ಪಾತಾಳಕ್ಕೆ ಕುಸಿದ ಪಪ್ಪಾಯಿ ಹಣ್ಣಿನ ಬೆಲೆ

KannadaprabhaNewsNetwork |  
Published : May 26, 2025, 12:24 AM IST
ಪೊಟೋ-ಲಕ್ಷ್ಮೇಶ್ವರದ ತೋಟವೊಂದರಲ್ಲಿ ಬೆಳೆದ ಪಪ್ಪಾಯಿ ಹಣ್ಣು. | Kannada Prabha

ಸಾರಾಂಶ

ರೈತರು ಬೆಳೆದ ಪಪ್ಪಾಯಿ ಹಣ್ಣಿನ ಬೆಲೆ ಈಗ ಪಾತಾಳಕ್ಕೆ ಮುಟ್ಟಿದ್ದು, ಪಪ್ಪಾಯಿ ಬೆಳೆದ ರೈತರು ಗೋಳು ಕೇಳುವವರಿಲ್ಲದಂತಾಗಿದೆ. ಬೇಸಿಗೆ ಬಿಸಿಲಲ್ಲಿ ಹೆಚ್ಚು ಬೇಡಿಕೆ ಇರುವ ಪಪ್ಪಾಯಿ ಹಣ್ಣಿನ ಬೆಲೆ ಈಗ ಪಾತಾಳಕ್ಕೆ ಕುಸಿಯಲು ಮುಂಗಾರು ಪೂರ್ವ ಮಳೆಗಳು ಕಾರಣವಾಗಿರುವವುದು ನೋವಿನ ಸಂಗತಿಯಾಗಿದೆ.

ಅಶೋಕ ಡಿ. ಸೊರಟೂರಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ರೈತರು ಬೆಳೆದ ಪಪ್ಪಾಯಿ ಹಣ್ಣಿನ ಬೆಲೆ ಈಗ ಪಾತಾಳಕ್ಕೆ ಮುಟ್ಟಿದ್ದು, ಪಪ್ಪಾಯಿ ಬೆಳೆದ ರೈತರು ಗೋಳು ಕೇಳುವವರಿಲ್ಲದಂತಾಗಿದೆ. ಬೇಸಿಗೆ ಬಿಸಿಲಲ್ಲಿ ಹೆಚ್ಚು ಬೇಡಿಕೆ ಇರುವ ಪಪ್ಪಾಯಿ ಹಣ್ಣಿನ ಬೆಲೆ ಈಗ ಪಾತಾಳಕ್ಕೆ ಕುಸಿಯಲು ಮುಂಗಾರು ಪೂರ್ವ ಮಳೆಗಳು ಕಾರಣವಾಗಿರುವವುದು ನೋವಿನ ಸಂಗತಿಯಾಗಿದೆ.

