ಕೆ.ಆರ್.ಪೇಟೆ: ಸಂಸ್ಕಾರವಂತ ಸಮಾಜ ನಿರ್ಮಾಣದಲ್ಲಿ ಗುರು ಹಿರಿಯರ ಪಾತ್ರವು ಮಹತ್ತರವಾಗಿದೆ. ಧರ್ಮವು ಕೂಡಾ ಎಷ್ಟೇ ವಿರೋಧಾಭಾಸಗಳಿರಲಿ, ತನ್ನ ನೆಲೆಯನ್ನು ಬಿಟ್ಟು ಕೊಡದೆ ಮುಂದೆ ಸಾಗುತ್ತಿದೆ ಎಂದು ಹಾಸನ ಜಿಲ್ಲೆ ಅರಸಿಕೆರೆ ಕೋಡಿ ಮಠದ ಶ್ರೀ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ನಾವು ಧರ್ಮದ ಬಗೆಗೆ ಎಂತಹ ಕಟು ಶಬ್ಧಗಳನ್ನಾಡಿದರೂ ಕೂಡಾ ಅದು ನೀರಿನಲ್ಲಿ ಮಂಜು ಕರಗುವ ಹಾಗೆ ಕರಗಿ ಹೋಗುತ್ತದೆ ಎಂದರು.
ಜನರು ಇಂದು ನೆಮ್ಮದಿಯನ್ನು ಅರಸುತ್ತಿದ್ದಾರೆ. ಆದರೆ, ನೆಮ್ಮದಿಯನ್ನು ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲ. ದೇವರ ಸಾಕ್ಷಾತ್ಕಾರದಿಂದ ನೆಮ್ಮದಿ ಕಾಣಬಹುದು. ಆದ್ದರಿಂದಲೇ ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಿಗೆ ಹೆಚ್ಚು ಮಹತ್ವ ಕೊಟ್ಟಿದ್ದು. ಇಂತಹ ಶುಭ ಸಂದರ್ಭಗಳಲ್ಲಿ ಎಲ್ಲಾ ಧರ್ಮೀಯರು ಕೂಡಾ ಒಂದೆಡೆ ಸೇರಿ ಆಚರಿಸುವುದರಿಂದ ರಥೋತ್ಸವಗಳಂತಹ ಪುಣ್ಯ ಕಾರ್ಯಗಳಲ್ಲಿ ಫಲ ಸಿಗುತ್ತದೆ ಎಂದು ಕೋಡಿ ಶ್ರೀಗಳು ಹೇಳಿದರು.ಧಾರ್ಮಿಕ ಸಭೆ ನಂತರ ಶ್ರೀಗಳನ್ನು ರಥೋತ್ಸವದ ಜೊತೆಯಲ್ಲಿಯೇ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಪಲ್ಲಕ್ಕಿಯ ಜೊತೆಯಲ್ಲಿ ಸಾಗಿದರು. ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಹರಿಹರಪುರ ಹಾಗೂ ಕುರ್ನೇನಹಳ್ಳಿ ಗ್ರಾಮಸ್ಥರು ಮಜ್ಜಿಗೆ ಹಾಗೂ ಪಾನಕದ ವ್ಯವಸ್ಥೆ ಮಾಡಿದ್ದರು. ಹರಿಹರಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ರಥವು ಕುರ್ನೇನಹಳ್ಳಿ ಬಳಿಯಲ್ಲಿ ನಿಂತು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿತ್ತು. ಗ್ರಾಮದ ಕೆಲವು ಭಕ್ತರ ಮನೆಗೆ ತೆರಳಿದ ಕೋಡಿ ಶ್ರೀಗಳು ಪಾದಪೂಜೆ ಮಾಡಿಸಿಕೊಂಡು ಆಶೀರ್ವದಿಸಿದರು.