ಕನ್ನಡಪ್ರಭ ವಾರ್ತೆ ಹಾಸನ
ಛಾಯಾಗ್ರಾಹಕ ವೃತ್ತಿ ಎನ್ನುವುದು ಅತ್ಯಂತ ಶ್ರೇಷ್ಠವಾಗಿದ್ದು, ಪುರಾತನ ಕಾಲದ ನೆನಪುಗಳನ್ನು ಇಂದಿಗೂ ಪ್ರಸ್ತುತಪಡಿಸುವಲ್ಲಿ ಛಾಯಾಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದಶಕಗಳ ನೆನಪುಗಳನ್ನು ಒಂದು ಚಿತ್ರದ ಮೂಲಕ ನೆನಪಿಸುವ ಕಲೆ ಛಾಯಾಗ್ರಹಣ ದಿಂದ ಮಾತ್ರ ಸಾಧ್ಯ ಎಂದು ಶ್ಲಾಘಿಸಿದರು. ಇತ್ತೀಚಿನ ದಿನಗಳಲ್ಲಿ ಛಾಯಾಗ್ರಹಣ ಶುಭ ಸಮಾರಂಭಗಳಳು ಹಾಗೂ ಅಶುಭ ಸಮಯದ ವೇಳೆಯೂ ಅವರ ಪಾತ್ರ ಅಪಾರ. ವಿವಾಹ ಅಥವಾ ಇನ್ನಿತರ ಶುಭ ಕಾರ್ಯಗಳ ವೇಳೆ ಫೋಟೋಗ್ರಾಫರ್ ಬರುವುದು ತಡವಾದರೆ ಅವರ ಚಡಪಡಿಕೆ ಒಬ್ಬ ಛಾಯಾಗ್ರಾಹಕನ ಪ್ರಾಮುಖ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ, ತಮ್ಮ ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡುವ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಕರೆ ನೀಡಿದರು.
ಕರ್ನಾಟಕ ಛಾಯಾಗ್ರಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ನಾಗೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರು ನಿರಂತರವಾಗಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಕೋವಿಡ್ ನಂತರ ಸಾವಿನ ಸಂಖ್ಯೆ ಏರಿಕೆ ಆಗಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹಾಗೂ ವೃತ್ತಿ ಬದುಕಿನ ಒತ್ತಡ ಇದಕ್ಕೆಲ್ಲಾ ಕಾರಣ, ರಾಜಕಾರಣಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಅವರನ್ನು ಮುಂಚೂಣಿಯಲ್ಲಿ ಬಳಸಿಕೊಂಡು ಅವರ ಯೋಗಕ್ಷೇಮದ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಛಾಯಾಗ್ರಾಹಕ ವೃತ್ತಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ, ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ಛಾಯಾಗ್ರಾಹಕರಿದ್ದು, ಅವರ ಸಮಸ್ಯೆಗಳನ್ನು ಆಲಿಸುವಲ್ಲಿ ಅಳುವ ಸರ್ಕಾರಗಳು ವಿಫಲವಾಗಿವೆ. ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮ ಜೀವವನ್ನು ಒತ್ತೆ ಇಟ್ಟು ಚಿತ್ರಗಳನ್ನು ಸೆರೆ ಹಿಡಿಯುವ ಕೆಲಸ ಮಾಡುವ ಫೋಟೋಗ್ರಾಫರ್ಗಳ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸುವ ಕೆಲಸ ಮಾಡಬೇಕು ಎಂದರು.