ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವೆಂದು ಪರಿಗಣಿಸ್ಪಟಿರುವ ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಚುನಾವಣೆ ಮುಗಿದ ಬೆನ್ನಲ್ಲೆ ಒಂದು ಕಡೆ ಕಾಂಗ್ರೆಸ್-ಎನ್ಡಿಎ ಅಭ್ಯರ್ಥಿಗಳು ಹಾಗೂ ಮುಖಂಡರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಮತ್ತೊಂದು ಕಡೆ ಬೆಟ್ಟಿಂಗ್ ಭರಾಟೆಯೂ ಜೋರಾಗಿ ನಡೆದಿದೆ.
ಕಳೆದ ೨೦ದಿನಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿರುಬಿಸಿಲಿನಲ್ಲಿ ಬೆವರು ಸುರಿಸಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಇದೀಗ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಮತ್ತೊಂದು ಕಡೆ ಗೆಲ್ಲುವ ಕುದುರೆಯ ಮೇಲೆ ಬಾಜಿ ಕಟ್ಟಲು ಜೂಜುಕೋರರು ಕಾಯುತ್ತಿದ್ದಾರೆ.
ಲೆಕ್ಕಾಚಾರದಲ್ಲಿ ಮುಖಂಡರು: ಮತದಾನ ಮುಗಿದ ಮರುದಿನದಿಂದಲೇ ಉಭಯ ಪಕ್ಷಗಳ ಮುಖಂಡರು ತಮಗೆ ದೊರೆತಿರುವ ಮತಗಳ ಕುರಿತು ಲೆಕ್ಕಾಚಾರ ಆರಂಭಿಸಿದ್ದಾರೆ. ನಗರ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಮಗೆ ದೊರೆತಿರಬಹುದಾದ ಲೀಡ್ ಹಾಗೂ ಎದುರಾಳಿ ಅಭ್ಯರ್ಥಿ ಪಡೆದಿರಬಹುದಾದ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.ನಗರ ಪ್ರದೇಶದಲ್ಲಿ ಯಾವ ವಾರ್ಡ್ನಲ್ಲಿ ಯಾರಿಗೆ ಎಷ್ಟು ಲೀಡ್, ಗ್ರಾಮೀಣ ಭಾಗದಲ್ಲಿ ಯಾವ ಜಿಪಂ ವ್ಯಾಪ್ತಿಯಲ್ಲಿ ತಮ್ಮ ಪರ ಒಲವು ವ್ಯಕ್ತವಾಗಿಬಹುದು ಎಂಬ ಲೆಕ್ಕಾಚಾರೆ ನಡೆಸಿದ್ದು, ತಮ್ಮ ಮುಖಂಡರಿಗೆ ತಮ್ಮ ಲೆಕ್ಕಾಚಾರದ ವರದಿಯನ್ನು ಒಪ್ಪಿಸಿದ್ದಾರೆ.
ಬೆಟ್ಟಿಂಗ್ ಭರಾಟೆ: ಈ ಲೆಕ್ಕಾಚಾರನ್ನು ಆಧರಿಸಿ ಚನ್ನಪಟ್ಟಣದಲ್ಲಿ ಇದೀಗ ಬೆಟ್ಟಿಂಗ ಭರಾಟೆಯೂ ಜೋರಾಗಿ ನಡೆದಿದೆ. ಮತದಾನ ಮುಗಿದ ಬೆನ್ನಲ್ಲೆ ತಮ್ಮ ಫೇವರೇಟ್ ಅಭ್ಯರ್ಥಿ ಪರ ಬೆಟ್ಟಿಂಗ್ ಕಟ್ಟಲು ಹವ್ಯಾಸಿ ಜೂಜುಕೋರರು ಮುಂದಾಗಿದ್ದಾರೆ. ಕೆಲ ಹೋಟೆಲ್, ಟೀ ಅಂಗಡಿಗಳು ಬಾಜಿಕಟ್ಟೆಗಳಾಗಿ ಪರಿವರ್ತಿತವಾಗಿವೆ. ೫೦ ಸಾವಿರದಿಂದ ಐದು ಲಕ್ಷದವರೆಗೆ ಬಾಜಿ ಕಟ್ಟುತ್ತಿದ್ದು, ಫಲಿತಾಂಶದ ದಿನ ಹತ್ತಿರವಾದಂತೆ ಇದು ಇನ್ನು ತೀವ್ರಗೊಳ್ಳುವ ನಿರೀಕ್ಷೆ ಇದೆ.
ಲೀಡ್ಗೂ ಬಾಜಿ: ಅಭ್ಯರ್ಥಿಗಳ ಸೋಲು ಗೆಲುವಿಗೆ ಜತೆಗೆ ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರು ಲೀಡ್ ಪಡೆಯಲಿದ್ದಾರೆ. ನಗರದ ಯಾವ ವಾರ್ಡ್ನಲ್ಲಿ ಯಾರು ಲೀಡ್ ಪಡೆಯಲಿದ್ದಾರೆ ಎಂಬುದುರ ಕುರಿತು ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಎಲ್ಲರೂ ತಮ್ಮದೇ ಆದ ಲೆಕ್ಕಾಚಾರ ಆಧರಿಸಿ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ.
ಬಾಕ್ಸ್
ಚನ್ನಪಟ್ಟಣದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆದಿರುವ ಮಧ್ಯೆಯೇ ಗುರುವಾರ ಮಾಧ್ಯಮಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನೀಡಿದ ಹೇಳಿಕೆ ಸಾಕಷ್ಟು ಗೊಂದಲ ಮೂಡಿಸಿದೆ.
ಯೋಗೇಶ್ವರ್ ಹೇಳಿಕೆ ಬಾಜಿ ಕಟ್ಟುವವರಲ್ಲಿ ಗೊಂದಲ ಮೂಡಿಸಿದ್ದು, ಅಳೆದುತೂಗಿ ಬೆಟ್ಟಿಂಗ್ ಕಟ್ಟುವಂತೆ ಮಾಡಿದೆ.
ಸಾಂದರ್ಭಿಕ ಚಿತ್ರ.