ಕಟ್ಟಡ ವಿನ್ಯಾಸಕರ ಹೊಣೆಗಾರಿಕೆ ದೊಡ್ಡದು: ತರಳಬಾಳು ಶ್ರೀ

KannadaprabhaNewsNetwork |  
Published : Aug 09, 2026, 01:30 AM IST
ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನ ವೀಕ್ಷಿಸಿದ ನಂತರ ವೇದಿಕೆ ಕಾರ್ಯಕ್ರಮವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆ ಕಟ್ಟುವವರ ಆಶೋತ್ತರ ಕನಸುಗಳನ್ನು ಈಡೇರಿಸುವಲ್ಲಿ ಆರ್ಕಿಟೆಕ್ಟ್‌ಗಳ ಜವಾಬ್ದಾರಿ ದೊಡ್ಡದು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆ ಕಟ್ಟುವವರ ಆಶೋತ್ತರ ಕನಸುಗಳನ್ನು ಈಡೇರಿಸುವಲ್ಲಿ ಆರ್ಕಿಟೆಕ್ಟ್‌ಗಳ ಜವಾಬ್ದಾರಿ ದೊಡ್ಡದು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ಸ್‌ ಮತ್ತು ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್ ವತಿಯಿಂದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸಿಡಿಪೇಸ್ ಡ್ರೀಮ್ಡ್ ಬಿಲ್ಡ್-೨೦೨೬ ಆಧುನಿಕ ತಂತ್ರಜ್ಞಾನದ ನಿರೀಕ್ಷೆಗೆ ನಿಮ್ಮ ಅಸೋಸಿಯೇಷನ್ ದಾಪುಗಾಲಿಡುತ್ತಿದೆ. ನೀವುಗಳು ಏರ್ಪಡಿಸಿರುವ ವಸ್ತು ಪ್ರದರ್ಶನವನ್ನು ನೋಡಿದರೆ ಪ್ರತಿಭೆಯಿದೆ ಎನ್ನುವುದು ಗೊತ್ತಾಗುತ್ತದೆ. ಹಳೆ ಕಾಲದ ಸ್ಮಾರಕಗಳು ಆಡಳಿತ ನಡೆಸಿದವರ ಕಣ್ಣ ಮುಂದಿಲ್ಲ. ಪ್ರಾಚೀನ ಭಾರತೀಯ ಪರಂಪರೆಯಲ್ಲಿ ವಾಸ್ತುಶಿಲ್ಪ ಗತಕಾಲದ ಇತಿಹಾಸದ ಸಂಕೇತವಾಗಿ ಉಳಿದುಕೊಂಡಿದೆ. ಆಧುನಿಕ ತಂತ್ರಜ್ಞಾನಕ್ಕೆ ನೀವುಗಳು ಅಪ್‌ಡೇಟ್ ಆಗಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.

ಆರ್ಕಿಟೆಕ್ಟ್ಗಳು ಎಳೆಯುವ ರೇಖೆಗಳು ಕಟ್ಟಡದ ರೂಪದಲ್ಲಿ ಮೈದಾಳುತ್ತವೆ. ಆಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಮನೆ ಕಟ್ಟುವವರ ಕನಸುಗಳಿಗೆ ಕೈಜೋಡಿಸಿ ಎಂದು ಇಂಜಿನಿಯರ್‌ಗಳಿಗೆ ತಿಳಿಸಿದರು.

ಮೂರು ಬಾರಿ ಚಳ್ಳಕೆರೆ ಶಾಸಕರಾಗಿರುವ ಟಿ.ರಘುಮೂರ್ತಿಗೆ ಸಚಿವರನ್ನಾಗಿ ಮಾಡಿ ಎಂದು ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ. ಅವರ ಅಭಿವೃದ್ದಿ ಕೆಲಸಗಳನ್ನು ಗುರುತಿಸಿ ರಾಜ್ಯ ಸರ್ಕಾರ ಮಂತ್ರಿ ಸ್ಥಾನ ನೀಡಿದೆ. ಅಪ್ಪರ್‌ಭದ್ರಾ, ಭರಮಸಾಗರ, ಜಗಳೂರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕುರಿತು ನೂತನ ಸಚಿವರ ಜೊತೆ ಚರ್ಚಿಸಿದ್ದೇನೆ. ಭರಮಸಾಗರದ ೪೩ ಕೆರೆಗಳಲ್ಲಿ ೪೦ ಕೆರೆಗಳಿಗೆ ನೀರು ಬರುತ್ತಿದೆ. ಇಂಜಿನಿಯರ್, ಕಂಟ್ರಾಕ್ಟರ್‌ಗಳು ನೀರಾವರಿ ಯೋಜನೆಯ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿದರೆ ನೀರು ಹರಿದು ಬರ ಪೀಡಿತ ಪ್ರದೇಶ ಚಿತ್ರದುರ್ಗ ಕ್ಷಾಮ ಎಂಬ ಹಣೆ ಪಟ್ಟಿಯಿಂದ ಹೊರ ಬರಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ೫೩೦೦ ಕೋಟಿ ರೂ.ಗಳಿಗೆ ಬದಲಿಗೆ ೬೨೦೦ ಕೋಟಿ ರೂ.ಗಳನ್ನು ಪಡೆಯಬೇಕು. ಬರದ ನಾಡು ಚಿತ್ರದುರ್ಗ ಭಗೀರಥ ನಾಡಾಗಬೇಕು. ಹಾಗಾಗಿ ನೀವುಗಳು ಆಧುನಿಕ ತಂತ್ರಜ್ಞಾನಕ್ಕೆ ದಾಪುಗಾಲಿಟ್ಟು ಯಶಸ್ವಿಯಾಗಿ ಎಂದು ಆರ್ಕಿಟೆಕ್ಟ್ಗಳಿಗೆ ಸ್ವಾಮೀಜಿ ಹರಸಿದರು.