ಕಳೆದ ಅನೇಕ ವರ್ಷಗಳ ಹೋರಾಟದ ಫಲವಾಗಿ ಸಚಿವ ಸಂತೋಷ್ ಲಾಡ್ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆ ಅಡಿಯಲ್ಲಿ ಒಳಪಡಿಸಿ ಅವರು ಮೃತಪಟ್ಟರೆ ಸಹಾಯ ಧನ ನೀಡುವ ಮೂಲಕ ಉತ್ತಮ ಸಹಕಾರ ನೀಡಿದ್ದಾರೆ. ಆದರೆ ಛಾಯಾಗ್ರಾಹಕರು ಬದುಕಿದ್ದಾಗಲೇ ಅವರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಲಾಗಿದೆ. ಈಗಾಗಲೇ ಛಾಯಾಗ್ರಾಹಕರ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿಗೆ ೨೦೦ ಕೋಟಿ ಅನುದಾನ, ವಯಸ್ಸಾದ ಫೋಟೋಗ್ರಾಫರ್ಗಳಿಗೆ ಪೆನ್ಷನ್ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಕಲ್ಪಿಸುವ ಬಗ್ಗೆ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಜೊತೆಗೆ ಕರ್ನಾಟಕ ಛಾಯಾಗ್ರಾಹಕ ಅಕಾಡೆಮಿ ಸ್ಥಾಪಿಸಿ ಛಾಯಾಗ್ರಾಹಕರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು. ಪ್ರತಿ ಜಿಲ್ಲಾ, ತಾಲೂಕಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲವಾದರೆ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ರಾಜ್ಯ ಸಂಘ ಒಂದು ಯೋಜನೆ ರೂಪಿಸುತ್ತಿದೆ. ಇದಕ್ಕೆ ಎಲ್ಲರೂ ಸನ್ನದ್ಧರಾಗಬೇಕು. ಎಲ್ಲಾ ಜಿಲ್ಲೆಗಳಲ್ಲಿ ನಿವೇಶನ ಕೊಟ್ಟಿದ್ದಾರೆ, ಇಲ್ಲೂ ಕೂಡ ಗಮನಹರಿಸುವಂತೆ ನಗರಸಭೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು ಸೋಮನಹಳ್ಳಿ ಮಾತನಾಡಿ, ಸಂಘಟನೆಯಿಲ್ಲದೇ ಯಾವ ಸಂಘವು ಬೆಳೆಯಲು ಸಾಧ್ಯವೇ ಇಲ್ಲ. ಪ್ರಸ್ತುತದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಕೂಡ ಸಂಘಟನೆ ಇದ್ದು, ಛಾಯಾಗ್ರಾಹಕರ ಸೇವೆ ಮರೆಯಲು ಸಾಧ್ಯವೇ ಇಲ್ಲ. ಯಾವತ್ತೊ ನಡೆದ ಸನ್ನಿವೇಶಗಳನ್ನು ನೋಡುವ ಸೌಭಾಗ್ಯವನ್ನು ಕೊಟ್ಟಂತಹ ಯಾರಾದರೂ ಪುಣ್ಯವಂತರು ಇದ್ದರೇ ಅದು ಛಾಯಾಗ್ರಹಕರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಇದೆ ವೇಳೆ ಜಿಲ್ಲಾ ಛಾಯಾಗ್ರಹಕರ ಸಂಘದಿಂದ ಹೊರತಂದಿರುವ ನೂತನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು. ಕಸಾಪ ಆವರಣದಲ್ಲಿ ಛಾಯಾಗ್ರಹಕರಿಗೆ ಸಂಬಂಧಿಸಿದ ಮಳಿಗೆಯನ್ನು ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಛಾಯಾಗ್ರಹಕರ ಸಂಘದ ಅಧ್ಯಕ್ಷ ನಿಂಗರಾಜು (ಸ್ವಾಮಿ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬೊಮ್ಮೇಗೌಡ, ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಹಕರ ಸಂಘದ ಅಧ್ಯಕ್ಷ ಜಯಚಂದ್ರ, ಕರ್ನಾಟಕ ಛಾಯಗ್ರಹಕರ ಸಂಘದ ಕಾರ್ಯದರ್ಶಿ ಎ.ಎಂ. ಮುರುಳಿ, ಖಜಾಂಚಿ ವಿರೂಪಾಕ್ಷ, ಉಪಾಧ್ಯಕ್ಷ ಸತೀಶ್, ಸಹಕಾರ್ಯದರ್ಶಿ ಮಲ್ಲೇಶ್, ತಾಲೂಕು ಛಾಯಾಗ್ರಹಕರ ಸಂಘದ ಅಧ್ಯಕ್ಷ ಲೋಕೇಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಜಗದೀಶ್, ಅರಕಲಗೂಡು ತಾಲೂಕು ಅಧ್ಯಕ್ಷ ಜಿ.ಬಿ. ಗುರುಪ್ರಸನ್ನ, ಬೇಲೂರು ತಾಲೂಕು ಅಧ್ಯಕ್ಷ ರಾಘವೇಂದ್ರ ಹೊಳ್ಳ, ವಿನೋದ್, ಧರ್ಮಶೆಟ್ಟಿ ಇತರರು ಉಪಸ್ಥಿತರಿದ್ದರು. ಮಂಜುನಾಥ್ ಪ್ರಾರ್ಥಿಸಿದರು.