ಆಂಜನೇಯನ ಶಕ್ತಿ, ಶ್ರೀರಾಮನ ಭಕ್ತಿಯಿಂದ ಬದುಕು ಪಾವನ

KannadaprabhaNewsNetwork | Published : May 4, 2024 12:32 AM

ಹೊಸಕೋಟೆ: ಉತ್ತರ ಭಾರತದಲ್ಲಿ ಶ್ರೀರಾಮನ ಆರಾಧನೆ, ದಕ್ಷಿಣ ಭಾರತದಲ್ಲಿ ಆಂಜನೇಯನ ಆರಾಧನೆ ಮಾಡಲಾಗುತ್ತೆ, ಆಂಜನೇಯ ಎಂದರೆ ಶಕ್ತಿ, ಶ್ರೀರಾಮ ಎಂದರೆ ಭಕ್ತಿ ಇವೆರಡೂ ಸೇರಿದರೆ ಗ್ರಾಮ ಸುಭಿಕ್ಷದ ಜೊತೆಗೆ ಬದುಕು ಪಾವನವಾಗುತ್ತದೆ ಎಂದು ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಸದ್ಗುರು ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಸ್ವಾಮೀಜಿ ತಿಳಿಸಿದರು.

ಹೊಸಕೋಟೆ: ಉತ್ತರ ಭಾರತದಲ್ಲಿ ಶ್ರೀರಾಮನ ಆರಾಧನೆ, ದಕ್ಷಿಣ ಭಾರತದಲ್ಲಿ ಆಂಜನೇಯನ ಆರಾಧನೆ ಮಾಡಲಾಗುತ್ತೆ, ಆಂಜನೇಯ ಎಂದರೆ ಶಕ್ತಿ, ಶ್ರೀರಾಮ ಎಂದರೆ ಭಕ್ತಿ ಇವೆರಡೂ ಸೇರಿದರೆ ಗ್ರಾಮ ಸುಭಿಕ್ಷದ ಜೊತೆಗೆ ಬದುಕು ಪಾವನವಾಗುತ್ತದೆ ಎಂದು ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಸದ್ಗುರು ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಲಾಲ್ ಬಾಗ್ ದಾಸರಹಳ್ಳಿ ಗ್ರಾಮದಲ್ಲಿ ಶ್ರೀ ಸೀತಾರಾಮಾಂಜನೇಯ, ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣಧರ್ಮರಾಯಸ್ವಾಮಿ ಸಮೇತ ಶ್ರೀದ್ರೌಪತಾಂಭ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮಗಳಲ್ಲಿ ದೈವಾರಾಧನೆ ಮಾಡುವುದರಿಂದ ಶಾಂತಿ ನೆಮ್ಮದಿ ಲಭಿಸಿ ಗ್ರಾಮ ಸುಭಿಕ್ಷವಾಗಿರಲು ಸಾಧ್ಯವಾಗುತ್ತದೆ. ಲಾ.ದಾಸರಹಳ್ಳಿ ಗ್ರಾಮದಲ್ಲಿ ೨೫೦ ವರ್ಷಗಳ ಇತಿಹಾಸವುಳ್ಳ ದೇವಾಲಯವನ್ನು ಗ್ರಾಮಸ್ಥರು ದಾನಿಗಳ ನೆರವಿನಿಂದ ಜೀರ್ಣೋದ್ದಾರ ಮಾಡಿದ್ದಾರೆ. ದೇವಾಲಯದ ಶಕ್ತಿಯ ಕೇಂದ್ರ ಬಿಂದು ಗೋಪುರವಾಗಿದ್ದು ಆ ಗೋಪುರದ ಮೂಲಕ ವಿಗ್ರಹಗಳಿಗೆ ಶಕ್ತಿ ಪಸರಿಸಿದಾಗ ಆ ಶಕ್ತಿ ಗ್ರಾಮಕ್ಕೆ ಶ್ರೀರಕ್ಷೆ ಆಗುತ್ತದೆ. ಪ್ರತಿ ನಿತ್ಯ ಗ್ರಾಮಸ್ಥರು ದೇವಾಲಯಗಳಿಗೆ ಆಗಮಿಸಿ ದೈವಾರಾಧನೆ ಮಾಡುವುದರಿಂದ ಮನುಷ್ಯನ ಬದುಕು ಕೂಡ ಉನ್ನತಿಯ ಹಾದಿಗೆ ಸಾಗುತ್ತದೆ ಎಂದರು.

