ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶ್ವಗುರು ಎಂದರೆ ಯಾರೆಂಬ ನನ್ನ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಸವಣ್ಣನವರೇ ನಿಜವಾದ ವಿಶ್ವಗುರು ಎಂದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದರು. ಇದರಲ್ಲಿ ಅವರ ಯೋಗದಾನ ಮಾತ್ರವಲ್ಲ, ಜೀವದಾನವೂ ಇದೆ ಎಂದರು.ಕೂಡಲಸಂಗಮದಲ್ಲಿ ಶನಿವಾರ ನಡೆದ ಶರಣಮೇಳದಲ್ಲಿ ಬಸವಾತ್ಮಜೆ ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜಕ್ಕಾಗಿ ಪ್ರಾಣ ತ್ಯಾಗ ಮಾಡಿದ ವಿಶ್ವಗುರು ಬಸವಣ್ಣನವರು ಓರ್ವ ಕ್ರಾಂತಿಕಾರಿ. ಅವರ ವಿಚಾರಧಾರೆಗಳನ್ನು ನಾವೆಲ್ಲ ಪಾಲಿಸಬೇಕಿದೆ. ಭಾರತ ಧ್ವಜದಲ್ಲಿ ಮೂರು ಬಣ್ಣಗಳಿದ್ದು, ಅವು ಸಮಾನತೆಯ ತತ್ವ ಸಾರುತ್ತವೆ. ಆದರೆ ಇಂದಿನ ದಿನಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಗಲಾಟೆಗಳು, ಹೆಣ್ಣಿನ ಮೇಲೆ ಅತ್ಯಾಚಾರ ಘಟನೆಗಳು ನಡೆಯುತ್ತಿವೆ. ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ದುರದೃಷ್ಟಕರ ಎಂದರು.
ವಿಶ್ವಗುರು ಬಸವಣ್ಣನವರು ಈಗ ಇದ್ದಿದ್ದರೆ ಅವರ ನೇತೃತ್ವದಲ್ಲಿ ದೊಡ್ಡ ಹೋರಾಟವೇ ರೂಪುಗೊಳ್ಳುತ್ತಿತ್ತು. ಇಂದು ಎಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ದೇಶ ಉಳಿಸಲು ಅಹಿಂಸಾ ಮಾರ್ಗದಿಂದಲೇ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.ಕೂಡಲಸಂಗಮದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮನೋಡಿ ಪುಣಿತಳಾದೆ, ಸಂಗಮದಲ್ಲಿಯೇ ಬಸವಣ್ಣನವರಿದ್ದಾರೆ. ಆಧುನಿಕತೆಯಿಂದಾಗಿ ನದಿಗಳು ಕಲುಷಿತಗೊಳ್ಳುತ್ತಿವೆ, ನರ್ಮದಾ ನದಿಯೂ ಕಲುಷಿತವಾಗಿದೆ, ಕಲುಷಿತವಾಗುತ್ತಿರುವ ನದಿಗಳನ್ನು ರಕ್ಷಿಸಬೇಕಿದೆ ಎಂದರು.
ಬಸವಣ್ಣನವರ ಸಮಾನತೆಯ ತತ್ವದ ಸಂದೇಶ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ನಾವೆಲ್ಲರೂ ಸಮಾನತೆಯಿಂದ ಬದುಕಬೇಕು. ದೇಹವೇ ದೇಗುಲ ಎನ್ನ ಕಾಲೆ ಕಂಬ ಎಂಬ ಬಸವಣ್ಣನವರ ವಚನವನ್ನು ಹಿಂದಿಯಲ್ಲಿ ಪಠಣ ಮಾಡಿದ ಮೇಧಾ ಪಾಟ್ಕರ್, ಜಾತಿ ನಿರ್ಮೂಲನೆ, ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ ಸೇರಿ ಹಲವು ವಿಚಾರಗಳನ್ನು ತಮ್ಮ ಭಾಷಣದುದ್ದಕ್ಕೂ ಹಂಚಿಕೊಂಡರು.