ಮುಂಡರಗಿ: ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದಂತೆ ಮಲೆನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ತಾಲೂಕಿನ ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ಶುಕ್ರವಾರ 2 ಲಕ್ಷ 9735 ಕ್ಯೂಸೆಕ್ ನೀರು ಬಂದಿದ್ದು, 19 ಗೇಟುಗಳ ಮೂಲಕ ಅಷ್ಟೂ ನೀರನ್ನು ನದಿಗೆ ಹರಿಬಿಡಲಾಗಿದೆ.
ಆದರೆ ವಿಠಲಾಪುರ ಗ್ರಾಮವು ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿರುವ ಗ್ರಾಮವಾಗಿದ್ದು, ಅಲ್ಲಿನ ಸುಮಾರು 16 ರಿಂದ 20 ಮನೆಗಳಿಗೆ ಗುರುವಾರ ಸಂಜೆ ನೀರು ನುಗ್ಗಿದ್ದು, ಎಲ್ಲ ಕುಟುಂಬಗಳನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿ ಅಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಆದರೆ ಶುಕ್ರವಾರದ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಮತ್ತೆ ಯಾವುದೇ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿಲ್ಲ.
ನೀರಾವರಿ ಇಲಾಖೆ ಹೇಳುವ ಪ್ರಕಾರ ಶುಕ್ರವಾರ ಸಂಜೆ ಅಥವಾ ಶನಿವಾರ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದ್ದು, 2019ರಲ್ಲಿ ನದಿಗೆ ಸುಮಾರು 3 ಲಕ್ಷ ಕ್ಯೂಸೆಕ್ ನೀರು ಬಂದಿತ್ತು. ಹೀಗೆ ನೀರು ಬಂದರೆ ವಿಠಲಾಪೂರ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗುವ ಆತಂಕವಿದೆ ಎನ್ನಲಾಗುತ್ತಿದೆ.ನಮ್ಮ ಮನೆಗಳಿಗೆ ಗುರುವಾರ ಸಂಜೆ ನೀರು ನುಗ್ಗಿದ್ದು, ಎಲ್ಲರನ್ನೂ ಸರ್ಕಾರಿ ಶಾಲೆಗೆ ಕರೆದುಕೊಂಡು ಬಂದು ಊಟದ ವ್ಯವಸ್ಥೆ ಮಾಡಿದ್ದಾರೆ.ಶುಕ್ರವಾರ ಜಿಲ್ಲಾಧಿಕಾರಿಗಳು ಸಹ ಆಗಮಿಸಿ ನಮ್ಮನ್ನು ಮಾತನಾಡಿಸಿ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥೆ ದುರಗವ್ವ ನೆಗಳೂರು ತಿಳಿಸಿದ್ದಾರೆ.