ಶಿರಹಟ್ಟಿ:
₹ ೪ ಲಕ್ಷ ಬೆಳೆ ಹಾನಿ:
ವಡವಿ ಗ್ರಾಮದ ಹನರಡ್ಡಿ ಆನ್ವೇರಿ ಎಂಬುವರು ೫ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನೆಲಕಚ್ಚಿ ಸಂಪೂರ್ಣ ನಾಶವಾಗಿದೆ. ಕಟಾವಿಗೆ ಬಂದಿದ್ದ ಬೆಳೆ ಕ್ಷಣಾರ್ಧದಲ್ಲಿ ನೆಲಕಚ್ಚಿರುವುದನ್ನು ಕಂಡು ರೈತ ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ ಜಲಗಾಂದಿಂದ ಪಪ್ಪಾಯಿ ಸಸಿ ತರಿಸಿದ್ದ ರೈತ 5 ಎಕರೆ ಪ್ರದೇಶದಲ್ಲಿ ೨೫೦೦ ಪಪ್ಪಾಯಿ ಸಸಿ ನೆಟ್ಟಿದ್ದರು. ಪ್ರತಿ ಗಿಡ ಬೆಳೆಯಲು ಈ ವರೆಗೆ ₹ 230 ಖರ್ಚು ಮಾಡಿದ್ದರು. ಉತ್ತಮ ಇಳುವರಿಯ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಸದ್ಯ 10ರಿಂದ 15 ಟನ್ ಪಪ್ಪಾಯಿ ಬೆಳೆ ಮಾರಾಟಕ್ಕೆ ಬಂದಿತ್ತು. ಆದರೆ, ಮಳೆ-ಬಿರುಗಾಳಿಯಿಂದ ಎಲ್ಲವೂ ಮಣ್ಣುಪಾಲಾಯಿತು ಎಂದು ಹನರಡ್ಡಿ ಕಣ್ಣೀರು ಸುರಿಸಿದರು.ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಹನರಡ್ಡಿ, ಹಗಲು-ರಾತ್ರಿ ಎನ್ನದೆ ಕಷ್ಟ ಪಟ್ಟು ಬೆಳೆ ಬೆಳೆದಿದ್ದೆ. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಬೆಳೆ ಬೆಳೆಯಲು ತೋಟಗಾರಿಕೆ, ಕೃಷಿ ಇಲಾಖೆಯಿಂದ ಯಾವುದೇ ಸಹಾಯಧನ ಪಡೆಯದೇ ಸ್ವಂತ ಖರ್ಚಿನಲ್ಲಿ ೯ ತಿಂಗಳಿಂದ ಬೆಳೆಸಲಾಗಿದ್ದ ಫಸಲು ನಾಶವಾಗಿದೆ. ಸರ್ಕಾರ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನನ್ನ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.