ಶಿವನಾಪುರ ವಹ್ನಿಕುಲ ಕ್ಷತ್ರಿಯರ ಗುರುಪೀಠ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಪ್ರಣಾವಾನಂದ ಪುರಿ ಸ್ವಾಮೀಜಿ ಮಾತನಾಡಿ, ಲಾಲ್‌ಬಾಗ್ ದಾಸರಹಳ್ಳಿಯಲ್ಲಿ ನಿರ್ಮಿಸಿರುವ ಈ ದೇವಾಲಯ ಪಂಚ ಗರ್ಭಗುಡಿ ಹೊಂದಿದ್ದು ಬಹಳ ವಿಶೇಷ ದೇವಾಲಯವೂ ಆಗಿದೆ. ಇಲ್ಲಿ ನಿತ್ಯ ಪೂಜೆ ಸಲ್ಲಿಸುವುದರಿಂದ ಪಂಚಮ ಕಾರ್ಯ ಸಿದ್ದಿ ಆಗಲಿದೆ ಎಂದರು.

ಪ್ರಧಾನ ಅರ್ಚಕ ಜನಾರ್ದನಾಚಾರಿ ಮಾತನಾಡಿ, ಶಿಥಿಲಗೊಂಡಿದ್ದ ದೇವಾಲಯವನ್ನು ದಾನಿಗಳ ನೆರವಿನಿಂದ ೩ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿ ಜೀಣೋದ್ದಾರ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿದೆ. ಶ್ರೀ ರಾಮಪರಿವಾರ ದೇವತಾ, ಶ್ರೀ ಕೃಷ್ಣ ಪರಿವಾರ ದೇವತಾ, ಶ್ರೀಶ್ರೀನಿವಾಸ ಪರಿವಾರ ದೇವತೆಗಳಿಗೆ ಪೂಜಾ ಕಾರ್ಯ ಸಲ್ಲಿಸಿಸಲಾಗಿದೆ ಎಂದರು.

ತಲಕಾಯಲಬೆಟ್ಟ ಆಗಮಿಕರಾದ ಶ್ರೀ ಪಾಂವರಾತ್ರಾಗಮ ವಿದ್ಯನ್ಮಣೆ ಹಾಗೂ ಶ್ರೀಯತಿ ಭಟ್ಟಾಚಾರ್ಯ ಅವರಿಂದ ಮೂರು ದಿನಗಳ ಹೋಮ, ಹವನ ಸೇರಿದಂತೆ ವಿವಿಧ ವೇದಪಠಣ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಸಂಸದ ಬಿ.ಎನ್.ಬಚ್ಚೇಗೌಡ, ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್, ಬಮುಲ್ ನಿರ್ದೇಶಕರಾದ ಹುಲ್ಲೂರು ಸಿ.ಮಂಜುನಾಥ್, ಎಲ್‌ಎನ್‌ಟಿ ಮಂಜುನಾಥ್, ವಹ್ನಿಕುಲ ತಿಗಳ ಸಂಘದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್, ಮುಖಂಡ ಹೂಡಿ ವಿಜಯ್ ಕುಮಾರ್ ಇತರರು ಪಾಲ್ಗೊಂಡಿದ್ದರು. ಬಾಕ್ಸ್.....ವೇದಪಾರಾಯಣದ ವೇಳೆ ವರುಣನ ಆಗಮನ

ಎಲ್ಲಿ ವೇದಪಾರಾಯಣ, ಪಠಣ ಆಗುತ್ತೋ ಅಲ್ಲಿ ಶಕ್ತಿ ಇರುತ್ತೆ. ಅದಕ್ಕೆ ಪೂರಕವೆಂಬಂತೆ ವೇದಪಾರಾಯಣ ಸಂದರ್ಭದಲ್ಲಿ ವರುಣನ ಆಗಮನವಾಗಿದ್ದು, ಶುಭ ಸಂಕೇತವಾಗಿದೆ. ಭಗವಂತನಿಗೆ ಆಡಂಬರ ಮುಖ್ಯವಲ್ಲ, ನಿಷ್ಕಲ್ಮಷ ಭಕ್ತಿ ಮುಖ್ಯ. ನಮ್ಮ ಭಕ್ತಿಗೆ ವರುಣದೇವ ಕೃಪೆ ತೋರಿದ್ದು, ೯ ವರ್ಷಗಳ ಬಳಿಕ ಜೀರ್ಣೋದ್ಧಾರ ಮಾಡಿದ್ದಕ್ಕೂ ಸಾರ್ಥಕತೆ ಕಂಡಿದೆ.

-ಜನಾರ್ದನಾಚಾರ್ಯ, ಪ್ರಧಾನ ಅರ್ಚಕಫೋಟೋ: 3 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಲಾಲ್‌ಬಾಗ್ ದಾಸರಹಳ್ಳಿಯಲ್ಲಿ ಸೀತಾರಾಮ, ಲಕ್ಷ್ಮೀವೆಂಕಟೇಶ್ವರ, ಶ್ರೀನಿವಾಸ, ಶ್ರೀಕೃಷ್ಣ, ಸಮೇತ ದ್ರೌಪತಾಂಭ ದೇವಿ ದೇವಾಲಯ ಜೀಣೋದ್ಧಾರ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.