ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣ ಹೊರವಲಯದ ಹುದ್ದಾರ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಉಚಿತ ದೊರಕಬೇಕಾದ ಶಿಕ್ಷಣ ಇಂದು ದುಬಾರಿಯಾಗುತ್ತಿದೆ. ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಅತ್ಯಂತ ಕಡಿಮೆ ದರದಲ್ಲಿ ಒಳ್ಳೆಯ ಶಿಕ್ಷಣ ಒದಗಿಸುತ್ತಿರುವ ಹುದ್ದಾರ ಶಿಕ್ಷಣ ಸಂಸ್ಥೆಯ ಕಾಯಕ ಶ್ಲಾಘನೀಯ ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾವಿದನಾಗಿ ವಿಜಯ ಹುದ್ದಾರ ಕಳೆದ 20 ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಸಾವಿರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ. ಕಟ್ಟಡಕ್ಕೆ ನಾನು ಸಹಕಾರ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಸಂಸ್ಥೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ, ಅನಾಥ ಮಕ್ಕಳಿಗೆ ಶಿಕ್ಷಣ, ಅನ್ನದಾಸೋಹ ಮತ್ತು ಆಶ್ರಯ ವ್ಯವಸ್ಥೆ ಮಾಡಿರುವ ಹುದ್ದಾರ ಶಿಕ್ಷಣ ಸಂಸ್ಥೆಯ ಕಾರ್ಯ ಮೆಚ್ಚುವಂತದ್ದು. ಎರಡು ದಶಕಗಳಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣ ಒದಗಿಸಿರುವ ಈ ಸಂಸ್ಥೆ ಇಂದು ಆಧುನಿಕ ಪದ್ಧತಿಯ ಶಿಕ್ಷಣ ಮತ್ತು ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಕ್ಷೇತ್ರದ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ಮತ್ತು ನಾನು ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿಯ ಸದಸ್ಯನಂತೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.ಪುರಸಭೆ ಸದಸ್ಯ ರಾವಸಾಬ ಐಹೊಳೆ, ರೈತ ಸಂಘದ ಅಧ್ಯಕ್ಷ ಮಹದೇವ ಮಡಿವಾಳ, ಉದ್ಯಮಿ ರವಿ ಪೂಜಾರಿ, ಮುಖಂಡ ಗಿರೀಶ ಬುಟಾಳಿ ಮಾತನಾಡಿದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ, ಅಮೋಘಸಿದ್ದ ಸ್ವಾಮೀಜಿ, ವಿಠಲ ಮಹಾರಾಜರು ಆಶೀರ್ವಚನ ನೀಡಿದರು.