ವಕ್ಪ್ ನೋಟಿಸ್‌ ಹಿಂಪಡೆವ ಆದೇಶ ಕಣ್ಣೊರೆಸುವ ತಂತ್ರ

KannadaprabhaNewsNetwork |  
Published : Nov 13, 2024, 12:47 AM IST
(ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ) | Kannada Prabha

ಸಾರಾಂಶ

ರೈತರು, ಜನಸಾಮಾನ್ಯರು, ಮಠ, ಮಂದಿರಗಳ ಆಸ್ತಿ ವಕ್ಫ್ ಆಸ್ತಿಯೆಂದು ನೋಟಿಸ್ ನೀಡಿ, ಮುಟೇಷನ್ ಪ್ರಕ್ರಿಯೆ ಹಿಂಪಡೆಯುವಂತೆ ಸರ್ಕಾರ ನ.9ರಂದು ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರವನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಸಿದ್ದರಾಮಯ್ಯ ನಿಮ್ಮ ಭಂಡತನಕ್ಕೆ ಮಿತಿ ಇರಲಿ: ಪ್ರಹ್ಲಾದ್‌ ಜೋಷಿ ಸಲಹೆ । ನೋಟಿಸ್ ಹಿಂಪಡೆಯುವ ಬಗ್ಗೆ ಸಿಎಂ ಎಲ್ಲೂ ಹೇಳಿಲ್ಲ: ಕೇಂದ್ರ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರು, ಜನಸಾಮಾನ್ಯರು, ಮಠ, ಮಂದಿರಗಳ ಆಸ್ತಿ ವಕ್ಫ್ ಆಸ್ತಿಯೆಂದು ನೋಟಿಸ್ ನೀಡಿ, ಮುಟೇಷನ್ ಪ್ರಕ್ರಿಯೆ ಹಿಂಪಡೆಯುವಂತೆ ಸರ್ಕಾರ ನ.9ರಂದು ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರವನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಎಂಐಟಿ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗ ಮುಟೇಷನ್‌ ಆದೇಶ ಹಿಂಪಡೆಯುವಂತೆ ಆದೇಶ ಹೊರಡಿಸಿದೆ. ಮುಂದೆ ಮತ್ತೆ ಇಂಥ ನೋಟಿಸ್ ನೀಡುವುದಿಲ್ಲ ಎಂದು ಮಾತ್ರ ಸ್ಪಷ್ಟಪಡಿಸಿಲ್ಲ ಎಂದು ಟೀಕಿಸಿದರು.

ಸಿಎಂ ನ.9ರಂದು ಹೊರಡಿಸಿದ ಆದೇಶ ಕೇವಲ ಕಣ್ಣೊರೆಸುವ ತಂತ್ರವಾಗಿದೆ. 2-3 ತಿಂಗಳಲ್ಲಿ ನೋಟಿಸ್ ಕೊಟ್ಟು, ವಕ್ಫ್ ಆಸ್ತಿಯೆಂದು ವಶಪಡಿಸಿಕೊಂಡ ಆಸ್ತಿಯನ್ನು, ಸರ್ಕಾರ ನೀಡಿದ ನೋಟಿಸ್‌ ವಾಪ್‍ಸ್‌ ಪಡೆಯುವ ಬಗ್ಗೆ ಆದೇಶದಲ್ಲಿ ಎಲ್ಲಿಯೂ ಹೇಳಿಲ್ಲ. ಮತಾಂಧ ಸಚಿವ ಜಮೀರ್ ಅಹಮದ್ ವಕ್ಫ್ ಅದಾಲತ್ ಮಾಡಿ, ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿಯೆಂದು ದಾಖಲು ಮಾಡಿಸಿರುವ ಆಸ್ತಿಗಳ ಗತಿ ಏನು ಎಂದು ಜೋಷಿ ಪ್ರಶ್ನಿಸಿದರು.

ವಕ್ಫ್ ಆಸ್ತಿ ಶೇ.31ರಷ್ಟು ಹೆಚ್ಚಾಗಿರುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹಾನಗಲ್ ತಾಲೂಕಿನ ಹರಣಗಿ ಗ್ರಾಮದಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಬಲದಿಂದ ಆಸ್ತಿ ಜಪ್ತಿ ಮಾಡಲಾಗಿದೆ. ರೈತನ ಹೊಲದಲ್ಲಿ ಬೆಳೆಯನ್ನೆಲ್ಲಾ ನಾಶಪಡಿಸಲಾಗಿದೆ. ಅಲ್ಲಿ ಬೆಳೆದಿದ್ದ ಹತ್ತಿ, ಮೆಕ್ಕೇಜೋಳ ಇತರೆ ಬೆಳೆಗಳನ್ನು ಅಳಿಸಿ, ಜಮೀನುಗಳನ್ನು ಜಪ್ತಿ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮತಿಗೆಟ್ಟ ಕಾಂಗ್ರೆಸ್‌ ಸರ್ಕಾರ:

