ಹಾರೋಹಳ್ಳಿ: ಚೀಲಗಳಲ್ಲಿ ತುಂಬಿದ್ದ ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಆರ್.ವಿ.ನಾರಾಯಣ ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ನಾವು ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಬೇಕು ಮಾತೃಭಾಷೆಗೆ ಗೌರವವನ್ನು ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಕನ್ನಡತನವನ್ನು ಉಳಿಸಬೇಕು ಬೇರೆ ಭಾಷೆಯವರಿಗೆ ಕನ್ನಡ ಕಲಿಸಲು ನಾವು ಪ್ರೇರೇಪಣೆಯಾಗಬೇಕು. ವಚನ ಸಾಹಿತ್ಯದ ಪಿತಾಮಹ ಹಳಕಟ್ಟಿರವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ವಕೀಲ ವೃತ್ತಿಯಲ್ಲಿ ಇದ್ದುಕೊಂಡು ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಸಾಹಿತ್ಯವನ್ನು ಪರಿಚಯಿಸಿ ನೀಡಿದ್ದು ಜನಮಾನಸದಲ್ಲಿದ್ದಾರೆ ಎಂದರು.
ಮುಖ್ಯಶಿಕ್ಷಕ ಸಿ.ಎಸ್.ರಾಜು ಮಾತನಾಡಿ, ವಚನ ಸಾಹಿತ್ಯದ ಪಿತಾಮಹ ಡಾ.ಫ.ಗು.ಹಳಕಟ್ಟಿ ಒಬ್ಬ ವ್ಯಕ್ತಿಯಲ್ಲ ಅವರ ಒಂದು ಶಕ್ತಿ ವಚನ ಸಾಹಿತ್ಯದಲ್ಲಿ ಕ್ರಾಂತಿಯನ್ನು ಮಾಡಿದವರು. ಜಾತಿ ಪದ್ಧತಿ ಉತ್ತುಂಗ ಕಾಲದಲ್ಲಿದ್ದ ಸಂದರ್ಭದಲ್ಲಿ ಬಸವಣ್ಣನವರು ಜಾತಿಯತೆಯನ್ನು ತೊಡೆದು ಹಾಕಲು ಎಲ್ಲರೂ ಒಂದೆಡೆ ಸೇರಿ ವಚನ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೆ ಮೌಲ್ಯಗಳನ್ನು ರೂಢಿಸಲು ಮಾನವೀಯತೆ ಮೆರೆಯಲು ಸಮಾಜಮುಖಿ ಕೆಲಸಗಳ ಮೂಲಕ ಕ್ರಾಂತಿ ಮಾಡಿದ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸಿ ಮನೆಮಾತಾದರು ಎಂದರು.ಈ ವೇಳೆ ಪಿ.ಹೊಸಳ್ಳಿ ಗ್ರಾಪಂ ಪಿಡಿಒ ಭಾಗೀರಥಿ, ಕರ ವಸೂಲಿಗಾರ ಮಲ್ಲಪ್ಪ, ಶಿಕ್ಷಕರಾದ ಪ್ರದೀಪ್, ಸೈಯದ್ ಜುಬೇರ್, ಶಿವರಾಜು, ಸಂಗಪ್ಪ ಹಿರೇಕುರುಬರ ಪ್ರತೀಪ್ ರಾವ್, ಲಕ್ಷ್ಮಿ, ಸಂತೋಷ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಹಾರೋಹಳ್ಳಿ ತಾಲೂಕಿನ ಪಡುವಣಗೆರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ವಿಕಾಸ ರಂಗ ವತಿಯಿಂದ ವಚನ ಸಾಹಿತ್ಯದ ಪಿತಾಮಹ ಡಾ. ಫ.ಗು.ಹಳಕಟ್ಟಿ ಜನ್ಮದಿನ ಆಚರಿಸಲಾಯಿತು.