, ಸ್ವಾಭಿಮಾನಿ ಒಕ್ಕಲಿಗ ಸಂಘದ ಅಧ್ಯಕ್ಷ ದೇವರಾಜು, ಸಿ.ಸ್ವಾಮಿಗೌಡ, ಲಕ್ಷ್ಮಿನಾರಾಯಣ, ಬೆಳಗೊಳ ಸುನೀಲ್, ಸಿದ್ದರಾಜು, ಟಿ.ಎಂ.ಹೊಸೂರು ಮಹದೇವು, ರುಕ್ಮಾಗದ, ಚಂದನ್, ಶಿವನಂಜು, ಭರತೇಶ್, ಮಹೇಶ್, ಗಣಂಗೂರು ಸತೀಶ್ , ಕೆ.ಜೆ ಲೋಕೇಶ್, ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಮಂದಿ ಒಕ್ಕಲಿಗ ಮುಖಂಡರು ಸಭೆಯಲ್ಲಿ ಹಾಜರಿದ್ದು, ನೂತನ ಅಧ್ಯಕ್ಷ ಇಂದ್ರಕುಮಾರ್ ಅವರನ್ನು ಅಭಿನಂದಿಸಿದರು.