ಹಿರಿಯ ನಾಗರೀಕರು, ಸಕ್ರಿಯ ಜೀವನಶೈಲಿ ಹೊಂದಿರುವವರಲ್ಲಿ ಕಂಡುಬರುವ ಮೊಣಕಾಲು, ಸೊಂಟ ಮತ್ತು ಭುಜದ ಕೀಲು ಸಮಸ್ಯೆಗೆ ಅತ್ಯಾಧುನಿಕ ರೋಬೋಟಿಕ್ ಹಾಗೂ ಮಿನಿಮಲಿ ಇನ್ವೇಸಿವ್ ಸರ್ಜರಿ (ಕೀ ಹೋಲ್ ಶಸ್ತ್ರಚಿಕಿತ್ಸೆ)ಗಳು ವರದಾನವಾಗಿವೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಮುಖ್ಯ ಶಾಖೆಯ ಮೂಳೆ ಮತ್ತು ಕೀಲು ರೋಬೋಟಿಕ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಲೋಕೇಶ್ ಎ. ವೀರಪ್ಪ ತಿಳಿಸಿದ್ದಾರೆ.
- ಕಡಿಮೆ ನೋವು, ವೇಗದ ಚೇತರಿಕೆಗೆ ರೋಬೋಟಿಕ್ ಸರ್ಜರಿ ಸಹಕಾರಿ: ಡಾ.ಲೋಕೇಶ ಎ. ವೀರಪ್ಪ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಹಿರಿಯ ನಾಗರೀಕರು, ಸಕ್ರಿಯ ಜೀವನಶೈಲಿ ಹೊಂದಿರುವವರಲ್ಲಿ ಕಂಡುಬರುವ ಮೊಣಕಾಲು, ಸೊಂಟ ಮತ್ತು ಭುಜದ ಕೀಲು ಸಮಸ್ಯೆಗೆ ಅತ್ಯಾಧುನಿಕ ರೋಬೋಟಿಕ್ ಹಾಗೂ ಮಿನಿಮಲಿ ಇನ್ವೇಸಿವ್ ಸರ್ಜರಿ (ಕೀ ಹೋಲ್ ಶಸ್ತ್ರಚಿಕಿತ್ಸೆ)ಗಳು ವರದಾನವಾಗಿವೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಮುಖ್ಯ ಶಾಖೆಯ ಮೂಳೆ ಮತ್ತು ಕೀಲು ರೋಬೋಟಿಕ್ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಲೋಕೇಶ್ ಎ. ವೀರಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯಕರ ವಯೋವೃದ್ಧತೆ, ಅಸ್ಥಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳ ಕುರಿತಂತೆ ರೋಬೋಟಿಕ್ ಶಸ್ತ್ರಚಿಕಿತ್ಸೆ ಬಾಧಿತರಿಗೆ ವರದಾನವಾಗಿದೆ. ಕೀಲು ಬದಲಿ ಶಸ್ತ್ರಚಿಕಿತ್ಸೆಗಳಲ್ಲಿ ರೋಬೋಟಿಕ್ ತಂತ್ರಜ್ಞಾನ ಅತ್ಯಂತ ನಿಖರ ಇಂಪ್ಲಾಂಟ್ ಅಳವಡಿಕೆಗೆ ಸಹಕಾರಿಯಾಗಿದೆ ಎಂದರು.
ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕನಿಷ್ಠ ನೋವು ಹಾಗೂ ಅತ್ಯಂತ ವೇಗದ ಚೇತರಿಕೆ ಸಾಧ್ಯವಾಗಲಿದೆ. ಭುಜದ ಕೀಲುಸರಿತ, ಮಾಂಸಖಂಡಗಳ ಗಾಯ ಹಾಗೂ ಭುಜದ ಬಿಗಿತದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯದಿದ್ದರೆ ದೈನಂದಿನ ಚಟುವಟಿಕೆಗೆ ಪರಿಣಾಮ ಬೀರುತ್ತದೆ. ಇದಕ್ಕೆ ಮಿನಿಮಲಿ ಇನ್ವೇಸಿವ್ ಚಿಕಿತ್ಸೆ ನೀಡಲಾಗುತ್ತಿದೆ. ಇದು ರೋಗಿಗಳು ಶೀಘ್ರವಾಗಿ ದೈನಂದಿನ ಚಟುವಟಿಕೆಗಳಿಗೆ ಮರಳಲು ನೆರವಾಗುತ್ತಿದೆ ಎಂದು ಹೇಳಿದರು.
ಪೆಲ್ವಿಕ್ ಟ್ರಾಮಾ, ಕಪ್ ಅಂಡ್ ಬಾಲ್, ಜಾಯಿಂಟ್ ಪ್ರೊಸೀಜರ್ ಹಾಗೂ ಮೊಣಕಾಲು, ಹಿಮ್ಮಡಿಗೆ ಸಂಬಂಧಿಸಿದ ಕೀ ಹೋಲ್ ಸರ್ಜರಿಗಳ ಮೂಲಕ ರೋಗಿಗಳ ಚಲನವಲನ ಪುನಃ ಸ್ಥಾಪಿಸಲಾಗುತ್ತಿದೆ. ಇಂದಿನ ರೋಗಿಗಳು ಕೇವಲ ನೋವು ನಿವಾರಣೆಯನ್ನಷ್ಟೇ ಬಯಸದೇ ಸ್ವತಂತ್ರವಾಗಿ ನಡೆಯಲು, ಸಕ್ರಿಯ ಜೀವನ ನಡೆಸಲಿಚ್ಛಿಸುತ್ತಾರೆ. ರೋಗಿಗಳಿಗೆ ಆತ್ಮವಿಶ್ವಾಸ ಮತ್ತು ಸುಖಕರ ವಯೋವೃದ್ಧತೆ ನೀಡುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಮಧ್ಯ ಕರ್ನಾಟಕ ಹಾಗೂ ದಾವಣಗೆರೆ ಭಾಗದ ಜನರು ಅತ್ಯಾಧುನಿಕ ಜಾಯಿಂಟ್ ಕೇರ್ ಚಿಕಿತ್ಸೆಗಳಿಗಾಗಿ ನಿರಂತರವಾಗಿ ಮಣಿಪಾಲ್ ಆಸ್ಪತ್ರೆ ನೆಚ್ಚಿಕೊಂಡಿದ್ದಾರೆ. ಈ ಭಾಗದ ರೋಗಿಗಳಿಗೆ ರೋಬೋಟಿಕ್ ನೆರವಿನ ಚಿಕಿತ್ಸೆಗಳು ಮತ್ತು ವಿಶೇಷ ಪುನಶ್ವೇತನ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ತಲುಪಿಸಲು ಆಸ್ಪತ್ರೆ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಇಲ್ಲಿ ಶಿಬಿರವನ್ನು ಆಯೋಜಿಸುವ ಬಗ್ಗೆಯೂ ಆಲೋಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಡಾ.ಲೋಕೇಶ ಎ.ವೀರಪ್ಪ ಪ್ರತಿಕ್ರಿಯಿಸಿದರು.
- - -
-20ಕೆಡಿವಿಜಿ2: ದಾವಣಗೆರೆಯಲ್ಲಿ ಬುಧವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕೀಲು ಮತ್ತು ಮೂಳೆ ರೋಬೋಟಿಕ್ ಜಾಯಿಂಟ್ ರೀಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಲೋಕೇಶ ಎ. ವೀರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.