ಈ ವರ್ಷ ಮುಂಗಾರು ಪೂರ್ವ ಮಳೆಗಳು ರಾಜ್ಯಾದ್ಯಂತ ವಿಪರೀತವಾಗಿ ಸುರಿಯುತ್ತಿರುವುದರಿಂದ ಕೆಲ ರೈತರಿಗೆ ವರವಾಗಿ ಪರಿಣಿಮಿಸಿದರೆ ಇನ್ನೂ ಕೆಲ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಬೇಸಿಗೆ ಕಾಲದಲ್ಲಿ ಕಿಲೋಕ್ಕೆ ೧೦-೧೨ ರು. ಗಳಿಗೆ ಮಾರಾಟವಾಗುತ್ತಿದ್ದ ಪಪ್ಪಾಯಿ ಹಣ್ಣು ಮುಂಗಾರು ಮಳೆಗಳು ಆರಂಭವಾಗುತ್ತಿದ್ದಂತೆ ಹಣ್ಣಿನ ಬೆಲೆ ೩-೪ ರು.ಗಳಿಗೆ ಕುಸಿದಿದ್ದರಿಂದ ಮಾರಾಟಗಾರರು ಪಪ್ಪಾಯಿ ಬೆಳೆದ ತೋಟದ ಕಡೆಗೆ ಮುಖ ಮಾಡುತ್ತಿಲ್ಲ, ಹೀಗಾಗಿ ತೋಟದಲ್ಲಿ ಹಣ್ಣು ಕೊಳೆತು ಬೀಳುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ ಎಂಬುದು ರೈತರ ಅಳಲಾಗಿದೆ. ರೈತರಿಗೆ ಅಲ್ಪ ಮಟ್ಟಿನ ಆದಾಯ ತಂದುಕೊಡುತ್ತಿದ್ದ ಪಪ್ಪಾಯಿ ಹಣ್ಣಿನ ಕೃಷಿ ಈಗ ರೈತರ ಕೈ ಹಿಡಿಯುವಲ್ಲಿ ವಿಫಲವಾಗಿದೆ. ಖರ್ಚು ಮಾಡಿದ ಹಣ ಕೂಡಾ ವಾಪಸ್ ಬರದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರು. ಮಾರುಕಟ್ಟೆಯಲ್ಲಿ ಈಗ ಭರ್ಜರಿಯಾಗಿ ಮಾರಾಟವಾಗುತ್ತಿರುವ ಮಾವಿನ ಹಣ್ಣು ಪಪ್ಪಾಯಿ ಹಣ್ಣಿನ ಬೇಡಿಕೆ ಕುಸಿತಕ್ಕೆ ಕಾರಣ ಎನ್ನುವುದು ಇನ್ನೊಂದು ವಾದವಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ೬-೮ ಹೆಕ್ಟೇರ್ ಪ್ರದೇಶದಲ್ಲಿ ಪಪ್ಪಾಯಿ ಹಣ್ಣಿನ ಬೆಳೆ ಬೆಳೆಯಲಾಗಿದ್ದು ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಪಪ್ಪಾಯಿ ಹಣ್ಣಿಗೆ ಕಳೆದ ಬಾರಿ ಕೋವಿಡ್ ವೈರಸ್ ರೋಗ ಉಲ್ಬಣವಾಗಿದ್ದ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಪಪ್ಪಾಯಿ ಹಣ್ಣಿನಲ್ಲಿ ಕೋವಿಡ್ ರೋಗ ನಿರೋಧಕ ಶಕ್ತಿ ಇದೆ ಎನ್ನುವ ನಂಬಿಕೆ ಜನಸಾಮಾನ್ಯರಲ್ಲಿ ಇರುವುದರಿಂದ, ಪಪ್ಪಾಯಿ ಹಣ್ಣಿಗೆ ಈ ರೀತಿಯಾದರೂ ಪಪ್ಪಾಯಿ ಹಣ್ಣಿನ ಬೆಲೆ ಹೆಚ್ಚಾದಲ್ಲಿ ರೈತರಿಗೆ ವರದಾನವಾಗಬಹುದು. ಪಪ್ಪಾಯಿ ಹಣ್ಣನ್ನು ಸುಮಾರು ೨ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಲಕ್ಷಾಂತರ ರು.ಗಳ ವೆಚ್ಚ ಮಾಡಿ ಪಪ್ಪಾಯಿ ಸಸಿ ತಂದು ಕಳೆದ ವರ್ಷ ನಾಟಿ ಮಾಡಿದ್ದು. ಮೊದಲ ವರ್ಷ ಸುಮಾರು ೫೦ ಸಾವಿರ ಆದಾಯ ತಂದು ಕೊಟ್ಟಿದ್ದು, ಆದರೆ ಈ ವರ್ಷ ಮುಂಗಾರು ಪೂರ್ವ ಮಳೆ ಪಪ್ಪಾಯಿ ಹಣ್ಣಿನ ಬೇಡಿಕೆ ಕುಸಿಯುವಂತೆ ಮಾಡಿದೆ. ಹೀಗಾಗಿ ಪಪ್ಪಾಯಿ ಹಣ್ಣು ತೋಟದಲ್ಲಿ ಕೊಳೆತು ಹೋಗುತ್ತಿವೆ. ಮಾರಾಟಗಾರರು ತೋಟದ ಕಡೆಗೆ ಸುಳಿಯುತ್ತಿಲ್ಲ ರೈತ ಶಿವನಗೌಡ ಪಾಟೀಲ ಹೇಳಿದರು.

ಈ ವರ್ಷ ಪಪ್ಪಾಯಿ ಹಣ್ಣಿನ ಬೇಡಿಕೆ ಕುಸಿತ ಕಂಡಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. ಹೀಗೆ ಬೆಲೆ ಕುಸಿತವಾದ ವೇಳೆ ರೈತರು ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಅಥವಾ ಪಪ್ಪಾಯಿ ಹಣ್ಣಿನಿಂದ ಉಪ ಉತ್ಪನ್ನ ತಯಾರಿಸುವ ಕಂಪನಿಗಳ ಜೊತೆಯಲ್ಲಿ ಮೊದಲೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ರೈತರಿಗೆ ಆಗುವ ನಷ್ಟ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಲಕ್ಷ್ಮೇಶ್ವರ ತಾಲೂಕು ತೋಟಗಾರಿಕಾ ನಿರ್ದೇಶಕ ಮೊಹ್ಮದ್ ರಫೀಕ್ ತಾಂಬೋಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