ದಾಬಸ್ಪೇಟೆ: ಯಶೋಧೆಯು ಶ್ರೀಕೃಷ್ಣನನ್ನು ಹೇಗೆ ಬೆಳೆಸುತ್ತಾಳೆಯೋ, ಅದರಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ನಾಗರತ್ನಮ್ಮ ಅವರ ಸೇವೆ ಅನನ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗೇಶ್ ತಿಳಿಸಿದರು.
ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೇದಾವತಿ ಮಾತನಾಡಿ, ಅಂಗನವಾಡಿಗಳು ಮಕ್ಕಳ ಭವಿಷ್ಯ ನಿರ್ಧರಿಸುವ ಕೇಂದ್ರಗಳಾಗಿವೆ. ನಿವೃತ್ತಿ ಹೊಂದಿದ ನಾಗರತ್ನಮ್ಮನವರು 40 ವರ್ಷ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಾರೆ. ಅವರು ನಡೆದು ಬಂದ ದಾರಿ ಇತರರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ಮಾತನಾಡಿ, ಸರ್ಕಾರ ನೀಡುವ ಗೌರವ ಧನದಿಂದ ಇಷ್ಟು ವರ್ಷಗಳ ಕಾಲ ಸಂತೃಪ್ತಿಯಾಗಿ ಸೇವೆ ಸಲ್ಲಿಸಿದ್ದೇನೆ. ನಮ್ಮ ಕಷ್ಟ- ಸುಖಗಳಿಗೆ ನಮ್ಮ ಇಲಾಖೆ, ನನ್ನ ಸಹೋದ್ಯೋಗಿಗಳು ಸ್ಪಂದಿಸಿದ್ದು, ಅವರಿಗೆಲ್ಲಾ ಚಿರಋಣಿಯಾಗಿದ್ದೇನೆ ಎಂದರು.ಇಲಾಖೆಯ ಮೇಲ್ವಿಚಾರಕಿ ವಿಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಸುಜಾತ, ಮಾರಗೊಂಡನಹಳ್ಳಿ ವೃತ್ತದ ಶರಾವತಿ, ಸ್ತ್ರೀಶಕ್ತಿ ಒಕ್ಕೂಟದ ಕಮಲ, ಶಿವಗಂಗೆ ವೃತ್ತದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.