ಶಿವಕುಮಾರ ಕುಷ್ಟಗಿ
ಗದಗ ಜಿಲ್ಲೆಯಾಗಿ 29 ವರ್ಷ ಪೂರೈಸಿದ್ದು, ಹಲವಾರು ಬಾರಿ ಜಿಪಂ ಹುದ್ದೆಗಳು ಖಾಲಿ ಇದ್ದರೂ ಇಷ್ಟೊಂದು ಸುದೀರ್ಘ ಅವಧಿಗೆ ಜಿಪಂ ಸಿಇಒ ಹುದ್ದೆ ಖಾಲಿ ಇರಲಿಲ್ಲ. ಕಳೆದ 2025ರ ಆ. 22ರಂದು ಜಿಪಂ ಸಿಇಒ ಆಗಿದ್ದ ಭರತ್ ಎಸ್. ಅವರು ಬೆಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಗೊಂಡರು. ಅಂದಿನಿಂದ ತೆರವಾದ ಈ ಮಹತ್ವದ ಹುದ್ದೆಗೆ ಸರ್ಕಾರ ಹೊಸ ಅಧಿಕಾರಿಯನ್ನು ನೇಮಿಸಿಯೇ ಇಲ್ಲ. ಸದ್ಯ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರೇ ಜಿಪಂ ಸಿಇಒ ಹುದ್ದೆಯ ಹೆಚ್ಚುವರಿ ಉಸ್ತುವಾರಿಯನ್ನು ಹೊತ್ತುಕೊಂಡು ಎರಡೂ ಕೆಲಸ ನಿಭಾಯಿಸುತ್ತಿದ್ದಾರೆ.
ಗದಗ ಜಿಪಂಗೆ ಗರ: ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗದಗ ಜಿಪಂ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಗರ ಬಡಿದಂತಾಗಿದೆ. ಕಳೆದ ಮೂರು ವರ್ಷಗಳ (36 ತಿಂಗಳ) ಅವಧಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಿಲ್ಲೆ ಅನುಭವಿಸಿದ ಆಡಳಿತಾತ್ಮಕ ಹಿನ್ನಡೆ ಎದ್ದು ಕಾಣುತ್ತದೆ.2023 ರಲ್ಲಿ ಜಿಪಂ ಸಿಇಒ ಆಗಿದ್ದ ಡಾ. ಸುಶೀಲಾ ಬಿ. ಅವರು 2023ರ ಜು. 18ರಂದು ವರ್ಗಾವಣೆಗೊಂಡ ನಂತರ ಸುಮಾರು 8 ತಿಂಗಳ ಕಾಲ ಸಿಇಒ ನೇಮಕವೇ ಆಗಿರಲಿಲ್ಲ. ನಂತರ 2024ರ ಮಾ. 14ರಂದು ಭರತ್ ಎಸ್. ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡರೂ, ಕೇವಲ ಒಂದೂವರೆ ವರ್ಷದಲ್ಲೇ (22-08-2025) ಅವರು ವರ್ಗಾವಣೆಯಾದರು. ಅಲ್ಲಿಂದ ಇಂದಿನವರೆಗೆ ಮತ್ತೆ 9 ತಿಂಗಳು ಕಳೆಯುತ್ತ ಬಂದರೂ ಸರ್ಕಾರಕ್ಕೆ ಗದಗ ಜಿಪಂ ಆಗಿ ಒಬ್ಬ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲು ಆಗಿಲ್ಲ. ಸರ್ಕಾರದ 36 ತಿಂಗಳ ಆಡಳಿತಾವಧಿಯಲ್ಲಿ ಬರೋಬ್ಬರಿ 17 ತಿಂಗಳುಗಳ ಕಾಲ ಜಿಪಂ ಸಿಇಒ ಹುದ್ದೆ ಖಾಲಿ ಉಳಿದಿದೆ.
ಹಲವು ಅನುಮಾನ: ಸಾಮಾನ್ಯವಾಗಿ ಐಎಎಸ್ ಅಧಿಕಾರಿ ವರ್ಗಾವಣೆಗೊಂಡ ತಕ್ಷಣ ಅಥವಾ ಒಂದು ತಿಂಗಳ ಒಳಗಾಗಿ ಮತ್ತೊಬ್ಬ ಅಧಿಕಾರಿಯನ್ನು ನೇಮಿಸುವುದು ಆಡಳಿತದ ನಿಯಮ. ಆದರೆ ಜಿಲ್ಲೆಯ ವಿಷಯದಲ್ಲಿ 9 ತಿಂಗಳಾದರೂ ನೇಮಕಾತಿ ಪ್ರಕ್ರಿಯೆ ನಡೆಯದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ಕೂಡಲೇ ಜಿಪಂ ಸಿಇಒ ನೇಮಕ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ತಿಳಿಸಿದರು.