ಶಿವಮೊಗ್ಗ: ಮಕ್ಕಳ ಕಲಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕರ್ತವ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತಿ ಮುಖ್ಯ, ಪ್ರಾತ್ಯಕ್ಷಿಕೆಯ ದೈಹಿಕ ಶ್ರಮದಿಂದ ಹಾಗೂ ದೈಹಿಕ ಕಸರತ್ತುಗಳಿಂದ ಮಕ್ಕಳ ಮನೋವಿಜ್ಞಾನ ವೃದ್ಧಿಸಲು ಹೇಗೆ ಸಾಧ್ಯವೋ ಅದರಲ್ಲಿ ಸಕ್ರಿಯರಾಗುವ ದೈಹಿಕ ಶಿಕ್ಷಕರ ಪಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಅತಿ ಮುಖ್ಯ ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದರು.ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ತಾಲೂಕಿನ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ನಡೆದ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ದೈಹಿಕ ಶ್ರಮದ ಜೊತೆ ಮನೋವಿಜ್ಞಾನದ ಭಾವನೆಗಳನ್ನು ವೃದ್ಧಿಸಿ ಮಾನಸಿಕವಾದ ಸ್ಥಿತಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಮಕ್ಕಳ ಕಲಿಕೆಗೆ ಭದ್ರಬುನಾದಿ ಹಾಕಿ ಕೊಡುವ ಏಕಾಗ್ರತೆಯನ್ನು ಇಲ್ಲಿ ಕಲಿಯಲು, ರೂಪಿಸಿಕೊಳ್ಳಲು ಸಾಧ್ಯ. ದೈಹಿಕ ಶಿಕ್ಷಕರು ಈ ಬಗ್ಗೆ ಅತ್ಯಂತ ವಿಶೇಷವಾಗಿ ಗಮನಿಸಬೇಕು ತಮ್ಮನ್ನು ಮಕ್ಕಳು ಅತ್ಯಂತ ಸೂಕ್ಷ್ಮವಾಗಿ ಗುರುತಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಮಾರ್ಗದರ್ಶಿಗಳಾಬೇಕು ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎಂ.ಪ್ರಕಾಶ ಮಾತನಾಡಿ, ಆರೋಗ್ಯ, ಸ್ವಚ್ಛತೆ ಜೊತೆಗೆ ಶಿಸ್ತು ಹೇಳಿಕೊಡುವ ಜವಾಬ್ದಾರಿ ದೈಹಿಕ ಶಿಕ್ಷಕರ ಕರ್ತವ್ಯ ಆಗಿದೆ. ಮಕ್ಕಳ ಮನದಲ್ಲಿ ಸಂಸ್ಕಾರಯುತ ಭಾವನೆಗಳನ್ನು ರೂಪಿಸಿ, ಅವುಗಳನ್ನು ಕಾರ್ಯಗತಕ್ಕೆ ತರುವಂತೆ ಮಾಡುವ ಹೊಣೆಗಾರಿಕೆಯು ಶಿಕ್ಷರದ್ದು ಎಂದು ಹೇಳಿದರು.ಕಾರ್ಯಾಗಾರದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ಎಂ.ದೈಹಿಕ ಶಿಕ್ಷಣ ಅಧಿಕಾರಿ, ಬಿ.ಎಚ್.ನಿರಂಜನ್ ಮೂರ್ತಿ. ಶಿಕ್ಷಣ ಸಂಯೋಜಕರಾದ ಮೋಹನ್, ಸಂಪನ್ಮೂಲ ವ್ಯಕ್ತಿಗಳಾದ ಕಿರಣ್ ಕುಮಾರ್, ಸಂಘದ ಅಧ್ಯಕ್ಷ ಕಾಳನಾಯ್ಕ್,, ಆನಂದ್, ಕಾರ್ಯದರ್ಶಿ ತಿಮ್ಮಪ್ಪ ಮಹೇಶ್ ಹುಲ್ಲತ್ತಿ, ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮನಹಳ್ಳಿ ಮತ್ತಿತರರಿದ್ದರು.