ನಿರ್ಲಜ್ಜ, ಮತಿಗೆಟ್ಟ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ. ಬೆಳೆ ಬೆಳೆಯರು ರೈತರು ಸಾಲ ಮಾಡಿದ್ದಾರೆ. ಈಗ ಆ ರೈತರ ಗತಿ ಏನು? ಜಮೀನಿನಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಸೇರಿದಂತೆ ಅನೇಕ ನಗರಗಳಲ್ಲಿ ವಕ್ಫ್‌ ಮಂಡಳಿ ಸರ್ವೇ ಕೈಗೊಂಡಿದೆ. ಈಗಾಗಲೇ ಅನೇಕ ಆಸ್ತಿಗಳು ವಕ್ಫ್ ಆಸ್ತಿಯೆಂದು ಸೇರಿವೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ಪರಾಕಾಷ್ಟೆ ತಲುಪಿದೆ. ಗುತ್ತಿಗೆಯಲ್ಲೂ ಶೇ.4ರಷ್ಟು ಮುಸ್ಲಿಮರಿಗೆ ನೀಡಿರುವುದು ದುರಂತ. ಇದನ್ನೆಲ್ಲಾ ಹೇಳಿದರೆ, ಬಿಜೆಪಿಯವರನ್ನು ಒಡೆದು ಆಳುವ ನೀತಿ ಎನ್ನುತ್ತಾರೆ ಎಂದು ಪ್ರಹ್ಲಾದ ಜೋಷಿ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ವಿಪ ಸದಸ್ಯ ಎನ್.ರವಿಕುಮಾರ, ಕೆ.ಎಸ್. ನವೀನ, ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಜಿ.ಎಸ್.ಅನಿತಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ ಇತರರು ಇದ್ದರು.

- - -

ಬಾಕ್ಸ್‌-1 * ಕಾಂಗ್ರೆಸ್ ಸಚಿವ್ರೆ, ನಿಮ್ಮ ಆಸ್ತಿನೂ ಹೋದೀತು!

ಸುಪ್ರೀಂ ಕೋರ್ಟ್‌ ಆದೇಶವೊಂದರಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಲ್ಲದೇ ಇದ್ದರೆ, ದಾಖಲು ಮಾಡಿದ್ದನ್ನು ರದ್ದುಪಡಿಸಲು ಅವಕಾಶ ಇದೆ. ವಕ್ಫ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮಂತ್ರಿಗಳು ಬಿಜೆಪಿ ಪಾಲಿಟಿಕ್ಸ್ ಎನ್ನುತ್ತಿದ್ದಾರೆ. ನಾಳೆ ನಿಮ್ಮ ಮಕ್ಕಳು, ಮೊಮ್ಮಕ್ಕಳ ಆಸ್ತಿಯೇ ಹೋಗಬಹುದು ಎಂಬುದನ್ನು ಅಂತಹ ಕಾಂಗ್ರೆಸ್ಸಿನ ಸಚಿವರೂ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಹ್ಲಾದ್‌ ಜೋಷಿ ತಾಕೀತು ಮಾಡಿದರು.

ಕೋಟ್ಯಂತರ ರು. ಮೌಲ್ಯದ ಆಸ್ತಿಗಳು 2013ರ ಕಾನೂನಿನಂತೆ ಮುಸ್ಲಿಮರ ಪಾಲಾಗುತ್ತಿವೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಮುಂದೊಂದು ದಿನ ಇಡೀ ದೇಶಕ್ಕೆ ದೊಡ್ಡ ಗಂಡಾಂತರ ಇದೆ. ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಬೇಕೆಂಬ ಪ್ರಸ್ತಾಪ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಲಿಕ್ಕರ್ ಲಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕುತ್ತಾರೆ ಎಂದು ಅವರು ಟೀಕಿಸಿದರು.

ಮುಡಾ ನಿವೇಶನ ಹಗರಣ ಆಗುವುದಕ್ಕೆ ನಿಮ್ಮ ಪ್ರಭಾವವಿದೆ ಎಂದು ಹೈಕೋರ್ಟ್ ಹೇಳಿದೆ. ಹಾಗಿದ್ದರೂ ಸಿದ್ದರಾಮಯ್ಯನವರೇ ನೀವೇ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ನಿಮ್ಮಂತಹವರು ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತೀರಾ? ಲಿಕ್ಕರ್ ಡೀಲ್ ಬಗ್ಗೆ ಬಿಜೆಪಿಯೇನೂ ದೂರು ಕೊಟ್ಟಿಲ್ಲ. ಲಿಕ್ಕರ್ ಡೀಲರ್‌ಗಳೇ ದೂರು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಭಂಡತನಕ್ಕೂ ಒಂದು ಮಿತಿ ಎಂಬುದು ಇರಲಿ. ದಾಖಲೆಗಳೇ ಇಲ್ಲದೇ ವಕ್ಫ್‌ಗೆ ವಶಪಡಿಸಿಕೊಂಡ ಆಸ್ತಿಗಳನ್ನು ತಕ್ಷಣ ಅವುಗಳ ಮಾಲೀಕರಿಗೆ ಮರಳಿಸಿ ಎಂದು ಜೋಷಿ ತಾಕೀತು ಮಾಡಿದರು.

- - - -13ಕೆಡಿವಿಜಿ:

ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