ನೂತನ ಸಚಿವ ಟಿ.ರಘುಮೂರ್ತಿ ಮಾತನಾಡಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಸೂಚನೆಯಂತೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ನಾನು ಮೂರು ಬಾರಿ ಶಾಸಕನಾಗಲು ಎಂಜಿನಿಯರಿಂಗ್ ಪದವಿ ಪಡೆದಿರುವುದು ಒಂದು ಕಾರಣವಿರಬಹುದು. ಮನೆಗಳನ್ನು ಕಟ್ಟಿ ವಿನ್ಯಾಸಗೊಳಿಸುವ ಕೆಲಸವನ್ನು ಇಂಜಿನಿಯರ್‌ಗಳು ಮಾಡುತ್ತೀದ್ದೀರಿ. ಆಧುನಿಕ ವ್ಯವಸ್ಥೆಯಲ್ಲಿ ಇಂತಹ ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಮನೆಗಳನ್ನು ಕಟ್ಟುವವರಿಗೆ ಪ್ರಯೋಜನಕಾರಿಯಾಗಲಿದೆ. ಸಿವಿಲ್ ಇಂಜಿನಿಯರ್‌ಗಳ ಮೇಲೆ ಅತ್ಯಂತ ಜವಾಬ್ದಾರಿಯಿದೆ. ಯಾವುದೇ ಒಂದು ಕಟ್ಟಡ, ಡ್ಯಾಂ, ರಸ್ತೆಗಳು ಸುಭದ್ರವಾಗಿರಬೇಕಾದರೆ ನಿಮ್ಮಗಳ ಪಾತ್ರ ಮುಖ್ಯ ಎಂದು ತಿಳಿಸಿದರು.

೧೯೮೬ ರಲ್ಲಿ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿ ಹತ್ತು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದೇನೆ. ತದ ನಂತರ ರಾಜಿನಾಮೆ ನೀಡಿ ರಾಜಕೀಯ ಪ್ರವೇಶಿಸಿದೆ. ಇಂಜಿನಿಯರ್‌ಗಳಿಗೆ ಪರಿಶ್ರಮವಿರಬೇಕು. ಗುರಿ ಇದ್ದಾಗ ಮಾತ್ರ ಯಾವುದೇ ರಂಗದಲ್ಲಿಯಾಗಲಿ ಯಶಸ್ಸು ಗಳಿಸಬಹುದು. ಸಾಮಾಜಿಕ ಕಳಕಳಿಯಿಟ್ಟುಕೊಂಡು ಕೆಲಸ ಮಾಡಿ. ಕಲುಷಿತ ರಾಜಕಾರಣದಲ್ಲಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನನಗೆ ಉತ್ತಮ ಮಾರ್ಗದರ್ಶನ ನೀಡಿ ಪ್ರೇರಣೆಯಾಗಿದ್ದಾರೆಂದು ಸ್ಮರಿಸಿಕೊಂಡರು.

ಸಿಡಿಪೇಸ್‌ನ ಸಂಸ್ಥಾಪಕ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ೨೦೧೪ ರಲ್ಲಿ ಆರಂಭಗೊಂಡ ಸಿಡಿಪೇಸ್ ಮನೆ ಕಟ್ಟುವವರ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶವಿಟ್ಟುಕೊಂಡು ಕೆಲಸ ಮಾಡುತ್ತಿದೆ. ಇದು ನಮ್ಮ ಮೂರನೆ ವಸ್ತು ಪ್ರದರ್ಶನ. ಇಡಿ ರಾಜ್ಯದಲ್ಲಿಯೆ ಇಂತಹ ಅಸೋಸಿಯೇಷನ್ ಎಲ್ಲಿಯೂ ಇಲ್ಲವೆನ್ನುವುದು ಒಂದು ಹೆಗ್ಗಳಿಕೆ ಎಂದರು.

ಸಿಡಿಪೇಸ್ ಅಧ್ಯಕ್ಷ ಇಂಜಿನಿಯರ್ ಸಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಧವ್ ಎಂ.ಪೊಕಾಳೆ, ಎಸ್.ಕೆ.ಸ್ಟೀಲ್ ಮಾರಾಟ ಮುಖ್ಯಸ್ಥ ರಾಜೇಶ್, ಪ್ರದೀಪ್‌ಕುಮಾರ್, ಸಿಡಿಪೇಸ್‌ನ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು, ಎಂಜಿನಿಯರ್‌ಗಳು, ಮಾಧುರಿ ಗಿರೀಶ್, ಜಿ.ಬಿ.ಶೇಖರ್, ಮದೇಹಳ್ಳಿಯ ಶಂಕರಣ್ಣ ಹಾಜರಿದ್ದರು.

ಸವಿತಾ ದಿವಾಕರ್ ಪ್ರಾರ್ಥಿಸಿದರು. ಅರುಣ್‌ಕುಮಾರ್ ಸ್ವಾಗತಿಸಿದರು. ಎನ್.ಶಶಿಧರಗುಪ್ತ, ಉಮೇಶ್ ತುಪ್ಪದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಾಟಮ್‌...ಕುಡಿವ ನೀರಿನ ಕೊರತೆಯಾಗದಂತೆ ನಿಗಾವಹಿಸಿ: ಸಿದ್ದು ಪಾಟೀಲ್‌